ಮಡಿಕೇರಿ: ಇಲ್ಲಿನ ಮೈತ್ರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಉಚಿತ ಆರೋಗ್ಯ ತಪಾಸಣೆಯಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ತಪಾಸಣೆಗೆ ಒಳಗಾದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಸಮುದಾಯ ವೈದ್ಯವಿಜ್ಞಾನ ವಿಭಾಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಭಾರತೀಯ ರೆಡ್ಕ್ರಾಸ್ ವತಿಯಿಂದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಇಲ್ಲಿ ನಡೆಯಿತು.
ರಾಷ್ಟ್ರೀಯ ವೈದ್ಯಕೀಯ ಆಯೋಗದ ಶಿಫಾರಸ್ಸಿನಂತೆ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ರೋಗರುಜಿನಗಳ ತಡೆಗಟ್ಟುವಿಕೆ ಕುರಿತು ಅರಿವು ಮೂಡಿಸಲು ಹಾಕಿಕೊಂಡಿದ್ದ ಕುಟುಂಬ ದತ್ತು ಕಾರ್ಯಕ್ರಮದಡಿ ಈ ಶಿಬಿರ ನಡೆದಿದ್ದು, ಇದರಲ್ಲಿ ಸಾಮಾನ್ಯ ವೈದ್ಯವಿಜ್ಞಾನ, ಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ, ಮಕ್ಕಳ ವಿಭಾಗ, ಚರ್ಮ ವಿಭಾಗ, ಕಿವಿ, ಮೂಗು ಮತ್ತು ಗಂಟಲು ವಿಭಾಗ, ಮೂಳೆ ಮತ್ತು ಕೀಲು, ಸಮುದಾಯದ ವೈದ್ಯಕೀಯ ವಿಭಾಗದ ನುರಿತು ತಜ್ಞರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು.
ಭಾರತೀಯ ರೆಡ್ಕ್ರಾಸ್ನ ಸಭಾಪತಿ ಬಿ.ಕೆ.ರವೀಂದ್ರ ರೈ, ಕಾರ್ಯದರ್ಶಿ ಮುರಳೀಧರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಂಜುಂಡಯ್ಯ, ಸಮುದಾಯ ವೈದ್ಯವಿಜ್ಞಾನದ ಮುಖ್ಯಸ್ಥ ಡಾ.ರಾಮಚಂದ್ರಕಾಮತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.