ADVERTISEMENT

ಕೊಡಗು| ಟಿಪ್ಪು ಜಯಂತಿ ಖಾಸಗಿ ಆಚರಣೆಗೂ ಅವಕಾಶ ಇಲ್ಲ: ಎಸ್‌.ಪಿ

ಶಾಂತಿ, ಕಾನೂನು ಸುವ್ಯವಸ್ಥೆಗೆ ಸಹಕರಿಸಲು ಜಿಲ್ಲಾಡಳಿತ ಮನವಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 12:15 IST
Last Updated 7 ನವೆಂಬರ್ 2019, 12:15 IST
ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿದರು
ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿದರು   

ಮಡಿಕೇರಿ: ನ. 10ರಂದು ಟಿಪ್ಪು ಜಯಂತಿ ಆಚರಣೆ ಇರುವುದಿಲ್ಲ. ಅದೇ ದಿನ ಈದ್ ಮಿಲಾದ್ ಹಬ್ಬ ಸಹ ಇದ್ದು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ಜಿಲ್ಲಾಡಳಿತ ಮನವಿ ಮಾಡಿದೆ. ಅಯೋಧ್ಯ ತೀರ್ಪು ಇದೇ 17ರೊಳಗೆ ಪ್ರಕಟವಾಗುವ ಸಾಧ್ಯತೆಯಿದ್ದು, ಪೊಲೀಸ್‌ಬಂದೋ ಬಸ್ತ್‌ ಕೈಗೊಳ್ಳಲಾಗಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧ್ಯಕ್ಷತೆಯಲ್ಲಿ ಸಭೆಯ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ ಪಾಲ್ಗೊಂಡಿದ್ದರು.

ಎಸ್‌ಪಿ ಸುಮನ್ ಡಿ. ಪನ್ನೇಕರ್ ಮಾತನಾಡಿ, ಟಿಪ್ಪು ಜಯಂತಿ ಖಾಸಗಿಯಾಗಿಯೂ ಆಚರಿಸುವಂತಿಲ್ಲ ಎಂದು ಹೇಳಿದರು.

ADVERTISEMENT

ಅಯೋಧ್ಯ ತೀರ್ಪು ಸಂದರ್ಭದಲ್ಲಿ ವಿಜಯೋತ್ಸವಕ್ಕೆ ಅವಕಾಶವಿಲ್ಲ. ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ, ಶಾಂತಿ ಸುವ್ಯವಸ್ಥೆಗೆ ಸಹಕರಿಸುವಂತೆ ಕೋರಿದರು.

ವಕ್ಫ್ ಮಂಡಳಿ ಅಧ್ಯಕ್ಷ ಕೆ.ಎ.ಯಾಕುಬ್ ಮಾತನಾಡಿ, ಟಿಪ್ಪು ಜಯಂತಿಯನ್ನು ಕಳೆದ ಮೂರು ವರ್ಷಗಳಿಂದ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿತ್ತು. ಈ ಬಾರಿ ಸರ್ಕಾರ ಹಿಂದೆ ಸರಿದಿರುವುದರಿಂದ ಟಿಪ್ಪು ಜಯಂತಿ ಆಚರಣೆ ಮಾಡುತ್ತಿಲ್ಲ. ಈದ್ ಮಿಲಾದ್ ಹಬ್ಬವನ್ನು ಮಸೀದಿಯಲ್ಲಿ ಆಚರಿಸಲಾಗುತ್ತದೆ. ಇನ್ನೂ ಬಾಬರಿ ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರದ ಕಾನೂನನ್ನು ಗೌರವಿಸುತ್ತೇವೆ. ಸಂವಿಧಾನ ಬದ್ಧವಾಗಿ ನಡೆದುಕೊಳ್ಳುತ್ತೇವೆ ಎಂದರು.

ಕೊಂಡಂಗೇರಿ ಮುಸ್ಲಿಂ ಜಮಾತ್‌ ಸಮಿತಿ ಕಾರ್ಯದರ್ಶಿ ಯೂಸಫ್ ಮಾತನಾಡಿ, 1,400 ವರ್ಷಗಳಿಂದ ಈದ್ ಮಿಲಾದ್ ಹಬ್ಬವನ್ನು ಮುಸಲ್ಮಾನ ಬಾಂಧವರು, ಜಮಾತ್‌ನವರು ವಿಜೃಂಭಣೆಯಿಂದ, ಶಾಂತಿಯುತವಾಗಿ ಆಚರಿಸುತ್ತಿದ್ದೇವೆ ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ ಮಾತನಾಡಿ, ಈದ್ ಮಿಲಾದ್ ಹಬ್ಬ ಆಚರಣೆ ಸಂಬಂಧ ಇದುವರೆಗೆ ಶಾಂತಿ ಸಭೆ ನಡೆಸಿಲ್ಲ. ಇದರ ಅಗತ್ಯತೆಯೂ ಇಲ್ಲ. ಆದರೆ ಕಳೆದ 2015ರಲ್ಲಿ ಟಿಪ್ಪು ಜಯಂತಿ ಆಚರಣೆಯಿಂದ ಕೊಡಗು ಜಿಲ್ಲೆಯಲ್ಲಿ ಕಲಹ ಉಂಟಾಗಿತ್ತು. ಆದ್ದರಿಂದ ಸರ್ಕಾರ ಈ ಬಾರಿ ಟಿಪ್ಪು ಜಯಂತಿ ಆಚರಣೆ ಇಲ್ಲವೆಂದು ಆದೇಶ ಹೊರಡಿಸಿದೆ. ಹಾಗೆಯೇ ಅಯೋಧ್ಯ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಆದೇಶ ಪಾಲಿಸುತ್ತೇವೆ ಎಂದರು.

ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹ್ಯಾರೀಸ್ ಮಾತನಾಡಿ ‘ಟಿಪ್ಪು ಜಯಂತಿ ಆಚರಣೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುತ್ತೇವೆ. ಅಯೋಧ್ಯ ಸಂಬಂಧ ನ್ಯಾಯಾಲಯದ ತೀರ್ಪು ಗೌರವಿಸುತ್ತೇವೆ ಎಂದರು.

ವಿವಿಧ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಅಂಶಗಳು ಹರಿದಾಡುವುದು ತಿಳಿದುಬಂದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು. ಹಬ್ಬಗಳನ್ನು ಶಾಂತಿಯುವಾಗಿ ಆಚರಿಸಬೇಕು ಎಂದು ಕೋರಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪ್ರತಿಕ್ರಿಯಿಸಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜಿಲ್ಲಾಡಳಿತ ಜತೆಗೆ ಎಲ್ಲಾ ಧಾರ್ಮಿಕ ಸಮಾಜಗಳು ಸಹಕಾರ ನೀಡಿದ್ದೀರಿ. ಅದೇ ಸಹಕಾರವನ್ನು ಮುಂದುವರೆಸಬೇಕು. ಧಾರ್ಮಿಕ ಮುಖಂಡರು ಸಭೆಯ ಭರವಸೆಯನ್ನು ಎಲ್ಲಾ ಕಡೆ ತಿಳಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸರ್ವ ಸನ್ನದ್ಧವಾಗಿದೆ. ಆ ನಿಟ್ಟಿಲ್ಲಿ ತಮ್ಮ ಸಹಕಾರ ಅತ್ಯಗತ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.