ADVERTISEMENT

ಮಡಿಕೇರಿ: ಮುಂದಿನ ವರ್ಷ ವೈದ್ಯಕೀಯ ಕಾಲೇಜು ದಸರೆಯಲ್ಲಿ ಭಾಗಿ

ಮಡಿಕೇರಿ ವೈದ್ಯಕೀಯ ವಿಜ್ಞಾನ ಕಾಲೇಜಿನ ಡೀನ್ ಡಾ.ಕಾರ್ಯಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 12:48 IST
Last Updated 30 ಸೆಪ್ಟೆಂಬರ್ 2022, 12:48 IST
ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ಕಲಾವಿದರು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಗುರುವಾರ ನೃತ್ಯ ಪ್ರದರ್ಶಿಸಿದರು
ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ಕಲಾವಿದರು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಗುರುವಾರ ನೃತ್ಯ ಪ್ರದರ್ಶಿಸಿದರು   

ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ಮಡಿಕೇರಿ ನಗರ ದಸರಾ ಸಮಿತಿ ಏರ್ಪಡಿಸಿರುವ ಮಡಿಕೇರಿ ದಸರಾ ಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು 3ನೇ ದಿನವಾದ ಗುರುವಾರ ಸಭಿಕರಿಗೆ ಭರಪೂರ ಮನರಂಜನೆ ಒದಗಿಸಿದವು.

ಇದಕ್ಕೂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ವೈದ್ಯಕೀಯ ವಿಜ್ಞಾನ ಕಾಲೇಜಿನ ಡೀನ್ ಮತ್ತು ನಿರ್ದೇಶಕ ಡಾ.ಕಾರ್ಯಪ್ಪ, ‘ಮುಂದಿನ ವರ್ಷ ದಸರೆ ಸಂಭ್ರಮದಲ್ಲಿ ಕಾಲೇಜೂಭಾಗಿಯಾಗಲಿದೆ’ ಎಂದರು.

ಕಾಲೇಜಿನಲ್ಲಿರುವ ವಿವಿಧ ಬಗೆಯ ಸೌಲಭ್ಯಗಳು, ಆಸ್ಪತ್ರೆಯಲ್ಲಿ ರೋಗಿಗಳಿಗೆ ದೊರಕುವ ಅತ್ಯಾಧುನಿಕ ಚಿಕಿತ್ಸೆ ಸೇರಿದಂತೆ ಹಲವು ಬಗೆಯ ವಸ್ತುಪ್ರದರ್ಶನ ಏರ್ಪಡಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ಮಾಹಿತಿ ದೊರಕಿ ಅವರು ಅನಾರೋಗ್ಯಪೀಡಿತರಾದರೆ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.

ADVERTISEMENT

ಮುಡಾದ ಮಾಜಿ ಅಧ್ಯಕ್ಷರಾದ ಚುಮ್ಮಿ ದೇವಯ್ಯ ಮಾತನಾಡಿ, ‘ಗಾಂಧಿ ಮೈದಾನದಲ್ಲಿ ಸೊಗಸಾದ ಮಂಟಪ ನಿರ್ಮಾಣವಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಪುಂಡರು, ಸೋಮಾರಿಗಳು, ಜಾನುವಾರುಗಳ ತಾಣವಾಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದವರು ಪ್ರಸ್ತುತಪಡಿಸಿದ ‘ಸಂಗೀತ ನೃತ್ಯ ವೈವಿಧ್ಯ’ವು ನೋಡುಗರನ್ನು ಬಹುವಾಗಿ ಸೆಳೆಯಿತು. ಮಡಿಕೇರಿಯ ಡ್ಯಾನ್ಸ್ ಲ್ಯಾಬ್ ಅಂಡ್ ಫಿಟ್‌ನೆಸ್‌ ಸ್ಟುಡಿಯೊ ಹಾಗೂ ಆವಂದೂರಿನ ಇಂಚರಾ ಕಲಾ ತಂಡದವರ ‘ನೃತ್ಯ’, ಕುಶಾಲನಗರದ ಸಂವೇದಿತಾ ಅವರ ಗೀತಗಾಯನ, ಕೊಡಗು ಪತ್ರಕರ್ತರ ಸಂಘದ ‘ಗಾನ ವೈವಿಧ್ಯ’, ಕೂರ್ಗ್ ಹನಿ ಮೆಲೊಡಿಸ್ ತಾತಂಡ ಪ್ರತಾಪ್ ಬೆಳ್ಯಪ್ಪ ಮತ್ತು ಸಂಗಡಿಗರ ‘ಸಂಗೀತ ರಸಮಂಜರಿ’ಗಳು ಸಭಿಕರನ್ನು ಸೂಜಿಗಲ್ಲಿನಂತೆ ಸೆಳದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.