
ಶನಿವಾರಸಂತೆ: ಪಟ್ಟಣದ ದಶಕಗಳ ಕನಸು ಈಡೇರುವ ಗಳಿಗೆ ಸಮೀಪಿಸಿದೆ. ಸುಸಜ್ಜಿತವಾದ ಕೆಎಸ್ಆರ್ಟಿಸಿ ಬಸ್ನಿಲ್ದಾಣ ಇಂದು (ಫೆ.7) ಲೋಕಾರ್ಪಣೆಯಾಗಲಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದ ವತಿಯಿಂದ ಬಸ್ನಿಲ್ದಾಣದ ಉದ್ಘಾಟನಾ ಸಮಾರಂಭ ಆಯೋಜನೆಗೊಂಡಿದೆ.
ಒಟ್ಟು 0.65 ಎಕರೆ ಪ್ರದೇಶ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಬಸ್ನಿಲ್ದಾಣಕ್ಕೆ ₹ 1.05 ಕೋಟಿ ವ್ಯಯಿಸಲಾಗಿದೆ. ಈ ಬಸ್ನಲ್ಲಿ ಕೇವಲ ಪ್ರಯಾಣಿಕರು ಕೂರುವುದಕ್ಕೆ ಆಸನಗಳ ಜೊತೆಗೆ ಇನ್ನೂ ಅನೇಕ ಸೌಲಭ್ಯಗಳನ್ನೂ ಕಲ್ಪಿಸಿಕೊಡಲಾಗಿದೆ.
ಇಲ್ಲಿ ಸಂಚಾರ ನಿಯಂತ್ರಕರ ಕೊಠಡಿ, ಪ್ರಯಾಣಿಕರ ನಿರೀಕ್ಷಣಾ ಕೊಠಡಿ, ಸಿಬ್ಬಂದಿ ವಿಶ್ರಾಂತಿ ಕೊಠಡಿ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಒಂದು ಉಪಾಹಾರ ಗೃಹ, 2 ವಾಣಿಜ್ಯ ಮಳಿಗೆ, ಪುರುಷ, ಮಹಿಳೆಯರು ಮತ್ತು ವಿಕಲಚೇತನರಿಗಾಗಿ ಶೌಚಾಲಯ ನಿರ್ಮಿಸಲಾಗಿದೆ.
ಇದುವರೆಗೂ ಶನಿವಾರಸಂತೆಯಲ್ಲಿ ಬಸ್ನಿಲ್ದಾಣ ಇಲ್ಲದೇ ಪ್ರಯಾಣಿಕರು ಬಿಸಿಲು ಮತ್ತು ಮಳೆಯಲ್ಲೇ ನಿಲ್ಲಬೇಕಿತ್ತು. ಮಳೆಗಾಲದಲ್ಲಂತೂ ಪ್ರಯಾಣಿಕರ ಸ್ಥಿತಿ ಹೇಳತೀರದ್ದಾಗಿತ್ತು. ಮಳೆಯಲ್ಲಿ ನೆನೆಯುತ್ತಲೇ ಬಸ್ಗಳಿಗಾಗಿ ಕಾಯಬೇಕಿತ್ತು. ವೃದ್ಧರು, ರೋಗಿಗಳು ಮಳೆಗಾಲದಲ್ಲಿ ಬಸ್ ಪ್ರಯಾಣ ಮಾಡುವುದು ದುಸ್ತರವಾಗಿತ್ತು. ಈಗ ಬಸ್ನಿಲ್ದಾಣ ನಿರ್ಮಾಣವಾಗಿರುವುದರಿಂದ ಪ್ರಯಾಣಿಕರ ಈ ಪಡಿಪಾಟಿಲು ನಿವಾರಣೆ ಆಗಿದೆ.
