
ಸುಂಟಿಕೊಪ್ಪ: ವಿವಿಧ ಜನಾಂಗದ ಜನರು ಒಟ್ಟಾಗಿ ಸೇರಿ ಇಲ್ಲಿನ ಹೃದಯ ಭಾಗದಲ್ಲಿ ನಿರ್ಮಿಸಿರುವ ಕನ್ನಡ ವೃತ್ತಕ್ಕೀಗ 31ರ ಸಂಭ್ರಮ.
ರಾಜ್ಯದ ವಿವಿಧ ಕಡೆಗಳಿಂದ ಉದ್ಯೋಗ ಅರಸಿ ಸುಂಟಿಕೊಪ್ಪಕ್ಕೆ ಬಂದಿರುವ ತೆಲುಗು, ಮಲಯಾಳಿ, ತುಳು, ತಮಿಳು, ಉರ್ದು ಮೊದಲಾದ ಭಾಷೆಗಳನ್ನಾಡುವ ಜನರು ಒಟ್ಟಾಗಿ ಸೇರಿ ಕನ್ನಡದ ತೇರನ್ನು ಎಳೆಯುತ್ತಾ ವಿವಿಧ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವುದು ಇದರ ಹೆಗ್ಗಳಿಕೆ.
ಗ್ರಾಮ ಪಂಚಾಯಿತಿಯ ಸಹಕಾರ ಪಡೆದು ಕಳೆದ 30 ವರ್ಷಗಳ ಹಿಂದೆ ಪುಟ್ಟದಾದ ಕನ್ನಡ ವೃತ್ತವನ್ನು ನಿರ್ಮಿಸಿ ಪ್ರತಿ ವರ್ಷ ಕಾವೇರಿ ಕನ್ನಡ ಕಲಾಸಂಘ, ಸುಂಟಿಕೊಪ್ಪ ಪ್ರತಿಭಾ ಬಳಗ ಸದಸ್ಯರು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದರು. ಆನಂತರ ಸುಂಟಿಕೊಪ್ಪ ಪ್ರತಿಭಾ ಬಳಗ ಸದಸ್ಯರು ಇಲ್ಲಿ ಡ್ರಮ್ಮಿನಲ್ಲಿ ಧ್ವಜಸ್ಥಂಭ ನೆಟ್ಟು ಧ್ವಜಾರೋಹಣ ಮಾಡುತ್ತಿದ್ದರು. ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಕ್ಲಾಡಿಯಾಸ್ ಲೋಬೋ ಅವರ ಪರಿಶ್ರಮದಿಂದ ಇಲ್ಲಿ ಸಿಮೆಂಟ್ ತೊಟ್ಟಿ ನಿರ್ಮಿಸಲಾಯಿತು. ನಂತರ ಕನ್ನಡ ರಾಜ್ಯೋತ್ಸವ ದಿನದಂದು ಶಾಲೆಗಳು, ಗ್ರಾಮ ಪಂಚಾಯಿತಿ, ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡದ ಮನಸುಗಳಿಗೆ ಸ್ಪೂರ್ತಿ ತುಂಬಲಾಯಿತು.
ರಾಷ್ಟ್ರೀಯ ಹೆದ್ದಾರಿ ಕೆಲಸದ ವೇಳೆ ಹೆದ್ದಾರಿ ಪ್ರಾಧಿಕಾರವು ಈ ಸಿಮೆಂಟ್ ತೊಟ್ಟಿಯನ್ನು ತೆರವುಗೊಳಿಸಿತು. ನಂತರ ಮತ್ತೆ ಅದೇ ಸ್ಥಳದಲ್ಲಿ ಅಳವಡಿಸಲು ಹೋದಾಗ ಪೊಲೀಸರು ಅಡ್ಡಿಪಡಿಸಿದರು. ಆದರೆ, ವೃತ್ತವನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಚುಟುಕು ಸಾಹಿತಿ ವಹೀದ್ ಜಾನ್, ವಿನ್ಸೆಂಟ್ ಸೇರಿದಂತೆ ಇತರರು ಪಟ್ಟು ಹಿಡಿದು ಅದೇ ಸ್ಥಳದಲ್ಲಿ ನೆಲೆಗೊಳಿಸಿದರು.
