ADVERTISEMENT

ವಾಲಿಬಾಲ್ ಸೋಮವಾರಪೇಟೆ, ಥ್ರೋಬಾಲ್ ಮಡಿಕೇರಿ ಪ್ರಥಮ

ಸುಂಟಿಕೊಪ್ಪ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 6:57 IST
Last Updated 7 ನವೆಂಬರ್ 2022, 6:57 IST
ಸುಂಟಿಕೊಪ್ಪ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ಭಾನುವಾರ ನಡೆದ ಬಿಲ್ಲವ ಕ್ರೀಡಾಕೂಟವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ ವೇಣುಗೋಪಾಲ್ ಉದ್ಘಾಟಿಸಿದರು
ಸುಂಟಿಕೊಪ್ಪ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ಭಾನುವಾರ ನಡೆದ ಬಿಲ್ಲವ ಕ್ರೀಡಾಕೂಟವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ ವೇಣುಗೋಪಾಲ್ ಉದ್ಘಾಟಿಸಿದರು   

ಸುಂಟಿಕೊಪ್ಪ: ಇಲ್ಲಿನ ಜಿಯಂಪಿ ಶಾಲಾ ಮೈದಾನದಲ್ಲಿ ಭಾನುವಾರ ನಡೆದ ಮಹಿಳೆಯರ ಥ್ರೋಬಾಲ್‌ನಲ್ಲಿ ಮಡಿಕೇರಿ ತಂಡ ಪ್ರಶಸ್ತಿ ಪಡೆದರೆ, ಪುರುಷರ ವಾಲಿಬಾಲ್‌ನಲ್ಲಿ ಸೋಮವಾರಪೇಟೆ ತಂಡ ಟ್ರೋಫಿ ಎತ್ತಿ ಹಿಡಿಯಿತು.

ಇಲ್ಲಿನ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘ, ಬಿಲ್ಲವ ವಿದ್ಯಾರ್ಥಿಗಳಲ್ಲಿ ಘಟಕದ ಸಹಭಾಗಿತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಬಿಲ್ಲವ ಕ್ರೀಡಾಕೂಟದ ಎರಡನೇ ದಿನ ವಿವಿಧ ಸ್ಪರ್ಧೆಗಳು ನಡೆದವು.

ಥ್ರೋಬಾಲ್ ಟೂರ್ನಿಯಲ್ಲಿ ಟೀಂ ಅಂಜನಿ ಮಡಿಕೇರಿ ಮಹಿಳಾ ಸಂಘವು ಸುಂಟಿಕೊಪ್ಪದ ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ವಿರುದ್ಧ 15-8, 15-12 ಅಂಕಗಳೊಂದಿಗೆ ಜಯಗಳಿಸಿ ಗೆಲುವಿನ‌ ನಗೆ ಬೀರಿತು.

ADVERTISEMENT

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ದೇಯಿ ಬೈದೇತಿ ಮಹಿಳಾ ಸಂಘವು ಬಿಲ್ಲವ ವಿದ್ಯಾರ್ಥಿ ಘಟಕದ ವಿರುದ್ದ 13-15, 2-15 ಅಂಕಗಳೊಂ ದಿಗೆ ಜಯಗಳಿಸಿ ಫೈನಲ್ ಪ್ರವೇಶಿಸಿತ್ತು.

ಮತ್ತೊಂದು ಪಂದ್ಯದಲ್ಲಿ ಮಡಿಕೇರಿ ಟೀಂ ಅಂಜನಿ ತಂಡವು ಕುಶಾಲನಗರ ಸ್ವರ್ಣ ಮಹಿಳಾ ತಂಡವನ್ನು 15-6, 15-8 ಅಂಕಗಳಿಂದ ಜಯಗಳಿಸಿ ಫೈನಲ್ ಪ್ರವೇಶಿಸಿತ್ತು.

