ಪೊನ್ನಂಪೇಟೆ: ಇಲ್ಲಿನ ದೇವರಪುರ ಗ್ರಾಮದ ತಾರಿಕಟ್ಟೆ ಎಂಬಲ್ಲಿ ಗಾಳಿಯ ಹೊಡೆತಕ್ಕೆ ಮನೆ ಮೇಲೆ ಮರ ಬಿದ್ದು ಗೃಹಿಣಿಯೊಬ್ಬರು ಸಾವನ್ನಪ್ಪಿದ್ದಾರೆ.
ನೌಶದ್ ಅವರ ಪತ್ನಿ ರಹಾನತ್ (23) ಮೃತರು. ನೌಶದ್ (30)ಅವರಿಗೆ ಗಾಯವಾಗಿದ್ದು, ಇವರ ಒಂದು ವರ್ಷ ಪ್ರಾಯದ ಮಗ ನಸಲ್ ಅಪಾಯದಿಂದ ಪಾರಾಗಿದ್ದಾನೆ.
ಘಟನೆ ಸಂಬಂದ ಸ್ಥಳಕ್ಕೆ ತಹಸೀಲ್ದಾರ್ ಗೋವಿಂದರಾಜು ಪರಿಶೀಲನೆ ನಡೆಸಿ, ಮೃತರ ಕುಟುಂಬಕ್ಕೆ ಪ್ರಕೃತಿ ವಿಕೋಪದ ನಿಧಿಯಿಂದ 5 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಜಖಂ ಆಗಿರುವ ಮನೆಗೆ 5 ಲಕ್ಷ ಪರಿಹಾರವನ್ನು ಪ್ರತ್ಯೇಕವಾಗಿ ನೀಡುವಂತೆ ಕುಟುಂಬಸ್ಥರು ಒತ್ತಾಯಿಸಿದರು.
ಘಟನೆ ವಿವರ: ಶುಕ್ರವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಗಾಳಿ, ಮಳೆಗೆ ಸಮೀಪದ ತೋಟದಿಂದ ಮುರಿದು ಬಿದ್ದ ರೆಂಬೆ ನೌಶದ್ ಅವರ ಮನೆಯ ಮೇಲೆ ಬಿದ್ದಿದ್ದು, ರಹನತ್ ಅವರು ಸ್ಥಳದಲ್ಲಿಯೇ ಸಾವನಪ್ಪಿದರು. ನೌಶದ್ ಅವರ ಬಲಗೈಗೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಜೊತೆಯಲ್ಲಿದ್ದ ಮಗು ಕೂಡ ಅದೃಷ್ಟವಶಾತ್ ಪಾರಾಗಿದೆ. ಸ್ಥಳೀಯರು ಕುಟುಂಬದ ಸದಸ್ಯರನ್ನು ಸಂತೈಸಿದರು ತೋಟದ ಮಾಲೀಕನ ವಿರುದ್ದ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಭೇಟಿ: ಸ್ಥಳಕ್ಕೆ ತಹಸೀಲ್ದಾರ್ ಗೋವಿಂದರಾಜು ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಕುಟುಂಬಕ್ಕೆ ಪ್ರಕೃತಿ ವಿಕೋಪ ನಿಧಿಯಿಂದ ₹5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು. ಘಟನೆಯಿಂದ ಸಂಪೂರ್ಣವಾಗಿ ಮನೆ ಕಳೆದುಕೊಂಡಿರುವುದರಿಂದ ₹5 ಲಕ್ಷ ಪರಿಹಾರ ನೀಡಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದರು.
ಈ ಸಂದರ್ಭ ತಾ. ಪಂ ಇಒ ಜಯಣ್ಣ, ಕಂದಾಯ ನಿರೀಕ್ಷಕ ರಾಧಾಕೃಷ್ಣ ಉಪಸ್ಥಿತರಿದ್ದರು. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.