
ಕುಶಾನಗರ : ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ನೂರಾರು ಸಂತ್ರಸ್ತರು ಶಾಶ್ವತ ನೆಲೆಗಾಗಿ ಪರಿತಪಿಸುತ್ತಿದ್ದಾರೆ.
ಮಡಿಕೇರಿ ತಾಲ್ಲೂಕು ಮಕ್ಕಂದೂರು, ಮಡಿಕೇರಿಯ ಇಂದಿರಾ ನಗರ, ಸೋಮವಾರಪೇಟೆ ತಾಲ್ಲೂಕಿನ ಹಾಲೇರಿ ಗ್ರಾಮ ಹಾಗೂ ಸುಂಟಿಕೊಪ್ಪ ಗ್ರಾಮಗಳಲ್ಲಿ ಮಹಾಮಳೆ ಹಾಗೂ ಬೆಟ್ಟಕುಸಿತದಿಂದ ನೂರಾರು ಕುಟುಂಬಗಳು ನಿರಾಶ್ರಿತರಾಗಿದ್ದು, ಈ ಎಲ್ಲ ಕುಟುಂಬಗಳಿಗೆ ಕುಶಾಲನಗರ ಬಳಿಯ ವಾಲ್ಮೀಕಿ ಭವನದಲ್ಲಿ ಆಶ್ರಯ ಕಲ್ಪಿಸಲಾಗಿದೆ.
ಕಳೆದ ಎರಡು ತಿಂಗಳ ಹಿಂದೆ ತಮ್ಮ ಎಲ್ಲ ಸಂಪತ್ತು ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ದಿನ ಕಳೆಯುತ್ತಿರುವ ಸಂತ್ರಸ್ತರು ನಮಗೆ ತಲೆಯ ಮೇಲೊಂದು ಶಾಶ್ವತ ಸೂರು ದೊರೆಯುವುದು ಯಾವಾಗ? ನಮ್ಮ ಮಕ್ಕಳ ಮುಂದಿನ ಭವಿಷ್ಯ ಏನೆಂಬ ಚಿಂತೆಯಲ್ಲಿ ಮುಗ್ನರಾಗಿದ್ದಾರೆ.
ಮಹಾಮಳೆ, ಜಲಪ್ರಳಯದಿಂದ ಪಾರಾಗಿ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಇದುವರೆಗೂ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂಬ ಕೊರಗು ಕಾಡುತ್ತಿದೆ. ಆದರೂ, ಇಂದೋ ಅಥವಾ ನಾಳೆಯೋ ನಮಗೆ ಶಾಶ್ವತ ಪರಿಹಾರ ಸಿಕ್ಕಬಹುದು ಎಂಬ ಆಶಾಭಾವನೆಯಲ್ಲಿಯೇ ಹಗಲು, ರಾತ್ರಿ ಕಳೆಯುತ್ತಿರುವ ವೃದ್ಧರು, ಕೆಲಸವಿಲ್ಲದೆ ಕೈಕಟ್ಟಿಕುಳಿತ್ತಿರುವ ಕಾರ್ಮಿಕ ವರ್ಗ ಹಾಗೂ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.
ಸೌಲಭ್ಯಗಳ ಕೊರತೆಗಳ ನಡುವೇ ದಿನದೂಡುತ್ತಿರುವ ಸಂತ್ರಸ್ತರು ಮುಂದಿನ ಭವಿಷ್ಯ ಹೇಗೆ ರೂಪಿಸಿಕೊಳ್ಳಬೇಕು ಎಂಬ ಆತಂಕ ಅವರನ್ನು ನೆರಳಿನಂತೆ ಕಾಡಲಾರಂಭಿಸಿದೆ.
ಧರೆಗುಳಿದ ಮನೆಗಳು, ಮಣ್ಣಿನಲ್ಲಿ ಮುಚ್ಚಿ ಹೋದ ಹೊಲಗದ್ದೆಗಳು ಹಾಗೂ ಬೆಟ್ಟಕುಸಿತದಿಂದ ನಾಶವಾಗಿರುವ ತೋಟಗಳ ಸ್ಥಿತಿಗತಿ ಹೋಗಿ ನೋಡಲು ಸಾಧ್ಯವಾಗದಂತ ದುಸ್ಥಿತಿ ನಿರಾಶ್ರಿತರಾಗಿದೆ. ಕೈಯಲ್ಲಿ ನಾಯಾ ಪೈಸೆ ಕೂಡ ಇಲ್ಲದ ಸ್ಥಿತಿಯಲ್ಲಿರುವ ಸಂತ್ರಸ್ತರಿಗೆ ತಮ್ಮ ಅಳಲು ಹಾಗೂ ದುಃಖ ಯಾರೊಂದಿಗೆ ತೊಡಿಕೊಳ್ಳುವುದು ಎಂಬ ಪ್ರಶ್ನೆ ಎದುರಾಗಿದೆ. ವಾಲ್ಮೀಕಿ ಭವನದಲ್ಲಿ ನಡೆದ ಗಲಾಟೆಯಿಂದ ಸಂತ್ರಸ್ತರ ಬಾಳಲ್ಲಿ ದಿಕ್ಕು ತೋಚದಾಗಿದೆ.
ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ನೊಂದ ಜನರಿಗೆ ರಾಜ್ಯದ ವಿವಿಧೆಡೆಗಳಿಂದ ಪರಿಹಾರದ ಮಹಾಪೂರವೇ ಹರಿದು ಬಂದಿತ್ತು. ಸರ್ಕಾರ ಕೂಡ ಉಚಿತ ಆಹಾರ ಕೀಟ್ ನೀಡಿದೆ. ಆದರೆ, ಸಂತ್ರಸ್ತ ಕೇಂದ್ರದಲ್ಲಿರುವ ಅರ್ಹ ನಿರಾಶ್ರಿತರಿಗೆ ಮಾತ್ರ ಪರಿಹಾರ ಸಾಮಗ್ರಿಗಳು ಸರಿಯಾಗಿಲ್ಲ ತಲುಪಿಲ್ಲ. ಪರಿಹಾರ ಸಾಮಗ್ರಿಗಳು ಉಳ್ಳವರ ಪಾಲಾಗಿ ಹೋಗಿವೆ. ಮಳೆ ನಿಂತು ಹೋಗಿದ್ದರೂ ಕೂಡ ಪರಿಹಾರ ಸಾಮಗ್ರಿಗಳು ಈಗಾಲೂ ಹರಿದು ಬರುತ್ತಿವೆ. ಆದರೆ, ನಮಗೆ ಮಾತ್ರ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ವಾಲ್ಮೀಕಿ ಪರಿಹಾರ ಕೇಂದ್ರದ ಸಂತ್ರಸ್ತೆ ಮಕ್ಕಂದೂರು ನಿವಾಸಿ ಸರಸ್ವತಿ ತಮ್ಮ ನೋವು ತೊಡಿಕೊಂಡಿದ್ದಾರೆ.
ಹಾರಂಗಿ ರಸ್ತೆಯ ವಾಲ್ಮೀಕಿ ಭವನ, ಅಂಬೇಡ್ಕರ್ ಭವನ ಹಾಗೂ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಪರಿಹಾರ ಕೇಂದ್ರ ಆರಂಭಿಸಲಾಗಿದ್ದು, ಈ ಮೂರು ಕೇಂದ್ರಗಳಲ್ಲಿ 273 ಮಂದಿ ಸಂತ್ರಸ್ತರು ಆಶ್ರಯ ಕಂಡುಕೊಂಡಿದ್ದಾರೆ. ಜಿಲ್ಲಾಡಳಿತ ವತಿಯಿಂದ ಸಂತ್ರಸ್ತರಿಗೆ ಊಟ, ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಚಾಪೆ, ಹೊದಿಕೆ, ತಟ್ಟೆ, ಲೋಟ, ಬಾಕೇಟ್, ಸೋಪು– ಪೇಸ್ಟ್ ಹಾಗೂ ದಾನಿಗಳು ನೀಡಿದ ಬಟ್ಟೆ, ಬೆಡ್ ಸೀಟ್ ಮತ್ತಿತರ ವಸ್ತುಗಳನ್ನು ನೀಡಲಾಗಿದೆ. ಅಲ್ಲದೇ ಸಂತ್ರಸ್ತರ ಆರೋಗ್ಯ ಸುಧಾರಣೆಗಾಗಿ ತಾತ್ಕಾಲಿಕವಾಗಿ ಆರೋಗ್ಯ ಸೇವಾ ಘಟಕವನ್ನು ಕೂಡ ಆರಂಭಿಸಲಾಗಿದೆ ಎಂದು ನೋಡೆಲ್ ಅಧಿಕಾರಿ ಫಿಲಿಪ್ ವಾಸ್ ತಿಳಿಸಿದ್ದಾರೆ.
ಜಿಲ್ಲಾಡಳಿತದಿಂದ ಶಾಶ್ವತ ನೆಲೆ ಸಿಕ್ಕೂವವರೆಗೂ ನಾವು ನಮ್ಮ ಊರುಗಳಿಗೆ ಹೋಗಿ ಕೂಲಿ ಕೆಲಸ ಮಾಡಿಕೊಂಡು ಬರಲು ಅವಕಾಶ ಮಾಡಿಕೊಡಬೇಕು. ಅದಕ್ಕಾಗಿ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಸಂತ್ರಸ್ತರಾದ ಮಕ್ಕಂದೂರು ಸಂಜು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.