ADVERTISEMENT

ಕೊಡಗು: ಕೇಂದ್ರ ತಂಡದಿಂದ ಮಳೆ ಹಾನಿ ಅಧ್ಯಯನ

ಹೆಲಿಕಾಪ್ಟರ್ ಮೂಲಕ ಜಿಲ್ಲೆಗೆ ಆಗಮನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 4:54 IST
Last Updated 8 ಸೆಪ್ಟೆಂಬರ್ 2020, 4:54 IST
ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ನೇತೃತ್ವದ ಕೇಂದ್ರ ತಂಡವನ್ನು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಬರಮಾಡಿಕೊಂಡರು.
ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ನೇತೃತ್ವದ ಕೇಂದ್ರ ತಂಡವನ್ನು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಬರಮಾಡಿಕೊಂಡರು.    

ಮಡಿಕೇರಿ: ಮಳೆಯಿಂದ ಆಗಿರುವ ನಷ್ಟದ ಅಧ್ಯಯನ ನಡೆಸಲು, ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ನೇತೃತ್ವದ ಕೇಂದ್ರ ತಂಡವು ಮಂಗಳವಾರ ಕೊಡಗು ಜಿಲ್ಲೆಗೆ ಆಗಮಿಸಿದೆ.

ಸೋಮವಾರ ಬೆಂಗಳೂರಿಗೆ ಬಂದಿದ್ದ ಅಧಿಕಾರಿಗಳು, ಅಲ್ಲಿಂದ ಕೊಡಗಿನ ಕುಶಾಲನಗರದ ಕೂಡಿಗೆಯ ಸೈನಿಕ ಶಾಲಾ ಆವರಣದಲ್ಲಿರುವ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು.

ಪ್ರತಾಪ್‌ ಅವರೊಂದಿಗೆ ಅಧಿಕಾರಿಗಳಾದ ಮನೋಜ್‌ ಕುಮಾರ್‌ ಹಾಗೂ ಡಾ.ಭಾರ್ತೇಂದು ಕುಮಾರ್‌ ಸಿಂಗ್‌ ಇದ್ದಾರೆ.

ADVERTISEMENT

ಕೂಡಿಗೆ ಸೈನಿಕ ಶಾಲಾ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರಿಂದ ಮಳೆ ಹಾನಿಯ ವಿವರ ಪಡೆದುಕೊಂಡ ಬಳಿಕ ಮಡಿಕೇರಿ ತಾಲ್ಲೂಕಿನ ಕಡಗದಾಳು ಬಳಿಯ ಬೊಟ್ಲಪ್ಪ ಪೈಸಾರಿ ಭೂಕುಸಿತ ಪ್ರದೇಶ, ಚೇರಂಗಾಲ ಬಳಿ ಕರಿಮೆಣಸು ತೋಟ ಹಾನಿ, ತಲಕಾವೇರಿಯ ಗಜಗಿರಿ ಬೆಟ್ಟ ಕುಸಿತದ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಲಿದ್ದಾರೆ. ಇಡೀ ದಿನ ಜಿಲ್ಲೆಯ ವಿವಿಧ ಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸುವ ಸಾಧ್ಯತೆಯಿದೆ.

ಆಗಸ್ಟ್‌ ಮೊದಲ ವಾರದಲ್ಲಿ ಕೊಡಗಿನಲ್ಲಿ ಭಾರಿ ಮಳೆ ಸುರಿದು ಹಾನಿ ಸಂಭವಿಸಿತ್ತು. ತಲಕಾವೇರಿಯಲ್ಲಿ ಗಜಗಿರಿ ಬೆಟ್ಟ ಕುಸಿದು ಐವರು ಸಾವನ್ನಪ್ಪಿದ್ದರು. ಚೇರಂಗಾಲ, ಕೋರಂಗಾಲ, ಭಾಗಮಂಡಲ, ನೆಲ್ಯಹುದಿಕೇರಿ, ಭೇತ್ರಿ, ನಾ‍ಪೋಕ್ಲು ಭಾಗದಲ್ಲಿ ಬೆಳೆ ನಷ್ಟವಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.