ADVERTISEMENT

ಮನೆ ನಿರ್ಮಾಣಕ್ಕೆ ಮಾತ್ರ ಭೂಪರಿವರ್ತನೆ

ಸರ್ಕಾರ ಆದೇಶ: ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 9 ಮೇ 2019, 13:46 IST
Last Updated 9 ಮೇ 2019, 13:46 IST

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭೂಪರಿವರ್ತನೆಗೆ ಅವಕಾಶ ನೀಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಭಾರಿ ಮಳೆ ಹಾಗೂ ಪ್ರಾಕೃತಿಕ ವಿಕೋಪದ ನಂತರ ಭೂಪರಿವರ್ತನೆ ಸ್ಥಗಿತಗೊಳಿಸಲಾಗಿತ್ತು.

ಕೃಷಿ ಜಮೀನಿನನ್ನು ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆ ಮಾಡುವ ಪ್ರಕ್ರಿಯೆ ಸ್ಥಗಿತ ಮಾಡಿದ್ದರ ಪರಿಣಾಮವಾಗಿ ಸಾರ್ವಜನಿಕರು ತೊಂದರೆಗೆ ಸಿಲುಕಿದ್ದರು. ಮನೆ ನಿರ್ಮಾಣಕ್ಕಾದರೂ ನಿಯಮ ಸಡಿಲಿಕೆ ಮಾಡುವಂತೆ ಸಾರ್ವಜನಿಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈಗ ಸರ್ಕಾರವು ಮನೆ ನಿರ್ಮಾಣದ ಉದ್ದೇಶಕ್ಕೆ ಅವಕಾಶ ನೀಡಿದೆ.

ವಾಸ್ತವ್ಯದ ಉದ್ದೇಶಕ್ಕೆ ಮನೆ ನಿರ್ಮಾಣ ಮಾಡುವವರಿಗೆ 15ರಿಂದ 20 ಸೆಂಟ್ಸ್‌ ಪ್ರದೇಶಕ್ಕೆ ಸೀಮಿತಗೊಳಿಸಿ ತಹಶೀಲ್ದಾರ್‌ ಹಾಗೂ ಉಪ ವಿಭಾಗಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಭೂಪರಿವರ್ತನೆ ಮಾಡಬಹುದು ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದ್ದಾರೆ.

ADVERTISEMENT

ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಅವರು ನೀಡಿರುವ ವರದಿಯಲ್ಲಿನ ಅಂಶದಂತೆ ಕಟ್ಟಡಗಳ ರಚನೆ ಸಂಬಂಧ ಅಸ್ಥಿರ ಪ್ರದೇಶದಲ್ಲಿ ಭೂಪರಿವರ್ತನೆಗೆ ಅವಕಾಶ ಇಲ್ಲ. ನದಿ, ಹಳ್ಳಗಳಿಂದ 10 ಮೀಟರ್‌ ದೂರದಲ್ಲಿ ಮನೆ ನಿರ್ಮಿಸಬೇಕು. ತೀವ್ರತರವಾದ ಇಳಿಜಾರು, ಕಣಿವೆ ಪ್ರದೇಶಗಳಲ್ಲಿ ಮನೆ ನಿರ್ಮಾಣ ಅತ್ಯಂತ ಅಪಾಯಕಾರಿ. ಅಲ್ಲಿ ಭೂಪರಿವರ್ತನೆ ಮಾಡಬಾರದು. 2018ರ ಮಳೆಗಾಲದಲ್ಲಿ ಅನಾಹುತವಾದ ಸ್ಥಳದಲ್ಲಿ ಮನೆ ನಿರ್ಮಾಣ ಅಪಾಯಕಾರಿ ಆಗಿದ್ದು, ಅಂತಹ ಸ್ಥಳವನ್ನು ಪರಿಗಣಿಸಬಾರದು. ಸರ್ಕಾರದಿಂದ ಈ ಆದೇಶದಿಂದ ಮನೆಯಿಲ್ಲದವರು ಸ್ವಂತ ಸೂರು ಹೊಂದಲು ಅನುಕೂಲ ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.