ADVERTISEMENT

ವೀರ ಸೈನಿಕರು ಆದರ್ಶವಾಗಲಿ: ಮೇಜರ್ ಎಸ್.ವೆಂಕಟಗಿರಿ

ನಿವೃತ್ತ ಸೇನಾಧಿಕಾರಿ ಮೇಜರ್ ಎಸ್.ವೆಂಕಟಗಿರಿ ಹೇಳಿಕೆ; ರೋಟರಿಯಿಂದ ಸನ್ಮಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 16:43 IST
Last Updated 25 ಫೆಬ್ರುವರಿ 2023, 16:43 IST
ಮಡಿಕೇರಿಯ ಜನರಲ್ ತಿಮ್ಮಯ್ಯ ವಸ್ತುಸಂಗ್ರಾಹಾಲಯದ ಅಮರ್ ಜವಾನ್ ಸ್ಮಾರಕದಲ್ಲಿ ಶನಿವಾರ ನಡೆದ ದೇಶಪ್ರೇಮ ಕುರಿತ ರೋಟರಿ ಜಿಲ್ಲಾ ಕಾರ್ಯಕ್ರಮದಲ್ಲಿ ಮಡಿಕೇರಿ ರೋಟರಿ ಸಂಸ್ಥೆ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ , ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ನಿವೃತ್ತ ಮೇಜರ್ ವೆಂಕಟಗಿರಿ ಮತ್ತು ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ ಅವರನ್ನು ಗೌರವಿಸಲಾಯಿತು. ರೋಟರಿ ಜಿಲ್ಲೆ 3181ನ ಗವರ್ನರ್ ಪ್ರಕಾಶ್ ಕಾರಂತ್ ಇದ್ದಾರೆ
ಮಡಿಕೇರಿಯ ಜನರಲ್ ತಿಮ್ಮಯ್ಯ ವಸ್ತುಸಂಗ್ರಾಹಾಲಯದ ಅಮರ್ ಜವಾನ್ ಸ್ಮಾರಕದಲ್ಲಿ ಶನಿವಾರ ನಡೆದ ದೇಶಪ್ರೇಮ ಕುರಿತ ರೋಟರಿ ಜಿಲ್ಲಾ ಕಾರ್ಯಕ್ರಮದಲ್ಲಿ ಮಡಿಕೇರಿ ರೋಟರಿ ಸಂಸ್ಥೆ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ , ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ನಿವೃತ್ತ ಮೇಜರ್ ವೆಂಕಟಗಿರಿ ಮತ್ತು ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ ಅವರನ್ನು ಗೌರವಿಸಲಾಯಿತು. ರೋಟರಿ ಜಿಲ್ಲೆ 3181ನ ಗವರ್ನರ್ ಪ್ರಕಾಶ್ ಕಾರಂತ್ ಇದ್ದಾರೆ   

ಮಡಿಕೇರಿ: ‘ತಮ್ಮ ಪ್ರಾಣವನ್ನು ಒತ್ತೆ ಇಟ್ಟು ದೇಶದ ಗಡಿ ಕಾಯುವ ವೀರ ಸೈನಿಕರು ನಮಗೆ ಆದರ್ಶವಾಗಬೇಕು’ ಎಂದು ವಿರಾಜಪೇಟೆಯ ಮೇಜರ್ ಎಸ್.ವೆಂಕಟಗಿರಿ ತಿಳಿಸಿದರು.

ಇಲ್ಲಿನ ಜನರಲ್ ತಿಮ್ಮಯ್ಯ ವಸ್ತುಸಂಗ್ರಾಹಾಲಯದ ಅಮರ್ ಜವಾನ್ ಸ್ಮಾರಕದಲ್ಲಿ ಶನಿವಾರ ನಡೆದ ದೇಶಪ್ರೇಮ ಕುರಿತ ರೋಟರಿ ಜಿಲ್ಲಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘18 ವರ್ಷದ ಸೈನಿಕ ಯೋಗೇಂದ್ರ ಸಿಂಗ್ ಯಾದವ್ ತನಗೆ 18 ಗುಂಡಿನೇಟುಗಳು ಕಾಲಿಗೆ ಬಿದ್ದಾಗಲೂ ದೇಶಕ್ಕಾಗಿ ಹೋರಾಡಿದರು. ಚೀನಾ ಗಡಿಯ ತವಾಂಗ್‌ನಲ್ಲಿ ಭಾರತೀಯ ಸೈನಿಕರು ಕ್ಷಣಕ್ಷಣವೂ ದೇಶ ರಕ್ಷಣೆ ಮಾಡುತ್ತಾ ಬಂದಿದ್ದಾರೆ. ಇಂಥ ವೀರ ಸೈನಿಕರು ನಮಗೆ ಆದರ್ಶವಾಗಬೇಕು. ನಮ್ಮ ದೇಶ ನಮಗೆ ಅನ್ನ ನೀಡುವ ತಾಯಿ ಎಂಬ ಮನೋಭಾವ ನಮ್ಮಲ್ಲಿ ಮೂಡಬೇಕು’ ಎಂದು ಪ್ರತಿಪಾದಿಸಿದರು.

