ADVERTISEMENT

ಆಧುನಿಕ ಜೀವನಶೈಲಿಯಿಂದ ಹೃದ್ರೋಗ ಹೆಚ್ಚಳ

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಮನೋವೈದ್ಯರ ಸಮ್ಮೇಳನ ಆರಂಭ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 14:42 IST
Last Updated 18 ಅಕ್ಟೋಬರ್ 2019, 14:42 IST
ಮಡಿಕೇರಿಯಲ್ಲಿ ಶುಕ್ರವಾರದಿಂದ ಆರಂಭವಾದ ದಕ್ಷಿಣ ಭಾರತೀಯ ಮನೋವೈದ್ಯರ 52ನೇ ಸಮ್ಮೇಳನವನ್ನು ಡಾ.ವಿಶಾಲ್ ಕುಮಾರ್ ಉದ್ಘಾಟಿಸಿದರು
ಮಡಿಕೇರಿಯಲ್ಲಿ ಶುಕ್ರವಾರದಿಂದ ಆರಂಭವಾದ ದಕ್ಷಿಣ ಭಾರತೀಯ ಮನೋವೈದ್ಯರ 52ನೇ ಸಮ್ಮೇಳನವನ್ನು ಡಾ.ವಿಶಾಲ್ ಕುಮಾರ್ ಉದ್ಘಾಟಿಸಿದರು   

ಮಡಿಕೇರಿ: ‘ಇತ್ತೀಚಿನ ವರ್ಷಗಳಲ್ಲಿ 35 ವರ್ಷದ ಒಳಗಿನ ಮಹಿಳೆಯರಲ್ಲಿಯೂ ಹೃದಯಾಘಾತ ಕಂಡು ಬರುತ್ತಿರುವುದು ಆತಂಕಕಾರಿ’ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಕಳವಳ ವ್ಯಕ್ತಪಡಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ದಕ್ಷಿಣ ಭಾರತ ಮನೋವೈದ್ಯರ ಸಂಘದ ವತಿಯಿಂದ ಶುಕ್ರವಾರ ನಡೆದ ಮನೋವೈದ್ಯರ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ವರ್ಷದಿಂದ ವಷ೯ಕ್ಕೆ ಕಿರಿಯರಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಹೆಚ್ಚುತ್ತಿದೆ. ಯುವ ಭಾರತೀಯರು ನಾನಾ ವ್ಯಸನಗಳಿಗೆ ಸಿಲುಕಿ ಇಂಥ ಕಾಯಿಲೆಗಳ ಸುಳಿಗೆ ಸಿಲುಕುತ್ತಿರುವುದು ಖಂಡಿತಾ ಕಳವಳಕಾರಿ’ ಎಂದು ಹೇಳಿದರು.

ADVERTISEMENT

‘ಭಾರತದಲ್ಲಿ ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಮಹಿಳೆಯರೂ ಹೃದ್ರೋಗಿಗಳಾಗುತ್ತಿರುವುದು ಅಪಾಯಕಾರಿ. ಸಂಸಾರದ ಎಲ್ಲಾ ಕೆಲಸ ಕಾಯ೯ಗಳ ಒತ್ತಡದೊಂದಿಗೆ ತಾನೂ ದುಡಿಯುತ್ತಿರುವ ಇಂದಿನ ಆಧುನಿಕ ಮಹಿಳೆಗೆ ಈ ಕಾರಣದಿಂದಲೇ ಒತ್ತಡ ಸಂಬಂಧಿತ ಹೃದ್ರೋಗ ಕಾಣಿಸಿಕೊಳ್ಳುತ್ತಿದೆ’ ಎಂದು ಹೇಳಿದರು.

‘ಯಾವ ರೀತಿಯಲ್ಲಿ ಹುಟ್ಟುಹಬ್ಬ, ವಿವಾಹ ವಾಷಿ೯ಕೋತ್ಸವ ಆಚರಿಸುತ್ತೇವೆಯೋ ಅದೇ ರೀತಿ ಪ್ರತೀ ಕುಟುಂಬದವರೂ ಆರೋಗ್ಯ ಚಿಕಿತ್ಸಾ ದಿನವನ್ನು ಪ್ರತೀ ವಷ೯ ಕೈಗೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಆಧುನಿಕ ಜೀವನಶೈಲಿಯೇ ಹೃದ್ರೋಗ ಹೆಚ್ಚಲು ಪ್ರಮುಖ ಕಾರಣ’ ಎಂದು ಮಂಜುನಾಥ್ ಹೇಳಿದರು.

ಜಗತ್ತಿನ ಅನೇಕ ಅತ್ಯುತ್ತಮ ತಜ್ಞ ವೈದ್ಯರಲ್ಲಿ ಭಾರತೀಯ ಮೂಲದ ವೈದ್ಯರ ಸಂಖ್ಯೆ ಹೆಚ್ಚಾಗಿರುವುದು ಪ್ರಶಂಸನೀಯ. ಜಾಗತೀಕರಣದ ಪ್ರಭಾವದಿಂದ ದೇಶದಲ್ಲಿ ರೋಗಿಗಳ ಸಂಖ್ಯೆ ಏರಿಕೆ ಕಾಣುತ್ತಿದೆ ಎಂದು ಮಾಹಿತಿ ನೀಡಿದರು.

