
ಗೋಣಿಕೊಪ್ಪಲು: ಕೊಡವ ಸಾಂಪ್ರದಾಯಿಕ ನೃತ್ಯ, ಕುಣಿತ, ಜಾನಪದ ಕಲೆಗಳನ್ನು ಬಿಂಬಿಸುವ ಕುಂದ ಸಮೀಪದ ಪುತ್ತರಿಕೋಲ್ ಮಂದ್ ವಿಜೃಂಭಣೆಯಿಂದ ಜರುಗಿತು.
ಕೈಮುಡಿಕೆ ಕೋಲ್ ಮಂದ್ ತಕ್ಕ ಮುಖ್ಯಸ್ಥ ಅಡ್ಡಂಡ ಪ್ರಕಾಶ್ ಕುಶಾಲಪ್ಪ ನೇತೃತ್ವದಲ್ಲಿ ಮೂರು ನಾಡಿನ ತಕ್ಕ ಮುಖ್ಯಸ್ಥರು ಮೂರು ಕಡೆಯಿಂದ ಓಡಿ ಬಂದು ಮಂದ್ ಮಧ್ಯ ಭಾಗದಲ್ಲಿರುವ ಆಲದ ಮರಕ್ಕೆ ಕೋಲು ಬಾರಿಸುವ ಮೂಲಕ ಸಂಭ್ರಮಕ್ಕೆ ಚಾಲನೆ ನೀಡಿದರು. ಒಟ್ಟಾಗಿ ಸೇರಿ ಪುತ್ತರಿ ಕೋಲು ಹೊಡೆಯುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡ್ ನಾಡುಗಳ ಜನತೆ ಒಂದೆಡೆ ಸೇರಿ ವರ್ಷಕ್ಕೊ ಒಮ್ಮೆ ನಡೆಸುವ ಪುತ್ತರಿಕೋಲ್ ಮಂದ್ನಲ್ಲಿ ಕೊಡವ ಉಡುಗೆ ತೊಟ್ಟ ಪುರುಷರು ಪರೆಯಕಳಿ, ಕೋಲಾಟ್, ಕತ್ತಿಯಾಟ್, ಕಪ್ಪೆಯಾಟ್, ಬಾಳೋಪಾಟ್ ನಡೆಸಿಕೊಟ್ಟರೆ, ಮಹಿಳೆಯರು ಉಮ್ಮತ್ತಾಟ್, ಬೊಳಕಾಟ್ ನೃತ್ಯದ ಮೂಲಕ ನೆರೆದಿದ್ದ ಪ್ರೇಕ್ಷರನ್ನು ರಂಜಿಸಿದರು. ಸಂಭ್ರಮದ ಪುತ್ತರಿ ಕೋಲಾಟವನ್ನು ನೋಡಲು ಮೂರು ನಾಡುಗಳ ಸಾವಿರಾರು ಪ್ರೇಕ್ಷಕರು ಸೇರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಬಾಚಿರಣಿಯಂಡ ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಪೊಮ್ಮಕಡ ಪರಿಷತ್ ಅಧ್ಯಕ್ಷೆ ಬಾಚಿರಣಿಯಂಡ ರಾಣು ಅಪ್ಪಣ್ಣ ದಂಪತಿಗಳನ್ನು ಸನ್ಮಾನಿಸಲಾಯಿತು.
ಬಾಚರಣಿಯಂಡ ರಾಣು ಅಪ್ಪಣ್ಣ ಮಾತನಾಡಿ, ‘ಕೊಡಗಿನ ಆಚಾರ, ವಿಚಾರ, ಪದ್ಧತಿ, ಪರಂಪರೆ ಉಳಿಸಿ ಬೆಳೆಸಿ ಕಿರಿಯರಿಗೆ ತಿಳುವಳಿಕೆ ನೀಡಿರುವುದು ನಮ್ಮ ಕರ್ತವ್ಯ’ ಎಂದರು.
ಬಾಚಿರಣಿಯಂಡ ಅಪ್ಪಣ್ಣ ಮಾತನಾಡಿದರು. ಬೇರಳಿನಾಡ್ ತಕ್ಕ ಮಳುವಂಡ ಭುವೇಶ್ ದೇವಯ್ಯ, ಕುತ್ತ್ ನಾಡ್ ತಕ್ಕ ಪಂದಿಮಾಡ ರಮೇಶ್ ಅಚ್ಚಪ್ಪ, ಮೂಂದ್ ನಾಡ್ ಗೌರವ ಕಾರ್ಯದರ್ಶಿ ನಾಳಿಯಮ್ಮಂಡ ಉಮೇಶ್ ಕೇಚಮ್ಮಯ್ಯ, ಬೇರಳಿನಾಡ್ ಕಾರ್ಯದರ್ಶಿ ಅಪ್ಪಂಡೇರಂಡ ಮೋಹನ್, ಬೊಟ್ಟಿಯತ್ ನಾಡ್ ಸಹ ಕಾರ್ಯದರ್ಶಿ ತೀತಮಾಡ ಶಿವಮಣಿ ಕರುಂಬಯ್ಯ ಹಳ್ಳಿಗಟ್ಟ್ ಊರು ತಕ್ಕ ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.