ಸೋಮವಾರಪೇಟೆ: ಪಟ್ಟಣ ಪಂಚಾಯಿತಿ ಕೌನ್ಸಿಲ್ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಪಟ್ಟಣದ ವ್ಯಾಪ್ತಿಯಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಹದಗೆಟ್ಟಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಸದಸ್ಯರು ಆಗ್ರಹಿಸಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಎಲ್ಲೆಂದರಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸದಸ್ಯರು ದೂರಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಖಾಸಗಿ ವಾಹನಗಳೇ ತುಂಬಿರುತ್ತವೆ. ಬಸ್ ನಿಲ್ಲಿಸಲು ಸ್ಥಳ ಇರುವುದಿಲ್ಲ. ವಾಹನಗಳನ್ನು ನಿಯಂತ್ರಿಸಬೇಕಾದ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಕುಡಿಯುವ ನೀರಿನ ಪೈಪ್ಲೈನ್ ಸಂಪರ್ಕಕ್ಕೆ ರಸ್ತೆಯಲ್ಲಿ ಗುಂಡಿ ತೆಗೆದಿದ್ದು, ಇದರಿಂದ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ನೋ ಪಾರ್ಕಿಂಗ್ ಬೋರ್ಡಿನ ಪಕ್ಕದಲ್ಲಿಯೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಪಾರ್ಕಿಂಗ್ ಸಮಸ್ಯೆಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಸಾಧ್ಯವಾಗದಿದ್ದಲ್ಲಿ ಪಂಚಾಯಿತಿ ವತಿಯಿಂದಲೇ ಸೂಕ್ತ ವ್ಯವಸ್ಥೆ ಮಾಡಬೇಕಿದೆ ಎಂದು ಸಂಜೀವ, ಕಿರಣ್, ಮಹೇಶ್ ಒತ್ತಾಯಿಸಿದರು.
ಪಾರ್ಕಿಂಗ್ ಸಮಸ್ಯೆ ಬಗೆಹರಿಸುವಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲು ಪಂಚಾಯಿತಿ ನಿರ್ಧರಿಸಿತು.
ಪಂಚಾಯಿತಿ ವತಿಯಿಂದ ಹಳೆಯ ವರ್ಕ್ಶಾಪ್ ಏರಿಯಾದಲ್ಲಿ ಮಲ್ಟಿ ಪಾಂರ್ಕಿಂಗ್ ವ್ಯವಸ್ಥೆಯನ್ನು ₹ 80 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಅದರ ಕ್ರಿಯಾ ಯೋಜನೆಯನ್ನು ಮಾಡಿ ಜಿಲ್ಲಾಧಿಕಾರಿಗಳಲ್ಲಿಗೆ ಕಳಿಸಲಾಗಿತ್ತು. ಅವರಿಂದ ಅನುಮತಿ ಸಿಕ್ಕಿದ್ದು, ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷರು ಸಭೆಗೆ ತಿಳಿಸಿದರು.
ಬೀದಿ ದೀಪಗಳ ನಿರ್ವಹಣೆಯನ್ನು ಸರಿಯಾಗಿ ಮಾಡದಿರುವುದರಿಂದ ಎಲ್ಲ ರಸ್ತೆಗಳಲ್ಲೂ ಕತ್ತಲಾಗಿರುತ್ತದೆ. ಖಾಸಗಿ ಬಸ್ ನಿಲ್ದಾಣದಲ್ಲಿ ಕತ್ತಲಿನಿಂದ ಹೆಂಗಸರು ಮತ್ತು ಮಕ್ಕಳ ಸಂಚರಿಸಲು ಸಮಸ್ಯೆಯಾಗಿದೆ ಎಂದು ಸಂಜೀವ, ಮಹೇಶ್, ಶೀಲಾ ಡಿಸೋಜ ಸೇರಿದಂತೆ ಸದಸ್ಯರು ದೂರಿದರು. ಕೂಡಲೇ ಬೀದಿ ದೀಪಗಳ ವ್ಯವಸ್ಥೆಯನ್ನು ಸರಿಪಡಿಸುವಂತೆ ತಿಳಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಲೈಸೆನ್ಸ್ ನೀಡಲು ಕೆಲವು ಸಂಘಟನೆಗಳು ವಿರೋಧಿಸುತ್ತಿವೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭ ಸದಸ್ಯ ಪಿ.ಕೆ. ಚಂದ್ರು ಮಾತನಾಡಿ, ಬಾಂಗ್ಲಾದೇಶದಿಂದ ಬಂದ ಜನರು ಅಸ್ಸಾಮಿ ಹೆಸರಿನಲ್ಲಿ ಇಲ್ಲಿಗೆ ಬಂದು ಕಾರ್ಮಿಕರ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅವರಿಗೆ ಅನುಮತಿ ನೀಡುವುದು ಬೇಡ ಎಂದರು.
ಅಸ್ಸಾಮಿ ಕಾರ್ಮಿಕರಿದ್ದಾರೆ ಎಂದು ಲೈಸೆನ್ಸ್ ನೀಡಲು ಮುಂದಾಗದಿದ್ದಲ್ಲಿ, ಪಟ್ಟಣದ ಹೆಚ್ಚಿನ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಬೇಕಾಗುತ್ತದೆ. ಎಲ್ಲೆಡೆ ಅವರೇ ಮುಂಚೂಣಿಯಲ್ಲಿದ್ದಾರೆ. ಅವರ ಸಂಪೂರ್ಣ ಮಾಹಿತಿಯನ್ನು ಅಂಗಡಿ ಮತ್ತು ತೋಟಗಳ ಮಾಲೀಕರು ನೀಡಬೇಕಿದೆ. ಇದರ ವಿರುದ್ಧ ಸೂಕ್ತ ಕ್ರಮಕ್ಕೆ ಜಿಲ್ಲಾದಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುವಂತೆ ಸಭೆಯಲ್ಲಿ ಸದಸ್ಯರಾದ ಮೃತ್ಯುಂಜಯ, ಸಂಜೀವ ಹಾಗೂ ಶೀಲಾ ಡಿಸೋಜ ತಿಳಿಸಿದರು. .
ಸಭೆಯಲ್ಲಿ ಪಂಚಾಯಿತಿ ಸದಸ್ಯರು, ಮುಖ್ಯಾಧಿಕಾರಿ ಸತೀಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.