ವಾಲಿಬಾಲ್: ಪುರುಷರ ವಾಲಿಬಾಲ್ ಟೂರ್ನಿಯಲ್ಲಿ ಸೋಮವಾರಪೇಟೆಯ ಬಿರ್ವ ಬ್ರದರ್ಸ್ ತಂಡವು ಸುಂಟಿಕೊಪ್ಪದ ಬಿಲ್ಲವ ಪ್ಯಾಂಥರ್ಸ್ ತಂಡವನ್ನು 15-7, 15-12 ಸೋಲಿಸಿ ಬಿಲ್ಲವ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸುಂಟಿಕೊಪ್ಪ ಬಿಲ್ಲವ ಪ್ಯಾಂಥರ್ಸ್ ತಂಡ ಮತ್ತು ಬಿಲ್ಲವ ಸ್ಕಾರ್ಪಿಯನ್ಸ್ ‘ಎ’ ತಂಡದ ವಿರುದ್ಧ ರೋಚಕ ಪಂದ್ಯ ನಡೆಯಿತು. ಮೊದಲ ಹಂತದಲ್ಲಿ ಬಿಲ್ಲವ ಸ್ಕಾರ್ಪಿಯನ್ಸ್ ತಂಡವು 15-13 ಅಂಕಗಳಿಗೆ ಮುನ್ನಡೆ ಪಡೆದರೆ, ಎರಡನೇ ಹಂತದಲ್ಲಿ 15-10 ಅಂಕಗಳಿಂದ ಬಿಲ್ಲವ ಪ್ಯಾಂಥರ್ಸ್ ಸಮಬಲ ಕಾಯ್ದುಕೊಂಡಿತು. ಭಾರಿ ಪೈಪೋಟಿಯಿಂದ ಕೂಡಿದ ಮೂರನೇ ಹಂತದ ಕೊನೆಯಲ್ಲಿ ಬಿಲ್ಲವ ಪ್ಯಾಂಥರ್ಸ್ ತಂಡವು 25-16 ಅಂಕಗಳಿಂದ ಗೆಲುವಿನ ನಗೆ ಬೀರಿತು.

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಿರ್ವ ಬ್ರದರ್ಸ್ ಸೋಮವಾರಪೇಟೆ ತಂಡವು ರಾಯಲ್ ಪೂಜಾರಿ ಮಡಿಕೇರಿ ತಂಡವನ್ನು 15-4, 15–12 ಅಂಕಗಳೊಂದಿಗೆ ಸೋಲಿಸಿತು.

ಹಗ್ಗಜಗ್ಗಾಟ: ಪುರುಷರ ವಿಭಾಗದಲ್ಲಿ ಟೈಟನ್ಸ್ ಮಕ್ಕಂದೂರು ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ಸುಂಟಿಕೊಪ್ಪ ಬಿಲ್ಲವ ವಿದ್ಯಾರ್ಥಿ ಘಟಕ ಪಡೆದುಕೊಂಡಿತು. ಮಹಿಳೆ ಯರ ವಿಭಾಗದಲ್ಲಿ ಮಡಿಕೇರಿ ತಂಡ ಜಯಗಳಿಸಿದರೆ, ದ್ವಿತೀಯ ಸ್ಥಾನ ಕುಶಾಲನಗರ ತಂಡ ಪಡೆದುಕೊಂಡಿತು.

ಕ್ರೀಡಾಕೂಟಕ್ಕೆ ಸುಂಟಿಕೊಪ್ಪ ಪಿಡಿಒ ವೇಣುಗೋಪಾಲ್, ಕೆದಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶ್ಮಿತಾ, ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ನಿರೂಪ ಹರೀಶ್ ಚಾಲನೆ ನೀಡಿದರು.

ಸಂಘದ ಅಧ್ಯಕ್ಷ ಬಿ.ಎಂ.ಮುಖೇಶ್, ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಕೊಟ್ಯಾನ್, ಉಪಾಧ್ಯಕ್ಷರಾದ ನಾಗೇಶ್ ಪೂಜಾರಿ, ದೇವಪ್ಪ ಪೂಜಾರಿ, ಗೀತಾ ವಿಶ್ವನಾಥ್, ಖಜಾಂಚಿ ಚಂದ್ರ, ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಮಧು ನಾಗಪ್ಪ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರೀತಂ, ಪದಾಧಿಕಾರಿಗಳಾದ ಬಿ.ಕೆ.ಮೋಹನ್, ಲಕ್ಷ್ಮಣ್ ಪೂಜಾರಿ, ಅಕ್ಷಿತ್ ಪೂಜಾರಿ, ಯಶ್ವಿತ್ ಪೂಜಾರಿ, ಮಿಲನ್ ಪೂಜಾರಿ, ಹರ್ಷಿತ್ ಪೂಜಾರಿ, ನಿಶಾಂತ್, ಗಗನ್ ಪೂಜಾರಿ, ಕ್ರೀಡಾ ಸಂಚಾಲಕ ಹರೀಶ್ ಬಿರ್ವ, ಸೋಮವಾರಪೇಟೆಯ ಹರೀಶ್ ಕೋಟ್ಯಾನ್, ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಬಾಬು ಪೂಜಾರಿ, ರಮೇಶ್ ಪೂಜಾರಿ, ದಿನೇಶ್ ಪೂಜಾರಿ, ವೀಣಾ, ಪೂರ್ಣಿಮಾ, ಮಹಿಮಾ ಇದ್ದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.