ದಕ್ಷಿಣ ಭಾರತೀಯ ಮನೋವೈದ್ಯರ ಸಂಘದ ಅಧ್ಯಕ್ಷ ಡಾ.ಎ.ಜಗದೀಶ್ ವೇದಿಕೆಯಲ್ಲಿದ್ದರು.

ಸಮ್ಮೇಳನಕ್ಕೆ ಚಾಲನೆ:ಅದಕ್ಕೂ ಮೊದಲು ಮೂರು ದಿನಗಳ ದಕ್ಷಿಣ ಭಾರತೀಯ ಮನೋವೈದ್ಯರ ಸಮ್ಮೇಳನಕ್ಕೆ ಚಾಲನೆ ಚಾಲನೆ ನೀಡಲಾಯಿತು.

‘ಮೊದಲಿನಂತೆ ಇಂದಿನ ಮಕ್ಕಳು ನಿಸರ್ಗದೊಂದಿಗೆ ಬೆರೆಯದಿರುವುದೇ ಅನೇಕ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ’ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್ ಹೇಳಿದರು.

‘ಒತ್ತಡದಲ್ಲಿಯೇ ಬೆಳೆಯುತ್ತಿರುವ ಮಕ್ಕಳು ಮುಂದೆ ವಾಸ್ತವತೆಯ ವಿಚಾರಗಳು ಎದುರಾದಾಗ ಸಮಸ್ಯೆ ಅನುಭವಿಸಿ, ಖಿನ್ನತೆಗೊಳಗಾಗುತ್ತಾರೆ. ಪ್ರಕೃತ್ತಿ ವಿಕೋಪಕ್ಕೊಳಗಾಗಿರುವ ಕೊಡಗಿನ ಜನರಿಗೆ ಸ್ಥೈರ್ಯ ತುಂಬವ ನಿಟ್ಟಿನಲ್ಲಿ ಮಡಿಕೇರಿಯಲ್ಲಿ ಮನೋವೈದ್ಯರ ಸಮ್ಮೇಳನದಂಥ ಪ್ರಮುಖ ಕಾಯ೯ಕ್ರಮ ಆಯೋಜಿಸಿರುವುದು ಸ್ವಾಗತಾಹ೯’ ಎಂದು ಹೇಳಿದರು.

ಸಮ್ಮೇಳನ ಸಮಿತಿ ಅಧ್ಯಕ್ಷರೂ ಆದ ದಕ್ಷಿಣ ಭಾರತೀಯ ಮನೋವೈದ್ಯರ ಸಂಘದ ಅಧ್ಯಕ್ಷ ಡಾ.ಎ.ಜಗದೀಶ್ ಮಾತನಾಡಿ, ಈ ಸಮಾವೇಶದಲ್ಲಿ ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ ರಾಜ್ಯಗಳ ಮನೋವೈದ್ಯರೂ ಸೇರಿದಂತೆ ದೇಶದ ವಿವಿಧೆಡೆಗಳ 850ಕ್ಕೂ ಅಧಿಕ ಮನೋವೈದ್ಯರು ಪಾಲ್ಗೊಂಡಿದ್ದಾರೆ. ಪ್ರಕೃತ್ತಿ ವಿಕೋಪ ಪೀಡಿತ ಕೊಡಗು ಜಿಲ್ಲೆಗೆ ಆರ್ಥಿಕ ಸಬಲತೆ ನೀಡಿಕೆ, ಗ್ರಾಮೀಣ ಪ್ರದೇಶದಲ್ಲಿನ ಜನರ ಮನೋಸಮಸ್ಯೆಗಳ ಬಗ್ಗೆ ಚಚೆ೯ಯನ್ನು ಒಳಗೊಂಡಿರುವ ಈ ಸಮಾವೇಶ ಮುಖ್ಯವಾಗಿ ಭಾರತದ ಯುವಪೀಳಿಗೆಯಲ್ಲಿ ಹೆಚ್ಚುತ್ತಿರುವ ಮಾನಸಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಉದ್ದೇಶ ಹೊಂದಿದೆ ಎಂದರು.

ವೇದಿಕೆಯಲ್ಲಿ ಸಂಘದ ನೂತನ ಅಧ್ಯಕ್ಷ ಕಿಶನ್ ವಿ.ಪಿ., ಪದಾಧಿಕಾರಿಗಳಾದ ನರೇಶ್, ಹರೀಶ್ ನಂದಬೆಟ್ಟು, ಶಾವುಲ್ ಜೆ.ಎಸ್. ಹಾಜರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಮಹೇಶ್‌ಗೌಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.