ADVERTISEMENT

ಕೊಡಗು: ಪಿಜ್ಜಾ ಬಾಕ್ಸ್ ಎಸೆದ ಪ್ರವಾಸಿಗರು, ಕಸ ಎತ್ತಲು 50 ಕಿ.ಮೀ. ಮರಳಿ ಬಂದರು!

ಮಡಿಕೇರಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 12:38 IST
Last Updated 5 ನವೆಂಬರ್ 2020, 12:38 IST
ಕಸವನ್ನು ಎತ್ತಿ ಸ್ವಚ್ಛಗೊಳಿಸುವ ಕಾರ್ಯದಲ್ಲಿರುವುದು–ಪ್ರಾತಿನಿಧಿಕ ಚಿತ್ರ
ಕಸವನ್ನು ಎತ್ತಿ ಸ್ವಚ್ಛಗೊಳಿಸುವ ಕಾರ್ಯದಲ್ಲಿರುವುದು–ಪ್ರಾತಿನಿಧಿಕ ಚಿತ್ರ   

ಮಡಿಕೇರಿ: ಕಸ ಹಾಕಿ ಪರಾರಿಯಾದ ಪ್ರವಾಸಿಗರ ಜಾಡು ಹಿಡಿದು ಅವರಿಂದಲೇ ಕಸವನ್ನು ಹೆಕ್ಕಿಸಿ ಕಳುಹಿಸಿದ ಸ್ವಾರಸ್ಯಕರ ಘಟನೆಯೊಂದು ನಗರದಲ್ಲಿ ಶುಕ್ರವಾರ (ಅಕ್ಟೋಬರ್ 30) ನಡೆದಿದೆ.

ಚೆಟ್ಟಳ್ಳಿ ಮಾರ್ಗದಲ್ಲಿ (ಕೊಡಗು ವಿದ್ಯಾಲಯದ ಬಳಿ) ಪ್ರವಾಸಿಗರು ತಾವು ಖರೀದಿಸಿ ತಂದಿದ್ದ ಪಿಜ್ಜಾವನ್ನು ತಮ್ಮ ವಾಹನದಲ್ಲೇ ಕುಳಿತು ತಿಂದು ನಂತರ ಅದರ ಬಾಕ್ಸ್ ಮತ್ತು ಕಸವನ್ನು ರಸ್ತೆಯಲ್ಲೆ ಸುರಿದು, ಗಲೀಜು ಮಾಡಿ ಅಲ್ಲಿಂದ ಮೈಸೂರು ಮಾರ್ಗವಾಗಿ ತೆರಳಿದ್ದಾರೆ ಪ್ರವಾಸಿಗರು.

ಈ ಮಾರ್ಗವಾಗಿ ತೆರಳುತ್ತಿದ್ದ ಮಾದೇಟ್ಟಿರ ತಿಮ್ಮಯ್ಯ ಅವರು ಇದನ್ನು ಗಮನಿಸಿ ತಕ್ಷಣವೇ ಆ ಬಾಕ್ಸ್‌ ಪರಿಶೀಲಿಸಿದಾಗ ಅದರಲ್ಲಿ ಫಿಜ್ಜಾ ಖರೀದಿದಾರನ ಹೆಸರು, ವಿಳಾಸ ಮತ್ತು ಫೋನ್ ನಂಬರ್ ಪತ್ತೆಯಾಗಿದೆ. ಕೂಡಲೇ ಕಾರ್ಯಪ್ರವೃತ್ತನಾದ ತಿಮ್ಮಯ್ಯ, ಅ ನಂಬರ್‌ಗಳಿಗೆ ಕರೆಮಾಡಿ ಕಸ ತೆಗೆದು ಹೋಗುವಂತೆ ತಾಕೀತು ಮಾಡಿದ್ದಾರೆ.

ADVERTISEMENT

ಈ ಸಂದರ್ಭದಲ್ಲಿ ಪಿರಿಯಾಪಟ್ಟಣ ತಲುಪಿದ್ದ ಪ್ರವಾಸಿಗರು ತಿಮ್ಮಯ್ಯ ಅವರ ಕರೆಗೆ ಸ್ಪಂದಿಸಿ ಮರಳಿ ತಾವು ಕಸ ಎಸೆದಿದ್ದ ಚೆಟ್ಟಳ್ಳಿ ರಸ್ತೆಗೆ ವಾಪಸ್‌ ಬಂದಿದ್ದಾರೆ. ಸುಮಾರು 50 ಕಿ.ಮೀ. ಹಿಂದಕ್ಕೆ ಬಂದು ನಂತರ ತಾವು ಕಸ ಹಾಕಿದ್ದ ಪ್ರದೇಶದಲ್ಲಿದ್ದ ಕಸವನ್ನೆಲ್ಲ ತೆಗೆದು, ಶುಚಿಗೊಳಿಸಿದ್ದಾರೆ.

ಸಿಪಿಐ ಅನೂಪ್ ಮಾದಪ್ಪ ಅವರಿಗೆ ತಮ್ಮಯ್ಯ ಅವರು ವಿಷಯ ತಿಳಿಸಿದಾಗ ಕೂಡಲೇ ಅವರು ಪ್ರವಾಸಿಗರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಸೂಚನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.