ಮಡಿಕೇರಿ: ಕೊಡಗು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವೊಂದು ಸದ್ದಿಲ್ಲದೇ ಆರಂಭವಾಗಿದೆ. ‘ಟ್ವಿಟರ್ ಖಾತೆ’ ಮೂಲಕ ಸರ್ಕಾರವನ್ನು ಎಚ್ಚರಿಸುವ ‘ಅಭಿಯಾನ’ಕ್ಕೆ ಬುಧವಾರ ಚಾಲನೆ ಸಿಕ್ಕಿದೆ.
ಇದಕ್ಕಾಗಿ ಬುಧವಾರ ಸಂಜೆ 6 ಗಂಟೆಯ ನಂತರ ‘ವಿ ನೀಡ್ ಎಮರ್ಜೆನ್ಸಿ ಹಾಸ್ಪಿಟಲ್ ಇನ್ ಕೊಡಗು’ ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುವ ಕೆಲಸ ನಡೆಯುತ್ತಿದೆ. ಅದಕ್ಕೆ ನೂರಾರು ಮಂದಿ ಕೈಜೋಡಿಸಿದ್ದಾರೆ.
ಈ ಅಭಿಯಾನಕ್ಕೆ ಜಿಲ್ಲೆಯಲ್ಲಿ ಯುವ ಸಮೂಹ ದೊಡ್ಡ ಸಂಖ್ಯೆಯಲ್ಲಿ ಬೆಂಬಲ ವ್ಯಕ್ತಪಡಿಸಿದ್ದು ವ್ಯಾಟ್ಸ್ಆಫ್, ಫೇಸ್ಬುಕ್ ಮೂಲಕ ಪ್ರಚಾರ ಕೂಡ ನಡೆಯುತ್ತಿದೆ.
ಅಭಿಯಾನದ ಉದ್ದೇಶ:
ಜಿಲ್ಲೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಲಭಿಸುತ್ತಿಲ್ಲ. ಪ್ರಾಥಮಿಕ ಹಂತದ ಚಿಕಿತ್ಸೆ ಅಷ್ಟೇ ಸಿಗುತ್ತಿದೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರು, ಬೆಂಗಳೂರು, ಮಂಗಳೂರು, ಸುಳ್ಯಕ್ಕೆ ತೆರಳಬೇಕು. ಯಾವುದೇ ಅಪಘಾತ ಹಾಗೂ ದೊಡ್ಡ ಪ್ರಮಾಣದ ಕಾಯಿಲೆಗೆ ಇಲ್ಲಿ ಚಿಕಿತ್ಸೆ ಇಲ್ಲದೆ ಆ್ಯಂಬುಲೆನ್ಸ್ ಮೂಲಕ ಕೊಂಡೊಯ್ಯುವಲ್ಲಿಯೇ ಅನೇಕರು ಪ್ರಾಣ ಬಿಟ್ಟಿದ್ದಾರೆ ಎಂದು ನೋವು ಕಾಡುತ್ತಲೇ ಇದೆ. ಹೀಗಾಗಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಭಿಯಾನ ಆರಂಭವಾಗಿದೆ.
ರಸ್ತೆ ಅಪಘಾತಗಳೇ ಹೆಚ್ಚು:
ಪ್ರವಾಸಿ ತಾಣವಾಗಿರುವ ಕೊಡಗಿನಲ್ಲಿ ಹೆಚ್ಚು ತಿರುವು, ಬೆಟ್ಟಗಳಿವೆ. ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆಕಸ್ಮಿಕವಾಗಿ ಅಪಘಾತವಾದರೆ ಆಸ್ಪತ್ರೆ ತಂದರೂ ಅತ್ಯಾಧುನಿಕ ಚಿಕಿತ್ಸೆ ಇಲ್ಲದೇ ಸಾವನ್ನಪ್ಪುವರ ಸಂಖ್ಯೆ ಹೆಚ್ಚಾಗಿದೆ. ಜತೆಗೆ, ಜೋರು ಮಳೆ ಹಾಗೂ ಶೀತ ಪ್ರದೇಶ. ಈ ಸಂದರ್ಭದಲ್ಲಿ ರೋಗಗಳು ಹೆಚ್ಚು. ಅದಕ್ಕಾಗಿಯೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ಮೊದಲಿನಿಂದಲೂ ಇತ್ತು. ಈಗ ಅದರ ಅಗತ್ಯ ಹೆಚ್ಚಾಗಿದ್ದು ಅಭಿಯಾನ ಕಾವು ಪಡೆದುಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.