ಸುಂಟಿಕೊಪ್ಪ: ಶಿವರಾತ್ರಿ ಪ್ರಯುಕ್ತ ಹೋಬಳಿ ವ್ಯಾಪ್ತಿಯ ಹಲವೆಡೆ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಬುಧವಾರ ರಾತ್ರಿ ನಡೆದವು.
ಕೊಡಗರಹಳ್ಳಿಯ ಬೈತೂರಪ್ಪ ಪೊವ್ಚದಿ ಬಸವೇಶ್ವರ ದೇವಾಲಯದಲ್ಲಿ ಶ್ರೀ ಬೈತೂರಪ್ಪ ಭಜನಾ ಮಂಡಳಿಯಿಂದ ಪೂಜಾ ಕಾರ್ಯಗಳು ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಎಲ್ಲ ಧರ್ಮೀಯರು ಭಾಗವಹಿಸಿದ್ದರು. ಬೈತೂರಪ್ಪ ಭಜನಾ ಮಂಡಳಿ ಸದಸ್ಯರು ಸಂಜೆ 6 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೆ ಭಜನೆ ನಡೆಸಿದರು. ಬೈತೂರಪ್ಪ, ಪೊವ್ಚದಿ ದೇವರಿಗೆ ವಿಶೇಷ ಪೂಜೆ, ಅಲಂಕಾರ , ನೈವೇದ್ಯ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಮಕ್ಕಳ, ಭಜನಾ ಮಂಡಳಿಯ ಪುರುಷರ, ಮಹಿಳೆಯರ ನೃತ್ಯರೂಪಕ ಮನಸೂರೆಗೊಂಡಿತು. ಗೀತಗಾಯನಗಳಿಗೆ ಜನ ತಲೆತೂಗಿದರು.
ಕೆದಕಲ್ ಗ್ರಾಮದ ಏಳನೇ ಮೈಲು ಮಹಾದೇವ ಈಶ್ವರ ದೇವಾಲಯಲ್ಲಿ ಬುಧವಾರ ಸಂಜೆಯಿಂದ ಮಹಾಸಂಕಲ್ಪ, ಗಂಗಾಪೂಜೆ, ಗಣಪತಿ ಪೂಜೆ, ಪುಣ್ಯಾಹ,ನವಗ್ರಹ ಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ಪೂರ್ಣಾಹುತಿ ನಡೆಯಿತು.
ಮಹಾದೇವ ಈಶ್ವರ ದೇವರಿಗೆ ದೇವಾಲಯದ ಪ್ರಧಾನ ಅರ್ಚಕ ಅವಿನಾಶ್ ಆರಾಧ್ಯ ನೇತೃತ್ವದಲ್ಲಿ ರುದ್ರಾಭಿಷೇಕ , ಹೂವುಗಳಿಂದ ಅಲಂಕಾರ ಪೂಜೆ ನಡೆಯಿತು. ರಾತ್ರಿ ಬಿಲ್ವಾರ್ಚನೆ, ಭಕ್ತರ ಹರಕೆಯ ಭಾಗವಾಗಿ ದೀಪರಾಧನೆ ನಡೆಯಿತು. ನೂರಾರು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಸಲ್ಲಿಸಿದರು. ತಡರಾತ್ರಿ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಕೆದಕಲ್ ಭದ್ರಕಾಳಿ, ನಾಕೂರು ಈಶ್ವರ ದೇವಾಲಯ, ಕಂಬಿಬಾಣೆ ಮ್ಯಾಗಡೂರು ಈಶ್ವರ ದೇವಾಲಯಗಳಲ್ಲೂ ವಿಶೇಷ ಪೂಜೆ, ಆರಾಧನೆ,ಶಿವ ಸ್ಮರಣೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.