ADVERTISEMENT

ಹಾರಂಗಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ₹95 ಕೋಟಿ: ಶಾಸಕ ಡಾ.ಮಂತರ್‌ಗೌಡ

ಡಿಸೆಂಬರ್ ಇಲ್ಲವೇ ಜನವರಿಯಲ್ಲಿ ಚಾಲನೆ; ಶಾಸಕ ಡಾ.ಮಂತರ್‌ಗೌಡ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 5:37 IST
Last Updated 19 ಅಕ್ಟೋಬರ್ 2025, 5:37 IST
ಕುಶಾಲನಗರ ಸಮೀಪದ ಹಾರಂಗಿ ಅಣೆಕಟ್ಟೆಗೆ ಶನಿವಾರ ಪೂಜೆ ಸಲ್ಲಿಸಿ ಶಾಸಕ ಡಾ. ಮಂತರ್ ಗೌಡ ಬಾಗಿನ ಅರ್ಪಿಸಿದರು.
ಕುಶಾಲನಗರ ಸಮೀಪದ ಹಾರಂಗಿ ಅಣೆಕಟ್ಟೆಗೆ ಶನಿವಾರ ಪೂಜೆ ಸಲ್ಲಿಸಿ ಶಾಸಕ ಡಾ. ಮಂತರ್ ಗೌಡ ಬಾಗಿನ ಅರ್ಪಿಸಿದರು.   

ಮಡಿಕೇರಿ: ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು ₹ 95 ಕೋಟಿಯಷ್ಟು ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಡಿಸೆಂಬರ್ ಅಥವಾ ಜನವರಿಯಲ್ಲಿ ಚಾಲನೆಗೊಳ್ಳಲಿದೆ ಎಂದು ಶಾಸಕ ಡಾ.ಮಂತರ್‌ಗೌಡ ತಿಳಿಸಿದರು.

‘₹ 50 ಕೋಟಿ ವೆಚ್ಚದಲ್ಲಿ 18 ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿ ಕೈಗೊಳ್ಳಲಾಗುವುದು. ಹಾಗೆಯೇ, ₹ 36.50 ಕೋಟಿ ವೆಚ್ಚದಲ್ಲಿ ‘ಬೌನ್‍ಸ್ಟ್ರಿಂಗ್ ಬ್ರಿಡ್ಜ್’ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಗುಡ್ಡೆಹೊಸೂರಿನಿಂದ ಹುದುಗೂರು ಮಾರ್ಗದ 5 ಕಿ.ಮೀ. ರಸ್ತೆ ₹ 5 ಕೋಟಿ ವೆಚ್ಚದಲ್ಲಿ, ಚಿಕ್ಲಿಹೊಳೆ ರಸ್ತೆ ₹ 5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಿಂದ ಹಾರಂಗಿ ಜಲಾಶಯ ಕಚೇರಿ ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿಗೂ ಮುಂದಾಗಲಾಗಿದೆ ಎಂದರು.

ADVERTISEMENT

ಹಾರಂಗಿ ಎಡದಂಡೆ ನಾಲೆಯ 6.85 ಕಿ.ಮೀ.ನಿಂದ 14.75 ಕಿ.ಮೀ.ವರೆಗೆ ₹ 72 ಕೋಟಿ ಮುಖ್ಯನಾಲೆಯನ್ನು ಆಧುನೀಕರಣ ಕಾಮಗಾರಿಯು ಈಗಾಗಲೇ ಆರಂಭವಾಗಿದೆ ಎಂದು ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಾಗೂ ಜಲ ಸಂಪನ್ಮೂಲ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿದ್ದಾರೆ. ಆ ದಿಸೆಯಲ್ಲಿ ಡಿಸೆಂಬರ್ ವೇಳೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಹಾರಂಗಿ ಜಲಾಶಯ ಬಳಿಯ ಸೇತುವೆ ನಿರ್ಮಾಣ, ರಸ್ತೆ ಅಭಿವೃದ್ಧಿ, ಚಿಕ್ಲಿಹೊಳೆ ರಸ್ತೆ ಅಭಿವೃದ್ಧಿಗೆ ಒಟ್ಟಾರೆ ₹ 95 ಕೋಟಿಗೂ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ಕೆ ಜನವರಿಯಲ್ಲಿ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.

ಹಾರಂಗಿ ಜಲಾಶಯವನ್ನು ಉಳಿಸಬೇಕು. ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಹಾರಂಗಿ ಜಲಾಶಯ ಪಾತ್ರದಲ್ಲಿ ಮಹಶೀರ್ ಮೀನು ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಸಾವಯವ ಕೃಷಿಗೆ ಒತ್ತು ನೀಡಬೇಕು. ರಾಸಾಯನಿಕಗಳನ್ನು ಮಿಶ್ರಣ ಮಾಡಿ ನದಿಗೆ ಹರಿಸಬಾರದು ಎಂದು ಮನವಿ ಮಾಡಿದರು.

ಹಾರಂಗಿ ಜಲಾಶಯ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್, ಗುಂಡೂರಾವ್, ಅಂದಿನ ನೀರಾವರಿ ಸಚಿವರಾದ ನಂಜೇಗೌಡರ ಶ್ರಮ ಇದ್ದು, ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಲಾಗುವುದು. ಆ ನಿಟ್ಟಿನಲ್ಲಿ ರೈತರು ಕೈಜೋಡಿಸಬೇಕು ಎಂದರು.

