ADVERTISEMENT

ಶಾಸಕ ಎ.ಎಸ್.ಪೊನ್ನಣ್ಣ ಅವರಿಂದ ಜನಸಂಪರ್ಕ ಸಭೆ: ಸಾಲು ಸಾಲು ಸಮಸ್ಯೆ ಅನಾವರಣ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 2:48 IST
Last Updated 2 ಸೆಪ್ಟೆಂಬರ್ 2025, 2:48 IST
ಗಡಿಭಾಗ ಕರಿಕೆಯಲ್ಲಿ ಅಹವಾಲು ಸಲ್ಲಿಸಲು ಜನರು ಸಾಲುಗಟ್ಟಿ ನಿಂತಿದ್ದರು
ಗಡಿಭಾಗ ಕರಿಕೆಯಲ್ಲಿ ಅಹವಾಲು ಸಲ್ಲಿಸಲು ಜನರು ಸಾಲುಗಟ್ಟಿ ನಿಂತಿದ್ದರು   

ಮಡಿಕೇರಿ: ಜಿಲ್ಲೆಯ ಗಡಿ ಭಾಗ ಕರಿಕೆ ಗ್ರಾಮದಲ್ಲಿ ಸಾಲು ಸಾಲು ಸಮಸ್ಯೆಗಳು ರಿಂಗಣಿಸಿದವು. ಹದಗೆಟ್ಟ ರಸ್ತೆಗಳು, ಬಾರದ ಬಸ್‌ಗಳು, ಪದೇ ಪದೇ ಕಡಿತಗೊಳ್ಳುವ ವಿದ್ಯುತ್, ಶಾಲೆಗಳಲ್ಲಿ ಮೂಲಸೌಕರ್ಯ ಹಾಗೂ ಶಿಕ್ಷಕರ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳ ಅರ್ಜಿಗಳನ್ನು ಸಾಲುಗಟ್ಟಿ ನಿಂತ ಸ್ಥಳೀಯರು ಸಲ್ಲಿಸಿದರು. ಸಲ್ಲಿಕೆಯಾದ ಬಹುತೇಕ ಅರ್ಜಿಗಳಲ್ಲಿ ಭೂಮಿ ದುರಸ್ತಿ ಕುರಿತ ಅರ್ಜಿಯೇ ಹೆಚ್ಚಿದ್ದವು.

ಈ ದೃಶ್ಯಗಳು ಕರಿಕೆ ಗ್ರಾಮದ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ಸೋಮವಾರ ಶಾಸಕ ಎ.ಎಸ್.ಪೊನ್ನಣ್ಣ ನಡೆಸಿದ ಜನಸಂಪರ್ಕ ಸಭೆಯಲ್ಲಿ ಕಂಡು ಬಂತು. ಒಟ್ಟು 50ಕ್ಕೂ ಅಧಿಕ ಅಹವಾಲುಗಳು ಸಲ್ಲಿಕೆಯಾದವು.

ಈ ವೇಳೆ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ, ‘ತಾಲ್ಲೂಕು ಹಾಗೂ ಹೋಬಳಿ ಕೇಂದ್ರದಿಂದ ತುಂಬಾ ದೂರದಲ್ಲಿರುವ ಕರಿಕೆ ಗ್ರಾಮಸ್ಥರ ಅಹವಾಲು ಆಲಿಸುವುದು ಅಧಿಕಾರಿಗಳ ಜವಾಬ್ದಾರಿ ಎನ್ನುವುದನ್ನು ಮರೆಯಬಾರದು. ಕೂಡಲೇ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ಸಿಬ್ಬಂದಿ ಕೊರತೆ ನಡುವೆಯೂ ಕೆಲಸ ಮಾಡಲೇಬೇಕು. ಭೂಮಿ ದುರಸ್ತಿ ಸಂಬಂಧ 25ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಭೂಮಿ ದುರಸ್ತಿ ಮಾಡುವುದು, ಆರ್‌ಟಿಸಿ ಸರಿಪಡಿಸುವುದು ಸೇರಿದಂತೆ ಅರಣ್ಯ, ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಬಗೆಹರಿದಲ್ಲಿ ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಧಿಕಾರಿಗಳು ಸಾರ್ವಜನಿಕರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದರೆ ಸಮಸ್ಯೆಗಳು ತಾವಾಗಿಯೇ ಬಗೆಹರಿಯಲಿವೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಜನಸಂಪರ್ಕ ಸಭೆಯಲ್ಲಿ ಸಲ್ಲಿಕೆಯಾದ ಅಹವಾಲುಗಳನ್ನು ಬಗೆಹರಿಸಿ ಪರಿಹಾರ ಕುರಿತು ತ್ವರಿತವಾಗಿ ವರದಿ ನೀಡುವಂತೆ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.

