
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ ಸಡಗರ, ಸಂಭ್ರಮದಿಂದ ಮಕರ ಸಂಕ್ರಾಂತಿಯನ್ನು ಆಚರಿಸಲಾಯಿತು. ಬಹುತೇಕ ಎಲ್ಲ ದೇಗುಲಗಳಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ಮುತ್ತಪ್ಪ ದೇಗುಲ ಸೇರಿದಂತೆ ಕೆಲವು ದೇಗುಲಗಳಲ್ಲಿ ಬುಧವಾರವೇ ಮಕರ ಸಂಕ್ರಾಂತಿ ಆಚರಣೆ ನಡೆದಿತ್ತು. ಮತ್ತೆ ಕೆಲವು ದೇಗುಲಗಳಲ್ಲಿ ಗುರುವಾರ ವಿಶೇಷ ಪೂಜೆಗಳು ನೆರವೇರಿದವು. ಎಳ್ಳು ಬೆಲ್ಲ ಹಂಚಿದ ಮಕ್ಕಳು ಸಂಭ್ರಮಿಸಿದರು. ಪರಸ್ಪರ ಶುಭಾಶಯ ಕೋರಿದರು. ಕೆಲವು ಮನೆಗಳ ಮುಂದೆ ಬಿಡಿಸಿದ್ದ ರಂಗೋಲಿಗಳು ಗಮನ ಸೆಳೆದವು.
ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ಪೊಂಗಲ್ ಸಮಿತಿಯಿಂದ ಕಳಸ ಮೆರವಣಿಗೆ, ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ವಿಶೇಷ ಜ್ಯೋತಿ ಪೂಜೆಗಳು ನಡೆದವು.
ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕರೆ ಬರಡಿಯಲ್ಲಿರುವ ಶ್ರೀ ಕಾಡು ಅಯ್ಯಪ್ಪ ಬನದ ದೇವಾಲಯದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆ ಮತ್ತು ದೀಪಾಲಂಕಾರ ನಡೆದರೆ, ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವರ 67ನೇ ವರ್ಷದ ವಾರ್ಷಿಕ ಜಾತ್ರೋತ್ಸವಕ್ಕೆ ಚಾಲನೆ ದೊರೆಯಿತು.ಕೂಡುಮಂಗಳೂರು ಪ್ರೌಢಶಾಲೆಯಲ್ಲಿ ಅಲಂಕೃತ ಎತ್ತಿನಗಾಡಿ, ಎತ್ತುಗಳು, ಕೃಷಿ ಸಲಕರಣೆಗಳು ಹಾಗೂ ಗೋವುಗಳನ್ನು ಪೂಜಿಸಿ ಹಬ್ಬ ಆಚರಿಸಲಾಯಿತು.
ಇಲ್ಲಿಗೆ ಸಮೀಪದ ಕತ್ತಲೆಕಾಡುವಿನ ಶ್ರೀ ವಿನಾಯಕ ಸೇವಾ ಟ್ರಸ್ಟ್ ವತಿಯಿಂದ ಸಂಕ್ರಾಂತಿ ಪ್ರಯುಕ್ತ ದೀಪೋತ್ಸವ ಕಾರ್ಯಕ್ರಮ ನಡೆಯಿತು. ಅತ್ತ ಮಂಗಳಾದೇವಿ ನಗರದಲ್ಲಿರುವ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ನೆರವೇರಿತು.