ನಂತರ ಸಿಮೆಂಟ್ನಿಂದ ವೃತ್ತವನ್ನು ನಿರ್ಮಿಸಿ ವೃತ್ತಕ್ಕೆ ಅರಶಿನ- ಕೆಂಪು ಬಣ್ಣ ಹಚ್ಚಿ ಕನ್ನಡ ವೃತ್ತ ಎಂದು ಬರೆಯಿಸಿ ಭದ್ರವಾದ ಅಡಿಪಾಯ ಹಾಕಿಕೊಟ್ಟರು. ನಂತರ ಸ್ನೇಹಿತರ ಕೂಟದ ಸದಸ್ಯರು, ನಂತರನಮ್ಮ ಸುಂಟಿಕೊಪ್ಪ ಬಳಗ ಇದರ ಉಸ್ತುವಾರಿ ವಹಿಸಿಕೊಂಡಿತು.
2019 ರಲ್ಲಿ ಈ ವೃತ್ತಕ್ಕೆ 25 ವರ್ಷ ತುಂಬಿದ್ದರಿಂದ ನಮ್ಮ ಸುಂಟಿಕೊಪ್ಪ ಬಳಗದ ಸದಸ್ಯರು ಕನ್ನಡ ವೃತ್ತಕ್ಕೆ ದಾನಿಗಳ ಸಹಾಯದಿಂದ ಸ್ಟೀಲ್ನಿಂದ ‘ಅ ದಿಂದ ಅಃ’ ದವರೆಗಿನ ಕನ್ನಡ ಅಕ್ಷರಮಾಲೆಯ ರಕ್ಷಣಾ ಕವಚ ಅಳವಡಿಸಿದರು.
2020 ರ ನಂತರ ಈ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ಹೊಣೆಗಾರಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ವಹಿಸಿಕೊಂಡಿದೆ. ಈ ವರ್ಷ ನಡೆಯುವ ಕನ್ನಡ ರಾಜ್ಯೋತ್ಸವಕ್ಕೆ ಪಿ.ಎಫ್.ಸಭಾಸ್ಟಿನ್, ವಿನ್ಸೆಂಟ್, ಕೆ.ಎಸ್.ಅನಿಲ್ ಕುಮಾರ್, ಅಶೋಕ್ ಶೇಟ್, ಸೇರಿದಂತೆ ಇತರರು ಕಾರ್ಯನ್ಮುಖರಾಗಿದ್ದಾರೆ. ಈಗಾಗಲೇ ಎಲ್ಲ ಸಕಲ ಸಿದ್ಧತೆಗಳು ನಡೆದು ಅಂತಿಮ ಸಿದ್ಧತೆಗಳಿಗೆ ಅಣಿಯಾಗುತ್ತಿದ್ದಾರೆ.
ಇಂದು ರಾಜ್ಯೋತ್ಸವ
ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.1 ರಂದು ಬೆಳಿಗ್ಗೆ 9.30ಕ್ಕೆ ಕನ್ನಡ ವೃತ್ತದಲ್ಲಿ ಸುಂಟಿಕೊಪ್ಪದ ಹಿರಿಯ ಪತ್ರಕರ್ತ ಬಿ.ಸಿ.ದಿನೇಶ್ ಧ್ವಜಾರೋಹಣ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಕಸಾಪ ಹೋಬಳಿ ಅಧ್ಯಕ್ಷ ಪಿ.ಎಫ್.ಸಬಾಸ್ಟೀನ್ ವಹಿಸಲಿದ್ದಾರೆ. ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜೋವಿಟಾ ವಾಸ್ ದಿನದ ಮಹತ್ವ ತಿಳಿಸಲಿದ್ದಾರೆ. ಇದೇ ವೇಳೆ ಹಿರಿಯ ಪತ್ರಕರ್ತ ಬಿ.ಸಿ.ದಿನೇಶ್ ಹಾಗೂ ಜೋವಿಟಾ ವಾಸ್ ಅವರನ್ನು ಸನ್ಮಾನಿಸಲಾಗುತ್ತದೆ. ಗ್ರಾಮ ಪಂಚಾಯತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಉಪಾಧ್ಯಕ್ಷೆ ಶಿವಮ್ಮ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.