
ವಿರಾಜಪೇಟೆ: ‘ಶಾಸಕರ ಕಾಳಜಿಯಿಂದಾಗಿ ಅಲ್ಪಸಂಖ್ಯಾತ ಸಮುದಾಯ ಅಭಿವೃದ್ಧಿಗಾಗಿ ಸುಮಾರು ₹20 ಕೋಟಿ ಅನುದಾನ ನೀಡಲಾಗಿದ್ದು, ಇದರಲ್ಲಿ ಶೇ 90ರಷ್ಟು ಅನುದಾನ ಬಳಕೆಯಾಗಿದೆ’ ಎಂದು ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಪಿ.ಎ.ಹನೀಫಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದಲ್ಲಿನ ಶಾಸಕರ ಗೃಹ ಕಚೇರಿಯಲ್ಲಿ ಬುಧವಾರ ನಡೆದ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ 18 ವಲಯಗಳನ್ನು ಒಳಗೊಂಡ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.
‘ಮುಂದಿನ ದಿನಗಳಲ್ಲಿ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯಲಿದೆ. ಪಕ್ಷ ಮತ್ತು ಶಾಸಕರನ್ನು ಬೆಂಬಲಿಸಲು ಸಂಘಟನಾತ್ಮಕ ಹೋರಾಟ ನಡೆಸಬೇಕು. ಪಕ್ಷಕ್ಕೆ ನೀಡಿರುವ ಕೊಡುಗೆ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು. ಎಲ್ಲಾ ವಲಯಗಳಲ್ಲಿ ಚುನಾವಣೆಗೆ ಮುನ್ನ ಸಭೆಗಳು ನಡೆಯಬೇಕು. ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಏಳಿಗೆಗೆ ಎಲ್ಲಾರು ಕೈಜೋಡಿಸಬೇಕು’ ಎಂದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೊಳಮಂಡ ರಫೀಕ್ ಅವರು ಮಾತನಾಡಿ, ‘ವಿರಾಜಪೇಟೆ ಬ್ಲಾಕ್ ನಲ್ಲಿ ಒಟ್ಟು 18 ವಲಯಗಳಿದ್ದು ಶಾಸಕರ ವಿಶೇಷ ಪ್ರಯತ್ನದಿಂದಾಗಿ ವಿವಿಧ ಕಾಮಗಾರಿಗಳು ನಡೆದಿದೆ. ಸಮಸ್ಯೆಗಳ ಬಗ್ಗೆ ಅರಿವು ಮತ್ತು ಮಾಹಿತಿಯನ್ನು ದಾಖಲೆ ಸಮೇತ ಸಮಿತಿಗೆ ತಿಳಿಸಿದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ. ಅಲ್ಪಸಂಖ್ಯಾತ ವರ್ಗದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳಿವೆ. ಮುಂದಿನ ಚುನಾವಣೆ ಎದುರಿಸುವಲ್ಲಿ ಸಮಿತಿ ಸದಸ್ಯರು ಪಕ್ಷ ಬಲಪಡಿಸುವಲ್ಲಿ ಸಂಘಟಿತರಾಗಬೇಕು’ ಎಂದರು.
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷ ಜೋಕಿಂ ರೋಡ್ರಿಗ್ರಸ್ ಅವರು ಮಾತನಾಡಿ, ‘ಶಾದಿ ಭಾಗ್ಯ ಯೋಜನೆಯಲ್ಲಿ ಗುಂಪು ಮದುವೆಗೆ ಅನ್ವಯವಾಗುತ್ತದೆ. ಹಿಂದೆ ನಡೆದು ಬಂದ ಯೋಜನೆಯಂತೆ ವೈಯಕ್ತಿಕ ಮದುವೆ ನಡೆಸುವವರಿಗೆ ಅನುದಾನ ಬಿಡುಗಡೆ ಮಾಡಬೇಕು’ ಎಂದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಏಜಾಜ್ ಅಹಮ್ಮದ್ ಮತ್ತು ಎ. ಮುಸ್ತಫಾ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮರ್ವಿನ್ ಲೋಬೋ, ಅನಿತಾ, ಪ್ರಧಾನ ಕಾರ್ಯದರ್ಶಿ ಸೈಯದ್ ಬಾವ, ಜಿಲ್ಲಾ ಜಂಟಿ ಕಾರ್ಯದರ್ಶಿ ಇಸ್ಮಾಯಿಲ್ ಗುಂಡಿಗೆರೆ, ಜಿಲ್ಲಾ ಸಂಯೋಜಕರಾದ ಟಿ.ಕೆ. ಬಶೀರ್, ಮುನೀರ್, ಬ್ಲಾಕ್ ಉಪಾಧ್ಯಕ್ಷರಾದ ಎ.ಎಸ್. ಹಬಿಬುಲ್ಲಾ, ನಿಯಾಜ್, ಹಿರಿಯ ಉಪಾಧ್ಯಕ್ಷ ಹನೀಫ್, ಪ್ರಧಾನ ಕಾರ್ಯದರ್ಶಿ ಆಗಸ್ಟಿನ್ ಬೆನ್ನಿ, ಸಹ ಕಾರ್ಯದರ್ಶಿ ಶಫೀಕ್, ಅಂತೋಣಿ, ನಿಸಾರ್ ಅಹಮ್ಮದ್, ಮುನಾವರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.