ADVERTISEMENT

ಫಾರ್ಮಸಿಸ್ಟ್‌ಗಳ ಮುಷ್ಕರ ಆರಂಭ

ಬೇಡಿಕೆ ಈಡೇರಿಕೆಗೆ ಆಗ್ರಹ, ಬೆಂಗಳೂರಿನಲ್ಲಿ ಬೃಹತ್‌ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 13:36 IST
Last Updated 2 ಜನವರಿ 2020, 13:36 IST
ಪ್ರಜಾವಾಣಿ
ಪ್ರಜಾವಾಣಿ   

ಮಡಿಕೇರಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಪ್ಪುಪಟ್ಟಿ ಧರಿಸಿ ಮುಷ್ಕರ ಆರಂಭಿಸಲಾಗಿದೆ ಎಂದು ರಾಜ್ಯ ಸರ್ಕಾರಿ ಫಾರ್ಮಸಿಸ್ಟ್‌ ಸಂಘದ ಜಿಲ್ಲಾಧ್ಯಕ್ಷೆ ಕೆ.ಅಮೀನಾ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘1982ರಿಂದಲೂ ನೆರೆ ರಾಜ್ಯದ ಫಾರ್ಮಸಿಸ್ಟ್‌ಗಳಿಗಿಂತ ಕಡಿಮೆ ವೇತನ ಹಾಗೂ ಭತ್ಯೆ ನಾವು ಪಡೆಯುತ್ತಿದ್ದೇವೆ. ನ್ಯಾಯ ದೊರಕಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಫಾರ್ಮಸಿಸ್ಟ್‌ಗಳಿಗೆ ಸೇವಾ ಅವಧಿಯಲ್ಲಿ ಒಂದು ಹಂತದಲ್ಲಿ ಮಾತ್ರ 10 ವರ್ಷಗಳ ಕಾಲಬದ್ಧ ಮುಂಬಡ್ತಿ ದೊರಕಿತ್ತು. ಆದರೆ, ಬಳಿಕ 30 ವರ್ಷ ಹಾಗೂ ಪದೋನ್ನತಿ ಹೊಂದಿದ್ದರೂ ವೇತನ ಶ್ರೇಣಿಯಲ್ಲಿ ಬದಲಾವಣೆ ಆಗಿಲ್ಲ’ ಎಂದು ಆರೋಪಿಸಿದರು.

ADVERTISEMENT

ಕರ್ನಾಟಕ ಆಡಳಿತ ಮಂಡಳಿ ಆದೇಶದಂತೆ ವೇತನ ಶ್ರೇಣಿ ಜಾರಿ ಮಾಡಬೇಕು. ಖಾಲಿಯಿರುವ ಹುದ್ದೆ ಭರ್ತಿ ಮಾಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಬಸವರಾಜು ಮಾತನಾಡಿ, ಜ.30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಿಂದ ಆರೋಗ್ಯ ಇಲಾಖೆವರೆಗೆ ಬೃಹತ್ ರ‍್ಯಾಲಿ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಮಾರ್ಚ್ 10ರಿಂದ 17ರ ವರೆಗೆ ರಾಜ್ಯಾದ್ಯಂತ ಎಲ್ಲಾ ಹಂತದ ಆಸ್ಪತ್ರೆಗಳ ಹೊರರೋಗಿಗಳ ಸೇವಾ ವಿಭಾಗದಲ್ಲಿ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಗೀತಾ, ಪ್ರಮುಖರಾದ ಶಶಿಧರನ್, ಸುಧಾಕರ್, ನಟರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.