ಬಸ್ಗಳನ್ನೂ ನಿಯೋಜಿಸಿ:
ಕೇವಲ ಬಸ್ನಿಲ್ದಾಣ ನಿರ್ಮಿಸಿದರೆ ಸಾಲದು ಹೊಸ ಬಸ್ಗಳನ್ನು ಸೇವೆಗೆ ನಿಯೋಜಿಸಿ ಎಂಬ ಒತ್ತಾಯವೂ ಕೇಳಿ ಬಂದಿದೆ. ಬೆಂಗಳೂರಿಗೆ ಸೂಕ್ತ ಬಸ್ವ್ಯವಸ್ಥೆ ಕಲ್ಪಿಸಬೇಕಿದೆ. ವಾರಾಂತ್ಯದಲ್ಲಿ ರಾತ್ರಿ ವೇಳೆ ಬೆಂಗಳೂರಿಗೆ ಬಸ್ ಹತ್ತಿದರೆ ಸೀಟು ಸಿಕ್ಕುವುದಿಲ್ಲ. ರೋಗಿಗಳು, ವೃದ್ಧರು, ಮಹಿಳೆಯರು ನಿಂತುಕೊಂಡೇ ಸಂಚರಿಸಬೇಕಿದೆ. ಬೆಂಗಳೂರಿಗೆ ಕನಿಷ್ಠ ಒಂದು ಬಸ್ನ್ನಾದರೂ ಶನಿವಾರಸಂತೆಯಿಂದಲೆ ಸಂಚರಿಸುವಂತೆ ಮಾಡಿ ಎಂಬುದು ಇಲ್ಲಿನ ಜನರ ಬೇಡಿಕೆಯಾಗಿದೆ. ಹಾಗೆಯೆ, ಕೊಡ್ಲಿಪೇಟೆಯಿಂದ ಕುಶಾಲನಗರದಕ್ಕೆ ಬೆಳಿಗ್ಗೆ ಮತ್ತು ಸಂಜೆ ಬಸ್ವ್ಯವಸ್ಥೆ ಕಲ್ಪಿಸಬೇಕಿದೆ.
ನುಡಿದಂತೆ ನಡೆದ ಶಾಸಕ; ತೆನ್ನೀರಾ ಮೈನಾ
ಮಡಿಕೇರಿ: ‘ಶನಿವಾರಸಂತೆ ಬಸ್ನಿಲ್ದಾಣದ ವಿಷಯದಲ್ಲಿ ಶಾಸಕ ಡಾ.ಮಂತರ್ಗೌಡ ಅವರು ನುಡಿದಂತೆ ನಡೆದಿದ್ದಾರೆ’ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ತೆನ್ನಿರಾ ಮೈನಾ ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದಶಕಗಳ ಕಾಲ ಜನರು ಬಸ್ನಿಲ್ದಾಣಕ್ಕಾಗಿ ಬೇಡಿಕೆ ಇರಿಸಿದ್ದರು.
ವಿಧಾನಸಭಾ ಚುನಾವಣೆಯ ವೇಳೆ ಶನಿವಾರಸಂತೆಯಲ್ಲಿ ಪ್ರಚಾರ ಭಾಷಣ ಮುಗಿಸಿದ ನಂತರ ಅಲ್ಲಿನ ವೃದ್ಧರೊಬ್ಬರು ಮಂತರ್ಗೌಡ ಅವರಿಗೆ ಬಸ್ನಿಲ್ದಾಣ ಬೇಕು ಎಂದು ಮನವಿ ಮಾಡಿದ್ದರು. ಮನವಿ ಸ್ವೀಕರಿಸಿದ ಅವರು ಶಾಸಕರಾಗಿ ಆಯ್ಕೆಯಾದರೆ ಬಸ್ನಿಲ್ದಾಣ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಈಗ ಸುಸಜ್ಜಿತವಾದ ಬಸ್ನಿಲ್ದಾಣ ನಿರ್ಮಾಣವಾಗಿದೆ ಎಂದರು. ಬಸ್ಗಳ ಕೊರತೆ ಇರುವ ವಿಚಾರ ಗಮನದಲ್ಲಿದ್ದು ಅತಿ ಶೀಘ್ರದಲ್ಲಿ ಈ ಸಮಸ್ಯೆ ಬಗೆಹರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಮುಖಂಡ ಪ್ರಕಾಶ್ ಆಚಾರ್ಯ ಮಾತನಾಡಿ ‘ಮಡಿಕೇರಿ ಕಸ ವಿಲೇವಾರಿ ಇನ್ನೂ ಕಾರ್ಯಾರಂಭ ಮಾಡದೇ ಇರುವ ಕುರಿತು ಶಾಸಕರ ಗಮನಕ್ಕೆ ತರಲಾಯಿತು. ಕೂಡಲೇ ಅವರು ಪ್ರಯತ್ನಪಟ್ಟು ಈಗ ಕಸ ವಿಲೇವಾರಿ ಆರಂಭವಾಗಿದೆ. ಈ ರೀತಿ ಶಾಸಕ ಮಂತರ್ಗೌಡ ಅವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
- ಉದ್ಘಾಟನೆ ಇಂದು
ಶನಿವಾರಸಂತೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವತಿಯಿಂದ ಜಿಲ್ಲೆಯ ಶನಿವಾರಸಂತೆಯಲ್ಲಿ ನೂತನ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭವು ಫೆ. 7ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್(ವಾಸು) ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ಗೌಡ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.