ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಚರುಕುಗೊಂಡಿದೆ.
ಡಿಸಿಎಫ್ ಜಗನ್ನಾಥ್, ಎಸಿಎಫ್ ಗೋಪಾಲ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಹುದಿಕೇರಿ, ಹರಿಹರ, ಕೋಣಂಗೇರಿ, ಬೆಳ್ಳೂರು, ಟಿ.ಶೆಟ್ಟಿಗೇರಿ ಕಡೆಗಳಲ್ಲಿ ನಡೆಯುತ್ತಿದೆ.
ಹುಲಿ ಹೆಜ್ಜೆಜಾಡು ಪತ್ತೆ ಹಚ್ಚಿ ಅದನ್ನು ಸೆರೆ ಹಿಡಿಯುವ ಅಥವಾ ಕಾಡಿಗೆ ಅಟ್ಟುವ ಕಾರ್ಯಾಚರಣೆ ಸುರಿಯುತ್ತಿರುವ ಮಳೆಯ ನಡುವೆಯೂ ಮುಂದುವರಿದಿದೆ. ಮತ್ತಿಗೋಡು ಸಾಕಾನೆ ಶಿಬಿರದ ಮಹೇಂದ್ರ ಹಾಗೂ ಭೀಮ ಆನೆಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ.
ಅರವಳಿಕೆ ತಜ್ಞ ಡಾ. ರಮೇಶ್, ಭೀಮ ಆನೆಯ ಮಾವುತ ಗುಂಡಣ್ಣ, ಮಹೇಂದ್ರ ಆನೆಯ ಮಾವುತ ಮಲ್ಲಿಕಾರ್ಜುನ ಕಾಫಿ ತೋಟದ ನಡುವೆ ಹುಲಿ ಹೆಜ್ಜೆ ಗುರುತು ಹಿಡಿದು ಆನೆಗಳನ್ನು ಮುನ್ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಫ್ ಜನ್ನಾಥ್, ಅರಣ್ಯ ಇಲಾಖೆ ಸಿಬ್ಬಂದಿ, ಕಾವಾಡಿಗರು, ಆರ್ಆರ್ಟಿ ತಂಡ ಸೇರಿದಂತೆ ಒಟ್ಟು 80 ಮಂದಿ ಕಾರ್ಯಾಚರಣೆಯಲ್ಲಿದ್ದಾರೆ. ಶೀಘ್ರದಲ್ಲಿಯೇ ಹುಲಿ ಸೆರೆ ಹಿಡಿದ ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದರು.
ವಲಯ ಅರಣ್ಯಾಧಿಕಾರಿಗಳಾದ ಶಂಕರ್, ರಂಜನ್, ಉಪ ವಲಯ ಅರಣ್ಯಾಧಿಕಾರಿ ನಾಗೇಶ್, ಸಂದೇಶ್, ಶ್ರೀಧರ್, ದಿವಾಕರ್, ರಕ್ಷಿತ್, ಭರತ್, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯ ಬೋಸ್ ಮಾದಪ್ಪ ಕಾರ್ಯಾಚರಣೆಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.