ಬಡವರಿಗೆ ಬಿಪಿಎಲ್ ಕಾರ್ಡ್ ಕಲ್ಪಿಸುವ ಸಂಬಂಧ ಸರ್ಕಾರದ ಹಂತದಲ್ಲಿ ಗಮನ ಸೆಳೆಯಲಾಗುವುದು. ಈ ಕುರಿತು ಮುಖ್ಯಮಂತ್ರಿ ಅವರ ಜೊತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಸಾರ್ವಜನಿಕರ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಕರೆದು ಕೂಡಲೇ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಅವರು ನಿರ್ದೇಶನ ನೀಡಿದರು.

ವನ್ಯಪ್ರಾಣಿಗಳ ಹಾವಳಿ ನಿಯಂತ್ರಣ ಮಾಡುವಲ್ಲಿ ಅರಣ್ಯ ಇಲಾಖೆ ಮುಂದಾಗಬೇಕು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ವನ್ಯಪ್ರಾಣಿಗಳ ಚಟುವಟಿಕೆ ಬಗ್ಗೆ ಜನರಿಗೆ ಮಾಹಿತಿ ನೀಡಿ, ಜನರ ಆತಂಕ ಕಡಿಮೆ ಮಾಡಬೇಕು ಎಂದರು.

ಕೆಎಸ್‍ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸುವುದು, ವಿದ್ಯುತ್ ಪರಿವರ್ತಕಗಳ ನಿರ್ಮಾಣ ಸೇರಿದಂತೆ ಹಲವು ಅಹವಾಲುಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಹೇಳಿದರು.

ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್, ಉಪಾಧ್ಯಕ್ಷೆ ಕಲ್ಪನಾ ಜಗದೀಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್, ಸ್ಥಳೀಯರಾದ ರಮಾನಾಥ್ ಬೇಕಲ್, ಹರೀಶ್, ತಹಶೀಲ್ದಾರ್ ಶ್ರೀಧರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶೇಖರ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. 

ಕರಿಕೆಯ ಆರ್ತುಕುಟ್ಟಿ ರಸ್ತೆಯಲ್ಲಿ ₹ 70 ಲಕ್ಷ ವೆಚ್ಚದ ಕಿಂಡಿ ಅಣೆಕಟ್ಟು ಸೇತುವೆ ಸೋಮವಾರ ಉದ್ಘಾಟಿಸಿ ಉದ್ಘಾಟನಾ ಫಲಕವ‌ನ್ನು ಶಾಸಕ ಎ.ಎಸ್.ಪೊನ್ನಣ್ಣ ವೀಕ್ಷಿಸಿದರು

‘ನಾಳೆ ಬನ್ನಿ ಎನ್ನಲು ಹೇಗೆ ಮನಸ್ಸಾಗುತ್ತದೆ?’:

‘ಕರಿಕೆ ಗ್ರಾಮದ ಜನರು ಭೂಮಿ ದುರಸ್ತಿ ಆರ್‌ಟಿಸಿ ಸರಿಪಡಿಸುವುದು ಸೇರಿದಂತೆ ಕೃಷಿ ಜಾತಿ ಆದಾಯ ಮತ್ತಿತರ ಸರ್ಕಾರದ ಸೌಲಭ್ಯ ಪಡೆಯಲು ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ಸತಾಯಿಸದೆ ನೀಡಬೇಕು. ಹತ್ತಾರು ಕಿ.ಮೀ. ದೂರದಿಂದ ಬರುವ ಗ್ರಾಮಸ್ಥರಿಗೆ ನಾಳೆ ಬನ್ನಿ ಎಂದು ಹೇಳಲು ಮನಸ್ಸು ಹೇಗೆ ಬರುತ್ತದೆ’ ಎಂದು ಶಾಸಕ ಎ.ಎಸ್.ಪೊನ್ನಣ್ಣ ಪ್ರಶ್ನಿಸಿದರು. 