ಹಾರಂಗಿ ಜಲಾಶಯ ನದಿ ಪಾತ್ರ ಗರಗಂದೂರು ಮತ್ತಿತರ ಕಡೆಗಳಲ್ಲಿ ಹೂಳು ತೆಗೆಯುವ ಕಾರ್ಯ ಮಾಡಲಾಗುವುದು. ಜೊತೆಗೆ ಗಿಡ ಗಂಟಿಗಳನ್ನು ಕಡಿಯುವ ಕೆಲಸವಾಗಬೇಕು. ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಕುಶಾಲನಗರ ಸಮೀಪದ ಹಾರಂಗಿ ಅಣೆಕಟ್ಟೆಗೆ ಶನಿವಾರ ಪೂಜೆ ಸಲ್ಲಿಸಿದ ಶಾಸಕ ಡಾ.ಮಂತರ್‌ಗೌಡ ಬಾಗಿನ ಅರ್ಪಿಸಿದರು.

ಹಾರಂಗಿ ಜಲಾಶಯದ ಹೂಳೆತ್ತುವ ಕಾರ್ಯ ಗುತ್ತಿಗೆದಾರರ ನಿರಾಸಕ್ತಿಯಿಂದಾಗಿ ಪ್ರಗತಿ ಕಂಡಿಲ್ಲ. ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಇಳಿಕೆಯಾದ ಕೂಡಲೇ ಈ ಕಾಮಗಾರಿ ಚಾಲನೆ ನೀಡಲಾಗುವುದು

-ಡಾ.ಮಂತರ್‌ಗೌಡ ಶಾಸಕ.

- ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ 5 ತಾಲ್ಲೂಕುಗಳು ಬರಲಿದ್ದು ಈ ವ್ಯಾಪ್ತಿಗೆ ಹೆಚ್ಚಿನ ಅನುದಾನ ಒದಗಿಸಿ ಹೂಳು ತೆಗೆಸಬೇಕು

- ಚೌಡೇಗೌಡ ಹಾರಂಗಿ ಜಲಾಶಯದ ನೀರು ಬಳಕೆದಾರರ ಸಂಘದ ಅಧ್ಯಕ್ಷ.

ಜಲಾಶಯದಿಂದ ಒಟ್ಟು ನೀರಿನ ಸಂಗ್ರಹಣಾ ಸಾಮಥ್ರ್ಯ 8.50 ಟಿಎಂಸಿ ಆಗಿದ್ದು ಇದರಲ್ಲಿ 8.073 ಟಿಎಂಸಿ ನೀರನ್ನು ಉಪಯೋಗಿಸಬಹುದು

-ಸತೀಶ ಹಾರಂಗಿ ಜಲಾಶಯ ಅಧೀಕ್ಷಕ ಎಂಜಿನಿಯರ್.

ಹಾರಂಗಿ ಜಲಾಶಯವು ಸೋಮವಾರಪೇಟೆ ಕುಶಾಲನಗರ ಅರಕಲಗೂಡು ಹುಣಸೂರು ಮತ್ತು ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ 134895 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ.

- ಐ.ಕೆ.ಪುಟ್ಟಸ್ವಾಮಿ ಕಾರ್ಯಪಾಲಕ ಎಂಜಿನಿಯರ್.

ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಣೆ

ಕುಶಾಲನಗರ: ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವದ ಮರುದಿನ ಹಾರಂಗಿ ಜಲಾಶಯದ ಕ್ರೆಸ್ಟ್‌ಗೇಟ್ ಬಳಿ ಇರುವ ಕಾವೇರಿ ಮಾತೆ ಪ್ರತಿಮೆಗೆ ಶಾಸಕ ಡಾ.ಮಂತರ್‌ಗೌಡ ಅವರು ಶನಿವಾರ ವಿಶೇಷ ಪೂಜೆ ಸಲ್ಲಿಸಿ ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಕಾವೇರಿ ನೀರಾವರಿ ನಿಗಮ ಹಾಗೂ ನೀರಾವರಿ ಇಲಾಖೆಯಿಂದ ಶನಿವಾರ ತಲಕಾವೇರಿಯ ಕುಂಡಿಕೆಯಿಂದ ತಂದ ಜಲದಿಂದ ಕಾವೇರಿ ಪ್ರತಿಮೆಗೆ ಅಭಿಷೇಕ ಮಾಡಿದರು. ಮೆರವಣಿಯಲ್ಲಿ ತೆರಳಿ ಮೈದುಂಬಿ ನಿಂತಿರುವ ಹಾರಂಗಿ ಅಣೆಕಟ್ಟೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ತಹಶೀಲ್ದಾರ್ ಕಿರಣ್ ಜಿ ಗೌರಯ್ಯ ನೀರು ಬಳಕೆದಾರರ ಮಹಾಮಂಡಲ ಅಧ್ಯಕ್ಷ ಎಸ್.ಸಿ.ಚೌಡೇಗೌಡ ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್‌ ವಿಕ್ಟರ್ ಸೋನ್ಸ್ ಕಾವೇರಿ ನೀರಾವರಿ ನಿಗಮದ ಹಾರಂಗಿ ವೃತ್ತದ ಅಧೀಕ್ಷಕ ಎಂಜಿನಿಯರ್ ಸತೀಶ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ ಹುಣಸೂರು ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಸಾಲಿಗ್ರಾಮ ಕಾರ್ಯಪಾಲಕ ಎಂಜಿನಿಯರ್ ಕುಶುಕುಮಾರ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಂದ್ರ ಕುಮಾರ್ ಸಹಾಯಕ ಎಂಜಿನಿಯರ್‌ಗಳಾದ ಸೌಮ್ಯ ರಾಜು ಸಂಧ್ಯಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.