ನಾಪೋಕ್ಲು: ಜಿಲ್ಲೆಯ ಗಡಿಭಾಗ ಸಂಪಾಜೆ ಗ್ರಾಮ ಪಂಚಾಯಿತಿಯ ಕೊಯನಾಡಿನ ಗ್ರಾಮದ ಕೇನಾಜೆ ಉಲ್ಲಾಸ ಎಂಬವರ ತೋಟಕ್ಕೆ ಮಂಗಳವಾರ ರಾತ್ರಿ ಕಾಡಾನೆಗಳು ನುಗ್ಗಿ ಕೃಷಿ ನಾಶ ಪಡಿಸಿವೆ.
ಕಾಡಾನೆಗಳ ಹಿಂಡು ತೆಂಗು, ಅಡಿಕೆ, ಬಾಳೆ ಗಿಡಗಳನ್ನು ಧ್ವಂಸ ಗೊಳಿಸಿವೆ. ಅರಣ್ಯ ಇಲಾಖೆ ಹಾಗೂ ಸರ್ಕಾರ ಸೂಕ್ತ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಮೀಪದ ನೆಲಜಿ ಗ್ರಾಮದ ಅಪ್ಪುಮಣಿಯಂಡ ರಘುಸುಬ್ಬಯ್ಯ ಅವರ ಗದ್ದೆಗಳಲ್ಲಿ ಭತ್ತದ ಪೈರನ್ನು ಕಾಡಾನೆಗಳು ತುಳಿದು ನಾಶ ಮಾಡಿವೆ. ತೋಟಗಳಲ್ಲೂ ಅಡ್ಡಾಡಿದ್ದು, ಫಸಲು ಹಾನಿಗೊಳಗಾಗಿದೆ. ನೆಲಜಿ, ಬಲ್ಲಮಾವಟಿ, ಪೇರೂರು ಗ್ರಾಮ ಗಳಲ್ಲಿ ಕಾಡಾನೆಗಳು ಹಾನಿ ಮಾಡಿದ್ದು, ಅಧಿಕಾರಿಗಳು ಸ್ಪಂದಿಸಿಲ್ ಎಂದು ರಘುಸುಬ್ಬಯ್ಯ ಆರೋಪಿಸಿದ್ದಾರೆ.
ನಾಪೋಕ್ಲು ಸಮೀಪದ ನರಿಯಂದಡ ಗ್ರಾಮದ ಪೊಕ್ಕೋಳಂಡ್ರ ಮಕ್ಕಿಮನೆ, ಮಂಜೀಪುರ ಕುಟುಂಬಸ್ಥರ ತೋಟಗಳಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಹುಲಿ ಕಂಡರೆ ಅರಣ್ಯ ಇಲಾಖೆ ಯನ್ನು ಸಂಪರ್ಕಿಸುವಂತೆ (ಸಂಪರ್ಕ ಸಂಖ್ಯೆ 8277124444) ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.