₹ 20 ಕೋಟಿಗೂ ಹೆಚ್ಚು ಕಾಮಗಾರಿ ಉದ್ಘಾಟನೆ ಶಂಕುಸ್ಥಾಪನೆ

ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರು ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ₹ 20 ಕೋಟಿಗೂ ಹೆಚ್ಚು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸೋಮವಾರ ಉದ್ಘಾಟಿಸಿದರು.

ಕರಿಕೆ ಗ್ರಾಮದ ಪಚ್ಚೆಪಿಲಾವುನಲ್ಲಿ ₹ 4 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಆಶ್ರಮ ಆದಿವಾಸಿ ಬುಡಕಟ್ಟು ಶಾಲೆ ಕಟ್ಟಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ‘ಸರ್ಕಾರ ಬುಡಕಟ್ಟು ಆದಿವಾಸಿ ವಿದ್ಯಾರ್ಥಿಗಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಕುಗ್ರಾಮಗಳಲ್ಲೂ ವಸತಿ ಶಾಲೆಗಳನ್ನು ಆರಂಭಿಸಿ ಒಳ್ಳೆಯ ಶಿಕ್ಷಣ ನೀಡಲು ಮುಂದಾಗಿದೆ’ ಎಂದು ಹೇಳಿದರು. ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್ ನಾಯರ್ ಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಅಧಿಕಾರಿ ಎಸ್.ಹೊನ್ನೇಗೌಡ ತಾಲ್ಲೂಕು ಅಧಿಕಾರಿ ಬಾಲಕೃಷ್ಣ ರೈ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ಭಾಗವಹಿಸಿದ್ದರು. ಬಳಿಕ ಚೆತ್ತುಕಾಯ ಅರಣ್ಯ ಪ್ರವಾಸಿ ಮಂದಿರದ ಬಳಿ ₹ 15 ಲಕ್ಷ ವೆಚ್ಚದ ಅಂಗನವಾಡಿ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದರು.

ಕರಿಬಳಪು ಪರಿಶಿಷ್ಟ ಜಾತಿ ಕಾಲೊನಿ ರಸ್ತೆಯಲ್ಲಿ ಸೇತುವೆ ನಿರ್ಮಾಣವಾಗುವ ಸ್ಥಳ ವೀಕ್ಷಿಸಿದರು. ಪೊಂಗಾರು ರಸ್ತೆಯಲ್ಲಿ ₹ 85 ಲಕ್ಷ ವೆಚ್ಚದ ಹೊಸ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಆರ್ತುಕುಟ್ಟಿ ರಸ್ತೆಯಲ್ಲಿ ₹ 70 ಲಕ್ಷ ವೆಚ್ಚದ ಕಿಂಡಿ ಅಣೆಕಟ್ಟು ಸೇತುವೆ ಉದ್ಘಾಟಿಸಿದರು. ಬಳಿಕ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹75 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಡೆಕಾನ ರಸ್ತೆ ಉದ್ಘಾಟಿಸಿದರು. ಚೆತ್ತುಕಾಯವರೆಗೆ ₹ 2 ಕೋಟಿ ವೆಚ್ಚದಲ್ಲಿ ಅಳವಡಿಸಲಾಗಿರುವ ಹೊಸ ವಿದ್ಯುತ್ ಕಂಬ ಮಾರ್ಗ ಮತ್ತು 5 ಹೊಸ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದ್ದು ಇದನ್ನು ಸಾರ್ವಜನಿಕರಿಗೆ ಸಮರ್ಪಿಸಿದರು. ಇದೇ ವೇಳೆ ₹ 12 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕರಿಕೆ-ಭಾಗಮಂಡಲ ಹೆದ್ದಾರಿ ರಸ್ತೆ ಕಾಮಗಾರಿಯನ್ನು ಶಾಸಕರಾದ ಎ.ಎಸ್.ಪೊನ್ನಣ್ಣ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.