ಮಡಿಕೇರಿ: ವಿದೇಶದಿಂದ ಕೊಡಗಿಗೆ ಬಂದಿದ್ದ ಕೆಲವರು ಗ್ರಾಮದಲ್ಲಿ ಓಡಾಟ ನಡೆಸುತ್ತಿದ್ದರು. ಅಂಥವರ ವಿರುದ್ಧ ಕಠಿಣ ಕ್ರಮಕ್ಕೆ ಕೊಡಗು ಜಿಲ್ಲಾಡಳಿತ ಮುಂದಾಗಿದೆ.
ಗೃಹ ಸಂಪರ್ಕ ತಡೆಯಲ್ಲಿರುವ ವ್ಯಕ್ತಿಗಳು ಗಂಭೀರತೆ ಅರಿಯದೇ ಎಲ್ಲೆಂದರಲ್ಲಿ ತಪ್ಪಿಸಿಕೊಂಡು ತಿರುಗಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು ಐವರನ್ನು ಸಾಮೂಹಿಕ ಸಂಪರ್ಕ ತಡೆ ಗೃಹಕ್ಕೆ ಕಳುಹಿಸಲಾಗಿದೆ.
ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಪ್ರಾಥಮಿಕ ಮತ್ತು ದ್ವಿತೀಯ ಹಂತದ ವ್ಯಕ್ತಿಗಳು ಹಾಗೂ 14 ದಿವಸಗಳ ವಿದೇಶ ಪ್ರವಾಸ ಇತಿಹಾಸವಿರುವ ವ್ಯಕ್ತಿಗಳನ್ನು ಕಡ್ಡಾಯವಾಗಿ ಗೃಹ ಸಂಪರ್ಕ ತಡೆಯಲ್ಲಿ (Home Quarantine) ಇರುವಂತೆ ಸೂಚನೆ ನೀಡಲಾಗಿತ್ತು. ಅದರಲ್ಲಿ ಕೆಲವರು ಸೂಚನೆ ಪಾಲಿಸುತ್ತಿಲ್ಲ. ಗ್ರಾಮಸ್ಥರಿಂದಲೂ ದೂರುಗಳು ಬಂದಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಗೃಹ ಸಂಪರ್ಕ ತಡೆಯನ್ನು ಧಿಕ್ಕರಿಸಿ ಓಡಾಡುತ್ತಿರುವ ವ್ಯಕ್ತಿಗಳಿಗೆ ಮಡಿಕೇರಿ ನಗರದ ಹೊರ ಭಾಗದಲ್ಲಿ ಜಿಲ್ಲಾಡಳಿತದಿಂದ ಜಿಲ್ಲಾ ಸಾಮೂಹಿಕ ಸಂಪರ್ಕ ತಡೆ ಗೃಹ ತೆರೆಯಲಾಗಿದೆ. ಅಲ್ಲಿಗೆ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.