ಹಲವೆಡೆ ಮೆರವಣಿಗೆ, ವಿಶೇಷ ಆಚರಣೆ ಕೆಲವು ದೇಗುಲಗಳಲ್ಲಿ ದೀಪಾರಾಧನೆ ಎಳ್ಳು ಬೆಲ್ಲ ಹಂಚಿದ ಮಕ್ಕಳು
ಸುಂಟಿಕೊಪ್ಪ: ಕಳಸ ಮೆರವಣಿಗೆ
ಸುಂಟಿಕೊಪ್ಪ: ಇಲ್ಲಿನ ಪೊಂಗಲ್ ಸಮಿತಿಯಿಂದ ಪೊಂಗಲ್ ಹಬ್ಬದ ಆಚರಣೆಯ ಅಂಗವಾಗಿ ಗುರುವಾರ ಕಳಸ ಮೆರವಣಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ವೃಕ್ಷೋದ್ಭವ ಮಹಾಗಣಪತಿ ದೇವಾಲಯ ಪೂಜೆ ನೆರವೇರಿಸಿ ಕೊಪ್ಪದ ನಾದಸ್ವರದೊಂದಿಗೆ ನೂರಾರು ಮಂದಿ ಗಣಪತಿ ದೇವಾಲಯದಿಂದ ಹಾಲಿನ ಕಳಸ ಹೊತ್ತು ಮೆರವಣಿಗೆ ಮೂಲಕ ಮುಖ್ಯ ಬೀದಿಯ ಅಯ್ಯಪ್ಪ ದೇವಾಲಯದ ಮೂಲಕ ಚಾಮುಂಡೇಶ್ವರಿ ದೇಗುಲಕ್ಕೆ ತೆರಳಿದರು. ಟ್ರಸ್ಟಿ ಎ.ಲೋಕೇಶ್ ಕುಮಾರ್ ಚಾಲನೆ ನೀಡಿದರು. ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಗೆ ಅಭಿಷೇಕ ಮಾಡಿ ವಿಶೇಷ ಪೂಜೆ ನಡೆಯಿತು. ಪೊಂಗಲ್ ಮತ್ತು ಅನ್ನ ಸಂತರ್ಪಣೆ ನೆರವೇರಿಸಲಾಯಿತು. ಕ್ರೀಡಾ ಸ್ಪರ್ಧೆಗಳೂ ನಡೆದವು. ಸಂಜೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಿ ಪೊಂಗಲ್ ಪ್ರಸಾದ ವಿತರಿಸಲಾಯಿತು. ಸಂಘಟಕ ಅಯ್ಯಪ್ಪ ಎಸ್.ಸುರೇಶ್ ಎಸ್.ಸುಂದರೇಶ ಎಂ.ರಾಜಎಂ. ಗಣೇಶ ರಾಜ ಜಗದೀಶ ವೆಂಕಟೇಶ ಗಣೇಶ ಸುಬ್ರಮಣಿ ಮುರುಗೇಶ ಗುಣಶೇಖರವಿಘ್ನೇಶ್ ಏಳುಮಲೈ ಶರವಣ ಭಾಗವಹಿಸಿದ್ದರು.
ಅಯ್ಯಪ್ಪ ಕ್ಷೇತ್ರದಲ್ಲಿ ವಿಶೇಷ ಪೂಜೆ
ಸುಂಟಿಕೊಪ್ಪ: ಇಲ್ಲಿನ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ವಿಶೇಷ ಜ್ಯೋತಿ ಪೂಜೆ ನೆರವೇರಿತು. ಬುಧವಾರ ಸಂಜೆ ದೇವಾಲಯದ ಗರ್ಭಗುಡಿಯಲ್ಲಿ ಶುದ್ಧಿ ಪೂಜೆ ಸ್ವಾಮಿಗೆ ಹೂವಿನ ಅಲಂಕಾರ ಮತ್ತು ದೀಪದ ಅಲಂಕಾರ ಪೂಜೆಗಳನ್ನು ಪ್ರಧಾನ ಅರ್ಚಕ ಗಣೇಶ್ ಉಪಾಧ್ಯಯ ಮತ್ತು ಮಂಜುನಾಥ್ ಭಟ್ ನಡೆಸಿದರು. ಭಕ್ತರಿಗೆ ತೀರ್ಥ ಪ್ರಸಾದ ಲಘು ಉಪಾಹಾರದ ವ್ಯವಸ್ಥೆ ಇತ್ತು. ಸಮಿತಿ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.