
ಮಡಿಕೇರಿ: ಇಲ್ಲಿನ ವಿಜಯ ವಿನಾಯಕ ದೇಗುಲದ 27ನೇ ವಾರ್ಷಿಕೋತ್ಸವ ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಭಕ್ತರು ದೇಗುಲಕ್ಕೆ ಭೇಟಿ ನೀಡಿ ನಮಿಸಿದರು.
ಗುರುವಾರ ರಾತ್ರಿಯಿಂದಲೇ ಅರ್ಚಕ ಕೃಷ್ಣ ಉಪಾಧ್ಯೆ ಹಾಗೂ 6 ಮಂದಿ ಅರ್ಚಕರು ವಿವಿಧ ಬಗೆಯ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದರು.
ಬಳಿಕ ಶುಕ್ರವಾರ ಇಡೀ ದೇಗುಲವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಯಿತು. ಮಧ್ಯಾಹ್ನದ ಹೊತ್ತಿಗೆ ಕುಂಭಾಭೀಷೇಕ ನಡೆದು, ಆ ಬಳಿಕ ಮಹಾಮಂಗಳಾರತಿ ನೆರವೇರಿತು. ಸಾವಿರಾರು ಮಂದಿ ಈ ಉತ್ಸವದಲ್ಲಿ ಪಾಲ್ಗೊಂಡರು.
ನಂತರ, ಪ್ರಸಾದ ವಿನಿಯೋಗಿಸುವ ಅನ್ನಕ್ಕೆ ಅನ್ನಪೂರ್ಣೇಯ ಪೂಜೆ ನೆರವೇರಿಸಿ ಪ್ರಸಾದ ವಿನಿಯೋಗ ಆರಂಭಿಸಲಾಯಿತು. ಸಾಲುಗಟ್ಟಿ ನಿಂತ ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಪ್ರಸಾದ ಸ್ವೀಕರಿಸಿದರು.
ಅನ್ನಸಾಂಬರ್, ಮೊಸರನ್ನ, ಪಾಯಸ ಸೇರಿದಂತೆ ಇದ್ದ ಪ್ರಸಾದವನ್ನು ಸ್ವೀಕರಿಸಿದ ಜನರು ಭಕ್ತಿಯಿಂದ ಕೈಮುಗಿದರು.
ಈ ವೇಳೆ ಮಾತನಾಡಿದ ವಿಜಯ ವಿನಾಯಕ ದೇವಾಲಯ ಟ್ರಸ್ಟ್ ಉಪಾಧ್ಯಕ್ಷ ಜಿ.ಚಿದ್ವಿಲಾಸ್, ‘ವಿಜಯ ವಿನಾಯಕ ದೇವಾಲಯವು ಮಡಿಕೇರಿಯಲ್ಲಿ ಧಾರ್ಮಿಕ ಕ್ಷೇತ್ರವಾಗಿ ರೂಪುಗೊಂಡಿದೆ. ಭಕ್ತರ ಶ್ರದ್ಧೆಯ, ಆಸಕ್ತಿಯ, ಅವರ ಇಚ್ಛೆಯನ್ನು ಕರುಣಿಸುವ ನಂಬಿಕೆಯ ಕ್ಷೇತ್ರವಾಗಿದೆ’ ಎಂದರು.
ದೇಗುಲದ ಇತಿಹಾಸ
ವಿಜಯ ವಿನಾಯಕ ದೇವಾಲಯವು 1998ರ ಅಕ್ಟೋಬರ್ನಲ್ಲಿ ಸ್ಥಾಪಿತವಾಯಿತು. ನಂತರ 2001ರಲ್ಲಿ 30 ಅಡಿಯ ಏಕಶಿಲೆಯ ಧ್ವಜಸ್ತಂಭ ಸ್ಥಾಪನೆಯಾಯಿತು. ನಂತರ ಮಹಾದ್ವಾರ ನಿರ್ಮಾಣ ಪ್ರಭಾವಳಿ ಹಾಗೂ ಗರ್ಭಗುಡಿಯ ದ್ವಾರಕ್ಕೆ ಬೆಳ್ಳಿ ಕವಚ ನೂತನ ನೆಲಹಾಸು ಇಲ್ಲಿನ ಬಡಾವಣೆಗೆ ವಿಜಯನಗರ ಎಂಬ ನಾಮಕರಣವಾಯಿತು. 2024ರಲ್ಲಿ ಭಕ್ತಾದಿಗಳ ನೆರವಿನಿಂದ ₹ 20 ಲಕ್ಷ ಮೌಲ್ಯದ ಚಿನ್ನದ ಮುಖವಾಡವನ್ನು ಸಮರ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.