
ಮಡಿಕೇರಿ: ಇಲ್ಲಿನ ಮಡಿಕೇರಿ ಕೊಡವ ಸಮಾಜದ ವತಿಯಿಂದ ಪುತ್ತರಿ ಊರೊರ್ಮೆ ಹಾಗೂ ಮಂದ್ನಲ್ಲಿ ಪುತ್ತರಿ ಕೋಲಾಟ್ ಶನಿವಾರ ನಡೆಯಿತು.
ಅತಿಥಿಗಳನ್ನು ‘ತಳಿಯಕ್ಕಿ ಬೊಳ್ ಚ’, ವಾಲಗ ಹಾಗೂ ದುಡಿಕೊಟ್ಟಿನೊಂದಿಗೆ ಸ್ವಾಗತಿಸಲಾಯಿತು. ದೇವರಿಗೆ ಅಕ್ಕಿ ಹಾಕಿ ನಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ಕೊಡವ ಸಮಾಜದ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ಚಂಗಪ್ಪ ಮಾತನಾಡಿ, ‘ಸಮಾಜ ಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಸಮಾಜದ ಮೂಲಕ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಕೊಡವವಾಮೆಯ ಬೆಳೆಸುವ ಮೂಲ ಜನಾಂಗದ ಜನಸಂಖ್ಯೆ ಕಡಿಮೆಯಾಗುತ್ತಿದ್ದು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಬೇಕು’ ಎಂದರು.
‘ಬೆಂಗಳೂರು ಕೊಡವ ಸಮಾಜದಿಂದ ವಿವಿಧೆಡೆ ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸಿದ್ದು, ಕೊಡವ ಮಕ್ಕಳಿಗೆ ರಿಯಾಯಿತಿ ನೀಡುತಿದ್ದೇವೆ. ಕೊಡವ ವಧುವರರ ಕೇಂದ್ರವನ್ನು ಪ್ರಾರಂಭಿಸಿದ್ದೇವೆ. ದೇಶ ವಿದೇಶದಲ್ಲಿರುವ ಕೊಡವರ ಸಂಪರ್ಕ ಬೆಳೆಸುತ್ತೇವೆ ಎಂದು ಹೇಳಿದರು.
ಕೊಡವಾಮೆ, ಸಂಸ್ಕ್ರತಿ, ಆಚಾರವಿಚಾರ ಉಳಿಸ ಬೇಕಾದರೆ ಪೋಷಕರು ಯುವ ಪೀಳಿಗೆಗೆ ತಿಳಿಸಬೇಕು. ಮಡಿಕೇರಿ ಕೊಡವ ಸಮಾಜದ ಅಭಿವೃದ್ಧಿಗೆ ಬೆಂಗಳೂರು ಸಮಾಜ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಸಮಾಜದ ಅಧ್ಯಕ್ಷ ಮಂಡವಂಡ ಮುತ್ತಪ್ಪ ಮಾತನಾಡಿ, ‘ಕೊಡವ ಸಮಾಜದ ವತಿಯಿಂದ ಕೊಡವ ಆಚಾರವಿಚಾರ ಸಂಸ್ಕೃತಿಯನ್ನು ಉಳಿಸಲು ಶ್ರಮಿಸುತಿದ್ದೇವೆ. ಮಡಿಕೇರಿಯಲ್ಲಿರುವ 12 ಕೊಡವ ಕೇರಿಗಳು ಸಮಾಜಕ್ಕೆ ಸದಾ ಸಹಕಾರ ನೀಡುತಿವೆ. ಪುತ್ತರಿ ನಮ್ಮೆಯ ಹಿನ್ನೆಲೆ ಯಲ್ಲಿ ಮೂರುದಿನ ಈಡ್ ನಡೆಸಿ ಇಂದು ಕೋಲಾಟನ್ನು ಪ್ರದರ್ಶನಗೊಳಿಸುತ್ತಿದ್ದೇವೆ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನ ಮಾಡಲಾಯಿತು. ಹೆಚ್ಚು ಅಂಕ ಪಡೆದ ಮಕ್ಕಳಿಗೆ ಬಹುಮಾನ ನೀಡಲಾಯಿತು.
ಉಪಾದ್ಯಕ್ಷ ಕೇಕಡ ವಿಜು ದೇವಯ್ಯ, ಗೌರವ ಕಾರ್ಯದರ್ಶಿ ಬೊಪ್ಪಂಡ ಸರಳ ಕರುಂಬಯ್ಯ, ನಿರ್ದೇಶಕರಾದ ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಕಾಳಚಂಡ ಅಪ್ಪಣ್ಣ, ಮೂವೆರ ಜಯರಾಂ, ನಂದಿನೆರವಂಡ ರವಿ ಬಸಪ್ಪ, ಪುತ್ತರಿರ ಕರುಣ್ ಕಾಳಯ್ಯ, ಕನ್ನಂಡ ಕವಿತ ಕಾವೇರಮ್ಮ, ಕಾಂಡೇರ ಲಲ್ಲು , ಪಾಲೆಯಂಡ ರೂಪ, ಪೆಮ್ಮಡಿಯಂಡ ಉತ್ತಪ್ಪ, ಪುಲ್ಲೆರ ವಸಂತ್, ನಂದನೆರವಂಡ ದಿನೇಶ್, ಮಡಿಕೇರಿ ಸಮಾಜದ ಸದಸ್ಯರು, ಕೊಡವ ಕೇರಿ ಪಾಧಿಕಾರಿಗಳು ಭಾಗವಹಿಸಿದರು.
ಮದ್ಯಾಹ್ನದ ನಂತರ ಕೊಡವ ಸಂಪ್ರದಾಯದೊಂದಿಗೆ ಕೊಡವ ಸಮಾಜದಿಂದ ಕೋಲ್ ಮಂದ್ಗೆ ಮೆರವಣಿಗೆಯಲ್ಲಿ ತೆರಳಿದರು. ಕಾವೇರಿ ಕೇರಿಯವರು ಮಂದ್ ಅನ್ನು ಸ್ವಾಗತಿಸಿದರು. ನಂತರ ಕೋಲಾಟ್, ಬೊಳಕಾಟ್, ಕತ್ತಿಯಾಟ್ ಉಮ್ಮತಾಟ್ ಹಾಗು ವಾಲಗತಾಟ್ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.