ಸುಂಟಿಕೊಪ್ಪ: ಸಮೀಪದ 7ನೇ ಹೊಸಕೋಟೆ ಸಂತ ಸೆಬಾಸ್ಟೀನ್ ಚರ್ಚ್ನ ವಾರ್ಷಿಕೋತ್ಸವ ಭಾನುವಾರ ಸಂಜೆ ಸಡಗರದಿಂದ ನಡೆಯಿತು.
ವಾರ್ಷಿಕೋತ್ಸವದ ಅಂಗವಾಗಿ ಹೊಸಕೋಟೆ ಚರ್ಚ್ನ ರೆ.ಫಾ.ಸೆಬಾಸ್ಟೀನ್ ಫೂವತ್ತಿಗಲ್ ಧ್ವಜಾರೋಹಣ ನೆರವೇರಿಸಿದರು. 24ರಿಂದ ಮೂರು ದಿನ ವಿಶೇಷ ಪೂಜೆ ಸೇರಿದಂತೆ ಆರಾಧನೆ, ಅಂಬು ಕಾಣಿಕೆ ಹಾಗೂ ಸಂತ ಸೆಬಾಸ್ಟೀನ್ ಅವರ ಸ್ವರೂಪ ಇರಿಸಿ ಮೆರವಣಿಗೆಯೊಂದಿಗೆ ಸಹಭೋಜನದೊಂದಿಗೆ ವಾರ್ಷಿಕೋತ್ಸವ ಸಮಾಪ್ತಿಗೊಂಡಿತು.
ಹಬ್ಬದ ಅಂಗವಾಗಿ ಭಾನುವಾರ ಸಂಜೆ ದಿವ್ಯ ಬಲಿಪೂಜೆ, ಕ್ರೈಸ್ತರು ಸಂಬಂಧಿಕರ ಸಮಾಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಶನಿವಾರ ಹಬ್ಬದ ಪೂರ್ವಕ ದಿವ್ಯ ಬಲಿಪೂಜೆ, ಪರಮಪ್ರಸಾದದ ಆರಾಧನೆ, ನೊವೇನಾ ವಾಹನಗಳ ಆಶೀರ್ವಾದವನ್ನು ಮೈಸೂರು ಕ್ರೈಸ್ಟ್ ಕಾಲೇಜಿನ ಪ್ರಾಂಶುಪಾಲರಾದ ಫಾ.ಜಿಂಟೋ ಇಂಜಿ ಕಾಲಾಯಿಲ್ ನೆರವೇರಿಸಿದರು.
ಭಾನುವಾರ ತಲಚೇರಿಯ ಮಹಾಧರ್ಮ ಪ್ರಾಂತ್ಯದ ಫಾ.ಜಿತಿನ್ ವಯಲಿಂಗಲ್, ಮಡಿಕೇರಿ ವಲಯ ಧರ್ಮಗುರುಗಳಾದ ದೀಪಕ್ ಜಾರ್ಜ್, ಕುಶಾಲನಗರದ ರೇ.ಫಾ.ಮಾರ್ಟಿನ್, ಸುಂಟಿಕೊಪ್ಪ ಸಂತ ಅಂತೋಣಿ ಧರ್ಮಕೇಂದ್ರದ ಧರ್ಮಗುರು ವಿಜಯಕುಮಾರ್, ಸೋಮವಾರಪೇಟೆ ಜಯವೀರ ಮಾತೆ ದೇವಾಲಯದ ಧರ್ಮಗುರು ಅವಿನಾಶ್, ಸಿದ್ದಾಪುರ, ಗೋಣಿಕೊಪ್ಪ ಭಾಗಗಳ ಧರ್ಮಕೇಂದ್ರದ 15ಕ್ಕೂ ಅಧಿಕ ಧರ್ಮಗುರುಗಳು ಹಬ್ಬದ ವಿಧಾನ ಪೂರ್ವಕ ಅಡಂಬರ ದಿವ್ಯ ಬಲಿಪೂಜೆಯನ್ನು ಸಮರ್ಪಿಸಿದರು.
ನಂತರ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಸಂತ ಸೆಬಾಸ್ಟೀನ್ ಅವರ ಸ್ವರೂಪ ಇರಿಸಿ ಗ್ರಾಮದ ಮುಖ್ಯ ಬೀದಿಗಳಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕ್ರೈಸ್ತರು ಮೋಂಬತ್ತಿಯನ್ನು ಹಿಡಿದು ಪ್ರಾರ್ಥನೆಯನ್ನು ಮಾಡುತ್ತ ಮೆರವಣಿಗೆಯಲ್ಲಿ ಸಾಗಿದರು.
ನಂತರ ಸ್ನೇಹ ಭೋಜನ, ಹರಕೆ ಹರಾಜು ಪ್ರಕ್ರಿಯೆ ನಡೆಯಿತು.
ವಾರ್ಷಿಕೋತ್ಸವದಲ್ಲಿ ಕುಶಾಲನಗರ, ಸುಂಟಿಕೊಪ್ಪ, ಮಡಿಕೇರಿ, ಸೋಮವಾರಪೇಟೆ, ಸಿದ್ದಾಪುರ, ಗೋಣಿಕೊಪ್ಪ ಭಾಗಗಳಿಂದ ಕನ್ಯಾಸ್ತ್ರೀಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಕ್ರೈಸ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.