ನಾಪೋಕ್ಲು: ಕಳೆದ ಆರು ತಿಂಗಳಿಂದ ಕೋವಿಡ್ ಸೋಂಕಿನಿಂದಾಗಿ ವಿವಿಧ ದೇವಾಲಯಗಳಲ್ಲಿ ಸ್ಥಗಿತಗೊಂಡಿದ್ದ ಪೂಜಾ ಕೈಂಕರ್ಯಗಳು ಇದೀಗ ಆರಂಭಗೊಂಡಿದ್ದು, ಭಕ್ತರು ದೇವಾಲಯಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.
ಭಾಗಮಂಡಲ ತಲಕಾವೇರಿ ಕ್ಷೇತ್ರಗಳಲ್ಲೂ ಭಕ್ತರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ. ವಿಶೇಷವಾಗಿ ಶನಿವಾರ ಮತ್ತು ಭಾನುವಾರಗಳಂದು ಸ್ಥಳೀಯರಲ್ಲದೇ, ಪರ ಊರಿನ ಭಕ್ತರು ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು.ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ರಜಾ ದಿನಗಳಲ್ಲಿ ದೇವಾಲಯಗಳು ಬಿಕೋ ಎನ್ನುತ್ತಿತ್ತು. ಇದೀಗ ದೇವಾಲಯಗಳಿಗೆ ಭಕ್ತರ ಭೇಟಿ ನಿಧಾನವಾಗಿ ಹೆಚ್ಚುತ್ತಿದ್ದು ಮಹಾಲಯ ಅಮಾವಾಸ್ಯೆಯ ದಿನವಾದ ಗುರುವಾರ ದೇವಾಲಯಗಳಲ್ಲಿ ಅಧಿಕ ಸಂಖ್ಯೆಯ ಭಕ್ತರು ಕಂಡುಬಂತು.
ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಹಾಗೂ ತಲಕಾವೇರಿಯಲ್ಲಿ ಭಕ್ತರು ವಿಶೇಷ ಪೂಜೆ ನೆರವೇರಿಸಿದರು. ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ನೆರವೇರಿಸಿದರು. ಹಲವು ದಿನಗಳಿಂದ ಪಿಂಡ ನೆರವೇರಿಸಲಾರದೆ ಭಕ್ತರು ಗುರುವಾರ ಅಧಿಕ ಸಂಖ್ಯೆಯಲ್ಲಿ ಪಿಂಡಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.