ADVERTISEMENT

ಜನರು ಕೇಳಿದ್ದು ಸೇತುವೆಯನ್ನು, ಕಿಂಡಿ ಅಣೆಕಟ್ಟೆಯನ್ನಲ್ಲ!

ಸಂಪಾಜೆ ಬ್ಲಾಕ್ ಕಾಂಗ್ರೆಸ್ ವಕ್ತಾರ ಪಿ.ಎಲ್. ಸುರೇಶ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 16:12 IST
Last Updated 10 ಸೆಪ್ಟೆಂಬರ್ 2022, 16:12 IST

ಮಡಿಕೇರಿ: ‘ಕೊಯನಾಡಿನ ಪಯಸ್ವಿನಿ ನದಿಗೆ ಸ್ಥಳೀಯರು ಕೇಳಿದ್ದು ಸೇತುವೆಯೇ ಹೊರತು ಕಿಂಡಿ ಅಣೆಕಟ್ಟೆಯಲ್ಲ’ ಎಂದು ಸಂಪಾಜೆ ಬ್ಲಾಕ್ ಕಾಂಗ್ರೆಸ್ ವಕ್ತಾರ ಪಿ.ಎಲ್.ಸುರೇಶ್ ವಾಗ್ದಾಳಿ ನಡೆಸಿದರು.

‘ಜನರ ಬೇಡಿಕೆಯಂತೆ ಸೇತುವೆ ಕಟ್ಟಿದ್ದರೆ ನಿಜಕ್ಕೂ ಅಲ್ಲಿ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಸೇತುವೆಯನ್ನು ಬಿಟ್ಟು ಕಿಂಡಿ ಅಣೆಕಟ್ಟೆ ಕಟ್ಟಿದ್ದರಿಂದಲೇ ಅಲ್ಲಿ ಪ್ರವಾಹ ಉಂಟಾಗುತ್ತಿದೆ’ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.

‘ಪದೇ ಪದೇ ಜನರನ್ನು ಸಂಕಷ್ಟಕ್ಕೆ ದೂಡುತ್ತಿರುವ ಇಂತಹ ಕಿಂಡಿ ಅಣೆಕಟ್ಟೆ ನಮಗೆ ಬೇಡ’ ಎಂದ ಅವರು, ‘ನಮಗೆ ನದಿ ದಾಟಲು ಸೇತುವೆಯಷ್ಟೇ ಸಾಕು’ ಎಂದು ಹೇಳಿದರು.

ADVERTISEMENT

‘ಈ ಅಣೆಕಟ್ಟೆಯಿಂದ 5 ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ. ಅವರಿಗೆ ಹೆಚ್ಚಿನ ಪರಿಹಾರ ನೀಡಿಲ್ಲ. ಶಾಶ್ವತವಾದ ಪರಿಹಾರವನ್ನು ಅವರಿಗೆ ನೀಡಬೇಕು’ ಎಂದೂ ಒತ್ತಾಯಿಸಿದರು.

ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸೂರಜ್ ಹೊಸೂರು ಮಾತನಾಡಿ, ‘ಕಿಂಡಿ ಅಣೆಕಟ್ಟೆ ದೂರದೃಷ್ಟಿ ಇಲ್ಲದ ಯೋಜನೆ. ಕೆಲವೇ ಕಿಲೋಮೀಟರ್‌ಗಳ ಅಂತರದಲ್ಲಿ 4 ಕಿಂಡಿ ಅಣೆಕಟ್ಟೆಯನ್ನು ಕಟ್ಟಿದ್ದಾದರೂ ಏಕೆ’ ಎಂದು ಪ್ರಶ್ನಿಸಿದರು.

ಪ್ರವಾಹ ಸಂತ್ರಸ್ತ ಲೋಕೇಶ್ ಮಾತನಾಡಿ, ‘ನಮಗೆ ಯೋಗ್ಯವಾದ ಜಾಗದಲ್ಲಿ ಸೂಕ್ತವಾದ ಸ್ಥಳ ನೀಡಿದರೆ ಮಾತ್ರ ತೆರಳುತ್ತೇವೆ. ಇಲ್ಲದಿದ್ದರೆ ನಾವು ಈಗ ಇರುವ ಸ್ಥಳ ಬಿಟ್ಟು ಹೊರಡುವುದಿಲ್ಲ’ ಎಂದರು.

ಮುಖಂಡರಾದ ಹನೀಫ್, ಸಂತ್ರಸ್ತೆ ವೇದಾವತಿ, ನಿತಿನ್ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.