ಕುಶಾಲನಗರ: ಉತ್ತರ ಕೊಡಗಿನ ಪವಿತ್ರ ಕಾವೇರಿ ನದಿ ದಂಡೆಯಲ್ಲಿರುವ ಕಣಿವೆ ಬಳಿ ಸ್ಥಿತಿಗೊಂಡಿರುವ ಶ್ರೀರಾಮಲಿಂಗೇಶ್ವರ ದೇವಾಲಯ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ.
ಪ್ರತಿ ವರ್ಷ ಏಪ್ರಿಲ್ ನಲ್ಲಿ ನಡೆಯುವ ರಾಮಲಿಂಗೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮರಥೋತ್ಸವ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಿದೆ. ಹಿಂದೂ, ಮುಸ್ಲಿಂ, ಕೈಸ್ತ ಸಮುದಾಯದ ಜನರರು ಒಟ್ಟಾಗಿ ಸೇರಿ ನಡೆಸುವ ಜಾತ್ರೆಯು ಭಾವೈಕ್ಯd ಸಂಕೇತವಾಗಿದೆ. ಶ್ರೀರಾಮದೇವರ ಪಾದ ಸ್ಪರ್ಶದಿಂದ ಈ ಭೂಮಿ ಪುಣ್ಯಕ್ಷೇತ್ರವಾಗಿ ಮಾರ್ಪಟ್ಟಿದೆ. ದಕ್ಷಿಣಗಂಗೆ ಕಾವೇರಿ ನದಿಯ ದಂಡೆ ಮೇಲಿರುವ ರಾಮಲಿಂಗೇಶ್ವರ ದೇವಸ್ಥಾನ ಚೋಳರ ಕಾಲದಲ್ಲಿ ನಿರ್ಮಾಣಗೊಂಡ ಐತಿಹ್ಯವಿದೆ.
‘ಸೀತೆ ಅಪಹರಣಗೊಂಡ ಸಂದರ್ಭ ಸೀತೆಯನ್ನು ಹುಡುಕಿಕೊಂಡು ಆಂಜನೇಯ ಮತ್ತು ಲಕ್ಷ್ಮಣನೊಂದಿಗೆ ಬಂದ ಶ್ರೀರಾಮ ಇಲ್ಲಿನ ಪ್ರಶಾಂತ, ರಮಣೀಯ ಪರಿಸರದಲ್ಲಿ ಕೆಲಕಾಲ ವಿಶ್ರಮಿಸಿ ಮುಂದೆ ಸಾಗಿದರು ಎಂದು ಹೇಳಲಾಗುತ್ತದೆ. ನದಿ ದಡದಲ್ಲಿ ತಪಸ್ಸು ಮಾಡುತ್ತಿದ್ದ ವ್ಯಾಘ್ರ ಮಹರ್ಷಿ ಶ್ರೀರಾಮನಿಗೆ ಅಜ್ಞೆ ಮಾಡಿ ಪೂಜೆಗಾಗಿ ಶಿವಲಿಂಗವನ್ನು ತರಲು ಆಂಜನೇಯನನ್ನು ಕಾಶಿಗೆ ಕಳುಹಿಸಲು ತಿಳಿಸುತ್ತಾನೆ. ಆದರೆ,ಆಂಜನೇಯ ಶಿವಲಿಂಗ ತರುವುದು ವಿಳಂಬವಾದ ಕಾರಣ ಶ್ರೀರಾಮ ಅಲ್ಲಿಯೇ ಮರಳಿ ನಿಂದ ಶಿವಲಿಂಗವನ್ನು ಮಾಡಿ ಪೂಜೆಗೆ ಅನುವು ಮಾಡಿಕೊಟ್ಟು ಅಲ್ಲಿಂದ ತೆರಳಿದ ಎನ್ನುವ ಪ್ರತೀತಿಯೂ ಇದೆ.
ಹೀಗಾಗಿ, ಕಣಿವೆ ದೇವಸ್ಥಾನದಲ್ಲಿರುವ ಲಿಂಗವನ್ನು ಮರಳುಲಿಂಗ ಎಂದೇ ಕರೆಯಲಾಗುತ್ತದೆ’ ಎಂದು ದೇವಾಲಯದ ಪ್ರಧಾನ ಅರ್ಚಕ ಎಚ್.ಆರ್.ರಾಘವೇಂದ್ರ ಆಚಾರ್ ಹೇಳುತ್ತಾರೆ.
ಆಂಜನೇಯನೂ ಶಿವಲಿಂಗವನ್ನು ತಂದದ್ದರಿಂದ ಆ ಲಿಂಗವನ್ನು ಪಕ್ಕದಲ್ಲೇ ಇರುವ ಲಕ್ಷ್ಮಣೇಶ್ವರ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸಲಾಯಿತು ಎಂದೂ ಹೇಳಲಾಗುತ್ತದೆ.
ಕಾವೇರಿ ನದಿ ಪೂರ್ವಾಭಿಮುಖವಾಗಿ ಹರಿದಿರುವ ಇಂತಹ ಪುಣ್ಯ ಕ್ಷೇತ್ರ ನಾಡಿನಲ್ಲಿ ಎಲ್ಲಿಯೂ ಕಾಣಸಿಗದು. ಶ್ರೀರಾಮಲಕ್ಷ್ಮಣ ಹಾಗೂ ಆಂಜನೇಯ ಅವರ ಪಾದ ಸ್ಪರ್ಶಗೊಂಡ ಈ ಸ್ಥಳ ಶ್ರೇಷ್ಠವಾಗಿದೆ.ಎಚ್.ಆರ್.ರಾಘವೇಂದ್ರ ಆಚಾರ್ ಪ್ರಧಾನ ಅರ್ಚಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.