ADVERTISEMENT

ಹಾರಂಗಿ, ಕಾವೇರಿ ಹೂಳೆತ್ತಲು ಕ್ರಮ ಕೈಗೊಳ್ಳಿ

ಶಾಸಕ ಅಪ್ಪಚ್ಚುರಂಜನ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 14:16 IST
Last Updated 7 ಫೆಬ್ರುವರಿ 2020, 14:16 IST
ಕುಶಾಲನಗರ ಸಮೀಪದ ಹಾರಂಗಿ ಜಲಾಶಯಕ್ಕೆ ಶುಕ್ರವಾರ ಶಾಸಕ ಅಪ್ಪಚ್ಚುರಂಜನ್ ಭೇಟಿ ನೀಡಿ ಪರಿಶೀಲಿಸಿದರು
ಕುಶಾಲನಗರ ಸಮೀಪದ ಹಾರಂಗಿ ಜಲಾಶಯಕ್ಕೆ ಶುಕ್ರವಾರ ಶಾಸಕ ಅಪ್ಪಚ್ಚುರಂಜನ್ ಭೇಟಿ ನೀಡಿ ಪರಿಶೀಲಿಸಿದರು   

ಕುಶಾಲನಗರ: ಕಾವೇರಿ ಕಣಿವೆ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಜಲಾಶಯ ಸೇರಿದಂತೆ ಕಾವೇರಿ ನದಿಯಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಪ್ಪಚ್ಚುರಂಜನ್ ಒತ್ತಾಯಿಸಿದರು.

ಹಾರಂಗಿ ಜಲಾಶಯಕ್ಕೆ ಪಕ್ಷದ ಕಾರ್ಯಕರ್ತರೊಂದಿಗೆ ಶುಕ್ರವಾರ ಭೇಟಿ ನೀಡಿದ ಶಾಸಕರು ಜಲಾಶಯದ ನೀರು ಹಾಗೂ ಹೂಳಿನ ಪ್ರಮಾಣವನ್ನು ಖುದ್ದು ಪರಿಶೀಲನೆ ನಡೆಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾವೇರಿ ನೀರಾವರಿ ನಿಗಮದ ವತಿಯಿಂದ ₹130 ಕೋಟಿ ಕ್ರಿಯಾಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಈ ಯೋಜನೆಗೆ ಅನುದಾನ ಬಿಡುಗಡೆಗೊಳಿಸಿ ಹೂಳೆತ್ತುವ ಕಾರ್ಯ ತ್ವರಿತಗತಿಯಲ್ಲಿ ಕೈಗೊಳ್ಳಬೇಕಾಗಿರುವುದು ಅಗತ್ಯವಾಗಿದೆ ಎಂದರು.

ADVERTISEMENT

ಮುಂದಿನ ದಿನಗಳಲ್ಲಿ ನೀರಾವರಿ ಸಚಿವರನ್ನು ಭೇಟಿ ಮಾಡಿ ಹಾರಂಗಿ ಅಣೆಕಟ್ಟೆಯ ಹೂಳೆತ್ತುವ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ಪ್ರಕೃತಿ ವಿಕೋಪದಿಂದ ಭಾರಿ ಅನಾಹುತ ಉಂಟಾಗಿದೆ ಎಂದು ತಿಳಿಸಿದರು.

ಹಾರಂಗಿ ಮತ್ತು ಕಾವೇರಿ ನದಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಸಾವಿರಾರು ಮನೆಗಳು ಹಾಗೂ ರೈತರ ಜಮೀನು ಜಲಾವೃತಗೊಂಡು ಭಾರೀ ನಷ್ಟ ಆಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೊಡಗಿಗೆ ಭೇಟಿ ನೀಡಿ ಪ್ರಕೃತಿ ಕೋಪದ ಸಮೀಕ್ಷೆಯ ವಿಚಾರವಾಗಿ ಸಮಗ್ರ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದಿದ್ದಾರೆ.ಈಗ ಹಾರಂಗಿ ಜಲಾಶಯದಲ್ಲಿ ನೀರಿ‌ನ ಪ್ರಮಾಣ ಕಡಿಮೆಯಾಗಿದ್ದು, 1.5ಟಿಎಂಸಿ ನೀರು ಕ್ಣೀಣಿಸಿದೆ.ಈ ಬಾರಿ ಹೊಳೆತ್ತಿದರೆ ಮುಂದಿನ ವರ್ಷ ಹೆಚ್ಚಿನ ನೀರು ಸಂಗ್ರಹವಾಗಲು ಸಾಧ್ಯವಾಗುತ್ತದೆ. ಕಳೆದ ವರ್ಷ ಜಲಾವೃತಗೊಂಡು ರೈತರ ಜಮೀನು ಹಾಗೂ ಮನೆಗಳು ಮುಳುಗಡೆಗೊಂಡಿದ್ದವು. ರೈತರ ಮನೆ,ಜಮೀನು ರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ.ಎಲ್ಲರೂ ನೆಮ್ಮದಿ ಯಿಂದ ಜೀವನ ನಡೆಸುವಂತ ಪರಿಸ್ಥಿತಿ ನಿರ್ಮಾಣ ಮಾಡಬೇಕಾಗಿದ್ದು,ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭ ತಾ.ಪಂ.ಸದಸ್ಯ ಡಿ.ಎಸ್‌. ಗಣೇಶ್ . ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಭಾಸ್ಕರ್ ನಾಯಕ್, ಜ್ಯೋತಿ ಪ್ರಮೀಳಾ .ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ ಟಿ ಗಿರೀಶ್ ಕುಮಾರ್, ಮುಳುಸೊಗೆ ಗ್ರಾಮ ಪಂಚಾಯಿತಿ ಸದಸ್ಯೆ ರುದ್ರಾಂಬಿಕೆ, ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು, ಮುಖಂಡರಾದ ಮಂಜುನಾಥ್ .ಮಧು. ದೊರೆಸ್ವಾಮಿ .ಪುಂಡರಿಕಾಕ್ಷ.ಎಂ.ಡಿ ಕೃಷ್ಣಪ್ಪ .ಕುಮಾರಸ್ವಾಮಿ ವಕೀಲ ಭರತ್ .ಬಸವನಹಳ್ಳಿ ಮೋಹನ್ .ಆರ್ ಕೆ ಚಂದ್ರು ಮಂಜುನಾಥ್ .ಹಾಗೂ ಎಇಇ ಮಹೇಂದ್ರ ಕುಮಾರ್,ಎಇ ನಾಗರಾಜು,ಕಿರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.