
ವಿರಾಜಪೇಟೆ: ಶಕ್ತಿ ದೇವತೆ ದಕ್ಷಿಣ ಮಾರಿಯಮ್ಮ ದೇವಿಯ ವಾರ್ಷಿಕ ಕರಗ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಶನಿವಾರ ಮುಕ್ತಾಯಗೊಂಡಿತು.
ಸಂಜೆ ದೇವಿಯ ಕರಗವು ಪಟ್ಟಣದ ತೆಲುಗರ ಬೀದಿ, ಜೈನರ ಬೀದಿ, ಮುಖ್ಯ ರಸ್ತೆ ಮೂಲಕ ದೇವಾಂಗ ಬೀದಿ, ದಖ್ಖನಿ ಮೊಹಲ್ಲಾ ಮೂಲಕ ಅಯ್ಯಪ್ಪ ಬೆಟ್ಟದ ತಪ್ಪಲಿನವರೆಗೆ ಸಾಗಿತು. ಮೆರವಣಿಗೆಯ ದಾರಿಯುದ್ದಕ್ಕೂ ಭಕ್ತರು ಇಡುಕಾಯಿ ಸೇವೆ, ಪೂಜೆಗಳು ಸಲ್ಲಿಸಿದರು. ರಾತ್ರಿ ಕರಗವು ದೇವಾಲಯಕ್ಕೆ ಆಗಮಿಸಿದ ಬಳಿಕ ಮಹಾಪೂಜೆ ಸಲ್ಲಿಸುವ ಮೂಲಕ 5 ದಿನಗಳ ಉತ್ಸವಕ್ಕೆ ತೆರೆ ಎಳೆಯಲಾಯಿತು.
ಉತ್ಸವದ ಮೊದಲ ದಿನವಾದ ಮಂಗಳವಾರ ಪಟ್ಟಣದ ಗೌರಿಕೆರೆಯ ಬಳಿ ವಿವಿಧ ಹೂವುಗಳಿಂದ ಅಲಂಕೃತ ಕರಗವನ್ನು ಮೆರವಣಿಗೆಯ ಮೂಲಕ ಪಂಚವಾದ್ಯಗಳೊಂದಿಗೆ ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಬುಧವಾರ ನಂದಾದೀಪ ಹಾಗೂ ತಂಬಿಟ್ಟು ಆರತಿ ಸೇವೆಯನ್ನು ನಡೆಸಲಾಯಿತು. ಗುರುವಾರದಂದು ದೇವಿಗೆ ವಿಶೇಷ ಅಲಂಕಾರ ಸೇವೆ, ಮಹಾಪೂಜೆ, ಹರಕೆ ಸೇವೆಗಳು ಸಲ್ಲಿಕೆ, ಪ್ರಸಾದ ವಿನಿಯೋಗ ನಡೆಯಿತು.
ಶುಕ್ರವಾರದಂದು ದೇವಿಗೆ ಅಲಂಕಾರ ಸೇವೆ ಮಹಾಪೂಜೆ ಸಲ್ಲಿಕೆಯಾಯಿತು. ರಾತ್ರಿ ವಿಶೇಷ ಪೂಜೆ , ಅನ್ನಸಂತರ್ಪಣೆ ನಡೆಯಿತು.
ವಾರ್ಷಿಕ ಕರಗ ಮಹೋತ್ಸವದ ಸಂದರ್ಭ ಮಾರಿಯಮ್ಮ ಮತ್ತು ಅಂಗಾಳ ಪರಮೇಶ್ವರಿ ದೇವಾಲಯ ಟ್ರಸ್ಟ್ ಆಡಳಿತ ಮಂಡಳಿಯ ಪದಾಧಿಕಾರಿಗಳು, ಹತ್ತು ಕುಲಸ್ಥರು, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.