ವಿರಾಜಪೇಟೆ: ಪಟ್ಟಣದ ಮುಖ್ಯ ರಸ್ತೆಯಲ್ಲಿ ಕೆಲವು ಕಟ್ಟಡಗಳ ಮುಂಭಾಗ ವಾಹನ ನಿಲುಗಡೆಗೆ ಅವಕಾಶ ನೀಡದೆ ಮಾಲೀಕರು ಬೇಲಿ ಹಾಕಿ ತಡೆವೊಡ್ಡುತ್ತಿರುವ ಬಗ್ಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದು, ಪೊಲೀಸರ ಸಹಕಾರದೊಂದಿಗೆ ಬೇಲಿ ತೆರವುಗೊಳಿಸುವುದಾಗಿ ಅಧ್ಯಕ್ಷೆ ಎಂ.ಕೆ.ದೇಚಮ್ಮ ಭರವಸೆ ನೀಡಿದರು.
ಬುಧವಾರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ರಂಜಿ ಪೂಣಚ್ಚ ಮಾತನಾಡಿ ಮುಖ್ಯರಸ್ತೆಯ ಕೆಲವರು ಕಟ್ಟಡದ ಮುಂಭಾಗ ವಾಹನ ನಿಲುಗಡೆಗೆ ಅವಕಾಶ ನೀಡದೆ ಕಬ್ಬಿಣದ ಕಂಬ ಅಥವಾ ಅಡ್ಡಲಾಗಿ ಬೇಲಿ ಹಾಕುವ ಮೂಲಕ ತಡೆಯೊಡ್ಡುತ್ತಿದ್ದಾರೆ. ಇದನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದಾಗ ಅಧ್ಯಕ್ಷೆ ದೇಚಮ್ಮ ತೆರವು ಮಾಡುವ ಭರವಸೆ ನೀಡಿದರು.
₹20 ಕೋಟಿ ಅನುದಾನದಲ್ಲಿ ₹9 ಕೋಟಿ ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು , 24 ರಂದು ಈ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಎಸ್. ಪೊನ್ನಣ್ಣ ಭೂಮಿಪೂಜೆ ನೆರೆವೇರಿಸಲಿದ್ದಾರೆ. ಪೌರಕಾರ್ಮಿಕರು ಕಸವಿಲೇವಾರಿ ಮಾಡುತ್ತಿದ್ದರೂ ಕೆಲ ಸಾರ್ವಜನಿಕರು ರಸ್ತೆಬದಿ ಕಸ ಬಿಸಾಡುವುದರ ಮೂಲಕ ಅಶುಚಿತ್ವಕ್ಕೆ ಕಾರಣರಾಗುತ್ತಿದ್ದಾರೆ ಎಂದರು.
ಸದಸ್ಯ ಡಿ.ಪಿ. ರಾಜೇಶ್ ಮಾತನಾಡಿ ಸದಸ್ಯರಾದ ಡಿ.ಪಿ.ರಾಜೇಶ್ ಕಸ ಬಿಸಾಡುತ್ತಿರುವ ಚಿತ್ರವನ್ನು ಸೆರೆ ಹಿಡಿದು ಸಾಮಾಜಿಕ ಜಾಲ ತಾಣದ ಮೂಲಕ ರವಾನಿಸುವ ವಿದ್ಯಾರ್ಥಿಗಳು , ಸಾರ್ವಜನಿಕರಿಗೆ ₹100 ಬಹುಮಾನ ಘೋಷಣೆ ಮಾಡೋಣ ಎಂದು ಸಲಹೆ ನೀಡಿದರು. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿತು.
ಮಾತನಾಡಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಸದಸ್ಯ ಸಿ.ಕೆ. ಪೃಥ್ವಿನಾಥ್ ಪಟ್ಟು ಹಿಡಿದದ್ದು, ಗೊಂದಲ ಸೃಷ್ಟಿಯಾಯಿತು. ಪೊಲೀಸರ ಪ್ರವೇಶವಾಗಿ ಬಳಿಕ ಗೊಂದಲ ತಿಳಿಯಾಯಿತು.
ನಿಧನರಾದ ಸದಸ್ಯೆ ಬೋವ್ವೇರಿಯಂಡ ಆಶಾ ಸುಬ್ಬಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪುರಸಭೆಯ ಮುಖ್ಯಾಧಿಕಾರಿ ನಾಚಪ್ಪ, ಉಪಾಧ್ಯಕ್ಷೆ ಫಸಿಹ ತಬಸ್ಸುಂ, ಸದಸ್ಯರಾದ ಮೊಹಮ್ಮದ್ ರಾಫಿ, ಎಚ್.ಎಸ್. ಮತೀನ್, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್, ಆರೋಗ್ಯ ಸಮಿತಿ ಅಧ್ಯಕ್ಷ ಪೂರ್ಣಿಮಾ, ಶಬರೀಶ್ ಶೆಟ್ಟಿ, ಸುನಿತಾ ಜೂನಾ, ಅನಿತಾ ಕುಮಾರ್, ಸುಭಾಷ್, ರಜನಿಕಾಂತ್ ವಿ.ಆರ್, ಅಗಸ್ಟಿನ್ ಬೆನ್ನಿ, ಯಶೋಧ ಮಂದಣ್ಣ ಹಾಗೂ ಎಂಜಿನಿಯರ್ ಹೇಮ ಕುಮಾರ್, ಪರಿಸರ ಎಂಜಿನಿಯರ್ ರೀತು ಸಿಂಗ್, ಕಂದಾಯ ಅಧಿಕಾರಿ ಸೋಮೇಶ್, ಪುರಸಭೆಯ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.