ವಿರಾಜಪೇಟೆ: ಜಿಲ್ಲಾಡಳಿತ ಜಾರಿಗೆ ತಂದ ಕೋವಿಡ್ ಮಾರ್ಗಸೂಚಿಯಂತೆ ಬುಧವಾರ ಪಟ್ಟಣವನ್ನು ದಿನವಿಡಿ ಬಂದ್ ಮಾಡಲಾಗಿತ್ತು.
ಪಟ್ಟಣದಲ್ಲಿ ಜನ ಹಾಗೂ ವಾಹನಗಳ ಸಂಚಾರವಿಲ್ಲದೆ ರಸ್ತೆಗಳು ಖಾಲಿಖಾಲಿಯಾಗಿ ಬಿಕೋ ಎನ್ನುತ್ತಿದ್ದವು.
ಬೆಳಿಗ್ಗೆ 6 ರಿಂದ 8 ರವರೆಗೆ ಹಾಲು ಹಾಗೂ ದಿನಪತ್ರಿಕೆ ಖರೀದಿಸಲು ಅವಕಾಶ ನೀಡಲಾಗಿತ್ತು. ಉಳಿದಂತೆ ಔಷಧಿ ಅಂಗಡಿಗಳು ದಿನವಿಡಿ ಕಾರ್ಯನಿರ್ವಹಿಸಿದವು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದ್ದರಿಂದ ಆಸ್ಪತ್ರೆಗೆ ಬರುವ ಹೊರರೋಗಿಗಳ ಸಂಖ್ಯೆ ವಿರಳವಾಗಿತ್ತು.
ಪಟ್ಟಣದ ಮಹಿಳಾ ಸಮಾಜದಲ್ಲಿ ಲಸಿಕೆಯ ಎರಡನೇ ಡೋಸ್ ಹಾಕಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು.
ಲಸಿಕೆ ಸಂಗ್ರಹವಿಲ್ಲದ್ದರಿಂದ ಮೊದಲ ಸಲ ಲಸಿಕೆ ಪಡೆಯಲು ಬಂದ ಜನ ಲಸಿಕೆ ದೊರೆಯದೆ ನಿರಾಸೆಯಿಂದ ಹಿಂದಿರುಗುತ್ತಿದದ್ದು ಕಂಡು ಬಂತು. ಹೊಸ ದಾಸ್ತಾನು ಬರುವವರೆಗೆ ಮೊದಲ ಲಸಿಕೆ ಪಡೆಯುವವರು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸಮೀಪದ ಕಾಕೋಟುಪರಂಬು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡನೇ ಹಂತದ ಲಸಿಕೆ ಪಡೆಯಲು ಬಂದಿದ್ದ ಸುಮಾರು 50 ಮಂದಿಗೆ ಬುಧವಾರ ಲಸಿಕೆ ನೀಡಲಾಯಿತು. ಬಳಿ ಲಸಿಕೆ ಖಾಲಿಯಾದ್ದರಿಂದ ಎರಡನೇ ಹಂತದ ಲಸಿಕೆ ಪಡೆಯುವ ನಿರೀಕ್ಷೆಯಲ್ಲಿ ಕೇಂದ್ರಕ್ಕೆ ಬಂದಿದ್ದ ಗ್ರಾಮಸ್ಥರು ಹಿಂದಿರುಗಬೇಕಾಯಿತು. ಲಸಿಕೆ ಅಭಾವದಿಂದ ಮೊದಲ ಹಂತದ ಲಸಿಕೆಯನ್ನು ನೀಡಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.