ADVERTISEMENT

ರೆಡ್‌ಕ್ರಾಸ್‌ನಿಂದ ಅಗತ್ಯ ನೆರವು: ನಾಗಣ್ಣ

ಮಡಿಕೇರಿಯ ಸ್ಟೀವರ್ಟ್‌ ಹಿಲ್‌ನಲ್ಲಿ ರೆಡ್‌ಕ್ರಾಸ್‌ ಭವನ ನಿರ್ಮಾಣಕ್ಕೆ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 12:31 IST
Last Updated 27 ಫೆಬ್ರುವರಿ 2020, 12:31 IST
ಮಡಿಕೇರಿಯ ಸ್ಟೀವರ್ಟ್‌ ಹಿಲ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೆಡ್‌ಕ್ರಾಸ್ ಭವನಕ್ಕೆ ಗುರುವಾರ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್ ಅವರು ಭೂಮಿ ಪೂಜೆ ನೆರವೇರಿಸಿದರು
ಮಡಿಕೇರಿಯ ಸ್ಟೀವರ್ಟ್‌ ಹಿಲ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೆಡ್‌ಕ್ರಾಸ್ ಭವನಕ್ಕೆ ಗುರುವಾರ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್ ಅವರು ಭೂಮಿ ಪೂಜೆ ನೆರವೇರಿಸಿದರು   

ಮಡಿಕೇರಿ: ಕೊಡಗು ರೆಡ್‌ಕ್ರಾಸ್ ವತಿಯಿಂದ ₹ 1.30 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ರೆಡ್‌ಕ್ರಾಸ್ ಭವನಕ್ಕೆ ನಗರದ ಸ್ಟೀವರ್ಟ್‌ ಹಿಲ್‌ನಲ್ಲಿ ಜಿಲ್ಲಾ ರೆಡ್‌ಕ್ರಾಸ್ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಗುರುವಾರ ಭೂಮಿಪೂಜೆ ನೆರವೇರಿಸಿದರು.

ಬಳಿಕ ನಡೆದ ಸಮಾರಂಭದಲ್ಲಿ ರಾಜ್ಯ ರೆಡ್‌ಕ್ರಾಸ್‌ ಸಭಾಪತಿ ನಾಗಣ್ಣ ಮಾತನಾಡಿ, ಕೊಡಗಿನಲ್ಲಿ ಎರಡು ವರ್ಷಗಳು ಪ್ರಕೃತಿ ವಿಕೋಪ ಸಂಭವಿಸಿದ್ದನ್ನು ಗಮನಿಸಿ ಮುಂದೆ ಇಂಥ ಯಾವುದೇ ಪ್ರಾಕೃತಿಕ ಅನಾಹುತ ಸಂಭವಿಸಿದ್ದಲ್ಲಿ ರೆಡ್‌ಕ್ರಾಸ್‌ನಿಂದ ಅಗತ್ಯ ನೆರವನ್ನು ಸಕಾಲದಲ್ಲಿ ಸಂತ್ರಸ್ತರಿಗೆ ನೀಡುವ ಉದ್ದೇಶದಿಂದ ರೆಡ್‌ಕ್ರಾಸ್ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಘಟಕದಲ್ಲಿ ಭವನ ನಿರ್ಮಾಣಕ್ಕೆ ₹ 50 ಲಕ್ಷ ಅನುದಾನವಿದೆ. ರಾಜ್ಯ ಸಮಿತಿಯಿಂದ ₹ 25 ಲಕ್ಷ ಇದೀಗ ನೀಡಲಾಗಿದ್ದು ಮುಂದಿನ ಹಂತದಲ್ಲಿ ಇನ್ನೂ ₹ 10 ಲಕ್ಷ ಅನುದಾನ ನೀಡಲಾಗುತ್ತದೆ. ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೆಡ್‌ಕ್ರಾಸ್‌ಗೆ ಜನಪ್ರತಿನಿಧಿಗಳೂ ನೀಡುವ ಅನುದಾನ ಬಳಸಿಕೊಂಡು ಸುಸಜ್ಜಿತ ಸಭಾಭವನ, ಗೋದಾಮು, ಕಚೇರಿಯನ್ನು ನಿರ್ಮಿಸಲಾಗುತ್ತದೆ ಎಂದರು.

ADVERTISEMENT

ರೆಡ್‌ಕ್ರಾಸ್ ಪ್ರಾರಂಭವಾಗಿ 100 ವರ್ಷವಾಗಿದೆ. ಈವರೆಗೆ ಸಾಮಾಜಿಕ ಸೇವಾ ಕಾಯ೯ಗಳಿಗಾಗಿ ಜಾಗತಿಕ ಮಟ್ಟದಲ್ಲಿ ರೆಡ್‌ಕ್ರಾಸ್ ನಾಲ್ಕು ನೊಬೆಲ್ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಕೊಡಗು ರೆಡ್‌ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ, ₹ 1.30 ಕೋಟಿ ವೆಚ್ಚದಲ್ಲಿ 12.50 ಸೆಂಟ್ ಜಾಗದಲ್ಲಿ ನಿಮಾ೯ಣವಾಗುತ್ತಿರುವ ರೆಡ್‌ಕ್ರಾಸ್ ಭವನವನ್ನು ಒಂದು ವಷ೯ದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ನಿಮಾ೯ಣ ಮಾಡುವ ಗುರಿಯಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ಆರ್.ಮುರಳೀಧರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ 1952ರಲ್ಲಿ ರೆಡ್‌ಕ್ರಾಸ್ ಅಂದು ಕೊಡಗು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿ.ಎಂ.ಪೂಣಚ್ಚ, ಕಮಿಷನರ್ ಬೇಡಿ ಆಸಕ್ತಿಯಿಂದಾಗಿ ಪ್ರಾರಂಭವಾಯಿತು ಎಂದು ಮಾಹಿತಿ ನೀಡಿದರು.

ರಾಜ್ಯ ರೆಡ್‌ಕ್ರಾಸ್‌ನ ಮಾಜಿ ಪ್ರಧಾನ ಕಾಯ೯ದಶಿ೯ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಕೊಡಗು ಜಿಲ್ಲಾ ರೆಡ್‌ಕ್ರಾಸ್‌ ಸ್ವಂತ ಭವನದ ಕನಸು ಇದೀಗ ನನಸಾಗುವ ಹಂತದಲ್ಲಿದೆ ಎಂದು ಶ್ಲಾಘಿಸಿದರು.

ರಾಜ್ಯ ಸಮಿತಿಯ ಮಾಜಿ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ, ಕೊಡಗು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ವಿಶಾಲ್, ನಿರ್ಮಿತಿ ಕೇಂದ್ರದ ಅಧಿಕಾರಿ ಸಚಿನ್, ಹಿರಿಯ ಪತ್ರಕರ್ತ ಜಿ.ರಾಜೇಂದ್ರ, ನಗರಸಭೆ ಪೌರಾಯುಕ್ತ ಎಂ.ಎಲ್.ರಮೇಶ್, ರೆಡ್‌ಕ್ರಾಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್‌.ಟಿ.ಅನಿಲ್, ಸ್ಯಾಮ್ ಜೊಸೇಫ್, ನಿದೇ೯ಶಕರಾದ ಪ್ರಸಾದ್ ಗೌಡ, ಕೆ.ಡಿ.ದಯಾನಂದ್, ಎಂ.ಧನಂಜಯ್, ಹನೀಫ್, ಕಚೇರಿ ಕಾಯ೯ದಶಿ೯ ಕೌಶಿ ಪೊನ್ನಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.