ಪ್ರಾತಿನಿಧಿಕ ಚಿತ್ರ
ವಿರಾಜಪೇಟೆ: ವಿರಾಜಪೇಟೆ ಪುರಸಭೆಯ 23 ವಾರ್ಡ್ಗಳ ಪುನರ್ ವಿಂಗಡಣೆಯು ಅವೈಜ್ಞಾನಿಕವಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಕೆಲ ಅಧಿಕಾರಿಗಳು ಸೇರಿ ಮುಂದಿನ ಚುನಾವಣೆಗೆ ಅನುಕೂಲವಾಗುವಂತೆ ವಾರ್ಡ್ ವಿಂಗಡಣೆ ಮಾಡಿಕೊಂಡಿದ್ದಾರೆ. ಇದನ್ನು ಜಿಲ್ಲಾಧಿಕಾರಿ ಗಂಭೀರವಾಗಿ ಪರಿಶೀಲಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಎ. ಮಂಜುನಾಥ್ ಆಗ್ರಹಿಸಿದರು.
ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ನೆಹರುನಗರ ಹಾಗೂ ವಿದ್ಯಾನಗರವನ್ನು ತಲಾ ಎರಡೆರಡು ವಾರ್ಡ್ಗಳಾಗಿ ವಿಂಗಡಿಸಲಾಗಿದೆ. ಆದರೆ, ಪಟ್ಟಣದ ಅತಿ ದೊಡ್ಡ ಕ್ಷೇತ್ರ ಗಾಂಧಿನಗರದ ಒಂದು ಭಾಗವನ್ನು ಗೌರಿಕೆರೆಗೆ ವಾರ್ಡ್ಗೆ ಸೇರ್ಪಡೆಗೊಳಿಸಲಾಗಿದೆ. ಇದು ದುರುದ್ದೇಶ ಪೂರಿತವಾಗಿದ್ದು, ಜಿಲ್ಲಾಧಿಕಾರಿ ಇದನ್ನು ಗಂಭೀರವಾಗಿ ಪರಿಗಣಿಸಿ ಗಾಂಧಿನಗರವನ್ನು ವಾರ್ಡ್ 1 ಮತ್ತು 2 ಎಂದು ಎರಡು ವಾರ್ಡ್ಗಳಾಗಿ ವಿಂಗಡಿಸಬೇಕು ಎಂದರು.
ಸ್ಥಳೀಯ ಸಂಸ್ಥೆಗೆ ಪ್ರತಿ ಬಾರಿ ಕಾಯಂ ಆಗಿ ಆಯ್ಕೆಯಾಗಿ ಬರುತ್ತಿರುವ ಜನಪ್ರತಿನಿಧಿಗಳು ಮುಂದಿನ ಚುನಾವಣೆಯಲ್ಲಿ ಕೂಡ ತಮ್ಮ ಗೆಲುವಿಗೆ ಅನೂಕೂಲವಾಗುವಂತೆ ವಾರ್ಡ್ ವಿಂಗಡಣೆ ಮಾಡುವಲ್ಲಿ ಸಫಲರಾಗಿದ್ದಾರೆ. ಹೊರಜಿಲ್ಲೆ ಹಾಗು ಹೊರರಾಜ್ಯಗಳ ಕಾರ್ಮಿಕರು ಮತ್ತು ವ್ಯಾಪಾರಿಗಳನ್ನು ಅನಧಿಕೃತವಾಗಿ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ. ಇವರು ತಮ್ಮ ನೈಜ ಜಿಲ್ಲೆ ಹಾಗೂ ರಾಜ್ಯದಲ್ಲಿ ಚುನಾವಣೆ ನಡೆಯುವಾಗ ಮತದಾನಕ್ಕೆ ಊರಿಗೆ ಹೋಗುತ್ತಿರುವುದನ್ನು ಗಮನಿಸಲಾಗಿದೆ. ಅಂದರೆ 2 ಕಡೆಯೂ ಇವರು ಮತದಾನ ಮಾಡುತ್ತಿದ್ದಾರೆ. ಎರಡೂ ಕಡೆ ಮತದಾನಕ್ಕೆ ಅವಕಾಶ ಮಾಡಿಕೊಡುತ್ತಿರುವ ಅಧಿಕಾರಿಗಳು ಸೇರಿ ಇತರರ ವಿರುದ್ಧ ಸೂಕ್ತ ಕ್ರಮವನ್ನು ಜಿಲ್ಲಾಧಿಕಾರಿ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪಕ್ಷದ ಕಾರ್ಯದರ್ಶಿ ಹರ್ಷ, ತಾಲ್ಲೂಕು ಉಪಾಧ್ಯಕ್ಷ ಪಾಣತ್ತಲೆ ಸತ್ಯ, ಬಲ್ಲುಡ ವಿನೋದ್, ಯುವ ಘಟಕದ ಅಧ್ಯಕ್ಷ ಸೈಫುದ್ದಿನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.