ADVERTISEMENT

ನಿವೃತ್ತ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಮಾತನಾಡಿ, ‘ಭಾರತೀಯರು ಸುರಕ್ಷಿತ ಜೀವನ ನಡೆಸುವಲ್ಲಿ ನಮ್ಮ ಹೆಮ್ಮೆಯ ವೀರಸೈನಿಕರ ಕೊಡುಗೆ ಇದೆ. ಈಗ ಭಾರತಕ್ಕೆ ದೇಶದ ಹೊರಗಿನ ಶತ್ರುಗಳಿಗಿಂತ ದೇಶದ ಒಳಗಿನ ಗುಪ್ತ ಶತ್ರುಗಳ ವಿರುದ್ದ ಹೋರಾಡುವುದೇ ದೊಡ್ಡ ಸವಾಲಾಗಿದೆ’ ಎಂದು ತಿಳಿಸಿದರು.

ಸನ್ಮಾನಿಸಿ ಮಾತನಾಡಿದ ರೋಟರಿ ಜಿಲ್ಲೆ 3181ನ ಗವರ್ನರ್ ಪ್ರಕಾಶ್ ಕಾರಂತ್, ‘ದೇಶದ ಹಿರಿಮೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಯುವಪೀಳಿಗೆಯಲ್ಲಿ ದೇಶಪ್ರೇಮ ಮೂಡಿಸುವಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಯೋಜಿತವಾಗಬೇಕು. ಭಾರತದ ಅಪ್ರತಿಮ ಸೇನಾಧಿಕಾರಿಗಳನ್ನು ಯುವಪೀಳಿಗೆಗೆ ಪರಿಚಯಿಸುವ ಕಾರ್ಯಗಳು ನಡೆಯಬೇಕು’ ಎಂದರು.

ಈ ಉದ್ದೇಶಕ್ಕಾಗಿ ರೋಟರಿ ಜಿಲ್ಲೆ 3181 ಮಂಗಳೂರಿನಿಂದ ಮೈಸೂರಿನವರೆಗೆ ದೇಶಪ್ರೇಮ ಬಿಂಬಿಸುವ ಹಾಗೂ ಸಂದೇಶ ಸಾರುವ ವಾಹನಾ ಜಾಥಾ ಆಯೋಜಿಸಿದ್ದು 30 ರೋಟರಿ ಸದಸ್ಯರು ಪಾಲ್ಗೊಂಡಿದ್ದಾರೆ ಎಂದು ಹೇಳಿದರು.

ಮಡಿಕೇರಿ ರೋಟರಿ ಸಂಸ್ಥೆ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ , ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ನಿವೃತ್ತ ಮೇಜರ್ ವೆಂಕಟಗಿರಿ ಮತ್ತು ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಸಹಾಯಕ ಗವರ್ನರ್ ರತನ್ ತಿಮ್ಮಯ್ಯ, ಪಬ್ಲಿಕ್ ಇಮೇಜ್ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್, ಮಡಿಕೇರಿ ರೋಟರಿ ಅಧ್ಯಕ್ಷ ಕೆ.ಕಾರ್ಯಪ್ಪ, ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್‌ಗೌಡ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ರೋಟರಿ ವುಡ್ಸ್ ಕಾರ್ಯದರ್ಶಿ ವಸಂತ್ ಕುಮಾರ್, ರೋಟರಿ ಜಿಲ್ಲೆಯ ಕಾರ್ಯದರ್ಶಿ ನಾರಾಯಣ ಹೆಗಡೆ, ನಿಯೋಜಿತ ಗವರ್ನರ್ ವಿಕ್ರಂ ದತ್ತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.