ADVERTISEMENT

ಮರಗಳ್ಳರನ್ನು ಬೇಕಿದ್ದರೆ ಶೂಟ್‌ ಮಾಡಿ: ಆರ್‌.ವಿ.ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 20:00 IST
Last Updated 19 ಜೂನ್ 2019, 20:00 IST
ಕರ್ಣಂಗೇರಿ ಗ್ರಾಮದ ಮನೆಗಳ ಮುಂದೆ ಕೆಸರುಮಯವಾದ ರಸ್ತೆ
ಕರ್ಣಂಗೇರಿ ಗ್ರಾಮದ ಮನೆಗಳ ಮುಂದೆ ಕೆಸರುಮಯವಾದ ರಸ್ತೆ   

ಮಡಿಕೇರಿ: ಅರಣ್ಯ ಪ್ರದೇಶ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಕಾನೂನು ಪಾಲನೆ ಜತೆಗೆ ಮಾನವೀಯತೆಯನ್ನೂ ಮೆರೆಯಬೇಕು ಎಂದು ಸಚಿವ ಆರ್‌.ವಿ. ದೇಶಪಾಂಡೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಬುಧವಾರ ಇಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಈ ಜಿಲ್ಲೆಗಳ ಅಭಿವೃದ್ಧಿ ವಿಚಾರದಲ್ಲಿ ಅಡ್ಡಿ ಮಾಡಬಾರದು. ಅದನ್ನು ಬಿಟ್ಟು ಮರಗಳ್ಳರಿಗೆ ಬೆಂಬಲ ನೀಡಿದರೆ ಸಹಿಸುವುದಿಲ್ಲ. ಅವರನ್ನು ಬೇಕಿದ್ದರೆ ಶೂಟ್‌ ಮಾಡಿ’ ಎಂದರು.

ತೋಟದ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ನೀಡದ ವಿರಾಜಪೇಟೆ ಪ್ರೊಬೇಷನರಿ ತಹಶೀಲ್ದಾರ್‌ ಗೋವಿಂದರಾಜ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ಮೂಲಸೌಲಭ್ಯದ ನಂತರ ಮನೆ ಹಸ್ತಾಂತರ: ಕೊಡಗು ನೆರೆ ಸಂತ್ರಸ್ತರ ಮನೆ ಕಾಮಗಾರಿ ಎರಡು ಸ್ಥಳಗಳಲ್ಲಿ ಪೂರ್ಣವಾಗಿದ್ದು, ಅಲ್ಲಿ ಮೂಲಸೌಕರ್ಯ ವ್ಯವಸ್ಥೆಯಾಗುತ್ತಲೇ ಮನೆ ಹಸ್ತಾಂತರ ಮಾಡುವುದಾಗಿ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

ತಾಲ್ಲೂಕಿನ ಕರ್ಣಂಗೇರಿ ಗ್ರಾಮದಲ್ಲಿ ಸಂತ್ರಸ್ತರ ಮನೆ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಹಂತ ಹಂತವಾಗಿ ಮನೆ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

‘ಸಂತ್ರಸ್ತರ ಮನೆ ಕಾಮಗಾರಿ ಕಳಪೆಯಾಗಿದೆ’ ಎಂಬ ನಟಿ ಹರ್ಷಿಕಾ ಪೂಣಚ್ಚ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ದೇವರು ಆ ನಟಿಗೆ ಒಳ್ಳೆಯದು ಮಾಡಲಿ. ರಾಜೀವ್‌ ಗಾಂಧಿ ವಸತಿ ನಿಗಮದಿಂದ ಸರ್ಕಾರ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿ ಗುಣಮಟ್ಟದಿಂದ ಕೂಡಿದೆ’ ಎಂದು ತಿರುಗೇಟು ನೀಡಿದರು.

* ಐಎಂಎ ವಂಚನೆ ಹಗರಣದಲ್ಲಿ ರೋಷನ್‌ ಬೇಗ್‌ ಅವರ ಹೆಸರು ಎಲ್ಲೂ ಪ್ರಸ್ತಾಪವಾಗಿಲ್ಲ. ಅವರ ಅಮಾನತು ವಿಚಾರ ಪಕ್ಷದ ಚೌಕಟ್ಟಿನಲ್ಲಿ ನಡೆದಿದೆ

-ಆರ್‌.ವಿ. ದೇಶಪಾಂಡೆ, ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.