ADVERTISEMENT

ರಸ್ತೆ ಗುಂಡಿಮಯ; ಸಂಚಾರ ಅಯೋಮಯ

ಸುಂಟಿಕೊಪ್ಪ: ಪಂಚಾಯಿತಿ ವ್ಯಾಪ್ತಿಯ ಎಲ್ಲ ರಸ್ತೆಗಳ ದುರಸ್ತಿಗೆ ನಾಗರಿಕರ ಆಗ್ರಹ

ಸುನಿಲ್ ಎಂ.ಎಸ್.
Published 11 ನವೆಂಬರ್ 2020, 7:27 IST
Last Updated 11 ನವೆಂಬರ್ 2020, 7:27 IST
ಸುಂಟಿಕೊಪ್ಪದ ಗುಡ್ಡಪ್ಪ ರೈ ಬಡಾವಣೆ ರಸ್ತೆ ಗುಂಡಿ ಬಿದ್ದಿರುವುದು
ಸುಂಟಿಕೊಪ್ಪದ ಗುಡ್ಡಪ್ಪ ರೈ ಬಡಾವಣೆ ರಸ್ತೆ ಗುಂಡಿ ಬಿದ್ದಿರುವುದು   

ಸುಂಟಿಕೊಪ್ಪ: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಬಡಾವಣೆಗಳ ರಸ್ತೆಗಳು ಹದಗೆಟ್ಟು ಗುಂಡಿಮಯವಾಗಿದ್ದು, ವಾಹನ ಸಂಚಾರವಿರಲೀ ಜನ ಸಂಚಾರಕ್ಕೂ ಕಷ್ಟವಾಗಿದೆ.

ಇಲ್ಲಿನ ಗುಡ್ಡಪ್ಪ ರೈ ಬಡಾವಣೆ ರಸ್ತೆಗಳು ಸಂಪೂರ್ಣವಾಗಿ ಗುಂಡಿಬಿದ್ದಿವೆ. ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರು ನಿಧಾನವಾಗಿಯೇ ಚಲಿಸಬೇಕು. ವೇಗವಾಗಿ ಸಂಚರಿಸಿದರೇ ಅಪಾಯ ಕಟ್ಟಿಟ್ಟಬುತ್ತಿ. ಇದೇ ಪರಿಸ್ಥಿತಿ ಶಿವರಾಮ್ ಬಡಾವಣೆ
ಯದ್ದೂ ಆಗಿದೆ. ವಯೋವೃದ್ಧರು ಮತ್ತು ಮಕ್ಕಳು ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು. ಕೆಲವರು ಬಿದ್ದು ಗಾಯ
ವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಉದಾಹರಣೆಗಳು ಬಹಳಷ್ಟಿವೆ.

ಆಟೊ ಚಾಲಕರು ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ನಿತ್ಯ ಓಡಾಟಕ್ಕೆ ಸಮಸ್ಯೆಯಾಗಿದೆ. ಈ ಬಡಾವಣೆಗಳಲ್ಲಿ ಇನ್ನೂರಕ್ಕೂ ಹೆಚ್ಚಿನ ಮನೆಗಳಿದ್ದು, ಅಂಗನವಾಡಿ, ದೇವಸ್ಥಾನ, ಮಸೀದಿಗಳಿಗೆ ತೆರಳಲು ಎಚ್ಚರಿಕೆ ವಹಿಸಬೇಕು.

ADVERTISEMENT

ಅಂಗನವಾಡಿಗೆ ತೆರಳುವ ರಸ್ತೆಯ ತಿರುವಿನಲ್ಲಿ ರಸ್ತೆ ಮತ್ತು ಮೋರಿ ಎರಡೂ ಕಿತ್ತು ಹೋಗಿವೆ. ಬಳಷ್ಟು ಮಂದಿ ಸವಾರರು ಮತ್ತು ನಾಗರಿಕರು ಜಾರಿ ಬಿದ್ದಿದ್ದಾರೆ. ಈ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಾಹನ ಚಾಲಕರು, ಸಾರ್ವಜನಿಕರು ಸ್ಥಳೀಯ ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ತೆರಳುವ ರಸ್ತೆಯ ಕತೆಯೂ ಅಯೋಮಯವಾಗಿದೆ. ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ರೋಗಿಗ
ಳನ್ನು ಕೊಂಡೊಯ್ಯಲು ಕಷ್ಟಕರಸ್ಥಿತಿ ಇದೆ.

ಸಮೀಪದ ಶಾಂತಗೇರಿ-ನಾಕೂರು ತೆರಳುವ ರಸ್ತೆಯು ಗುಂಡಿಮಯವಾಗಿದೆ. ಸುಮಾರು ಆರು ಕಿ.ಮೀ ಉದ್ದದ ರಸ್ತೆಯಲ್ಲಿ ಸಂಚ
ರಿಸುವುದು ತ್ರಾಸದಾಯಕ. 10 ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಗ್ರಾಮ ಸಡಾಕ್ ಯೋಜನೆಯಡಿ ₹ 118.75 ಲಕ್ಷ ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ರಸ್ತೆ ನಿರ್ವಹಣೆ ಇಲ್ಲದೇ ರಸ್ತೆಗೆ ಗುಂಡಿಗಳು ಬಿದ್ದು ಹದಗೆಟ್ಟು ಹೋಗಿದೆ.

ರಾಷ್ಟ್ರೀಯ ಹೆದ್ದಾರಿ 275ರಲ್ಲಿಯೂ ಅಲ್ಲಲ್ಲಿ ರಸ್ತೆಗಳು ಗುಂಡಿಬಿದ್ದಿವೆ. ಚುನಾವಣೆಯ ಸಂದರ್ಭದಲ್ಲಿ ಮತಕ್ಕಾಗಿ ಜನಪ್ರತಿನಿಧಿಗಳು ಭರವಸೆಯ ಮಹಾಪೂರವೇ ಮತದಾರರಿಗೆ ಹರಿಸುತ್ತಾರೆ. ಗೆದ್ದ ನಂತರ ಇತ್ತ ಸುಳಿಯುವುದೇ ಇಲ್ಲ. ಇನ್ನಾದರೂ ಜನಪ್ರತಿನಿಧಿಗಳು ರಸ್ತೆಗಳನ್ನು ದುರಸ್ತಿ ಪಡಿಸಿ ಮುಂದಾಗುವ ಅನಾಹುತ ತಪ್ಪಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.