ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ಶನಿವಾರ ನಡೆದ ‘ಯುವ ಕಲೋತ್ಸವ’ದಲ್ಲಿ ಯುವಕ, ಯುವತಿಯರು ಸಂಭ್ರಮಿಸಿದರು. ಕರವಲೆ ಭಗವತಿ ದೇಗುಲದಿಂದ ಗಾಂಧಿ ಮೈದಾನದವರೆಗೆ ನಡೆದ ಬೈಕ್ ರ್ಯಾಲಿಯಲ್ಲಿ ನೂರಾರು ಮಂದಿ ಭಾಗಿಯಾದರು. ಗಾಂಧಿ ಮೈದಾನದಲ್ಲಿ ನಡೆದ ಬೈಕ್ ಸ್ಟಂಟ್ ಸಾಹಸ ಪ್ರದರ್ಶನವು ಸಾಹಸಪ್ರಿಯರಿಗೆ ರಸಗವಳವಾಗಿ ಪರಿಣಮಿಸಿತು.
ಮಧ್ಯಾಹ್ನದ ನಂತರ ರಾತ್ರಿಯವರಗೂ ‘ಕಲಾಸಂಭ್ರಮ’ ವೇದಿಕೆಯಲ್ಲಿ ನಡೆದ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಯುವ ಸಮುದಾಯದ ಕುಣಿದು ಕುಪ್ಪಳಿಸಿತು. ಕಿವಿಗಡಚಿಕ್ಕುವ ಡಿ.ಜೆ, ಧ್ವನಿವರ್ಧಕಗಳ ಶಬ್ದಕ್ಕೆ ಮನದಣಿಯೇ ಯುವಕರು ಸಂಭ್ರಮಿಸಿದರು. ಇದಕ್ಕೂ ಮುನ್ನ ವಿಧಾನಪರಿಷತ್ತಿನ ನಿಕಟಪೂರ್ವ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಉದ್ಘಾಟಿಸಿದರು.
ಕಣ್ಣು ಕುಕ್ಕುವ ಬೆಳಕುಗಳಿಂದ, ಧ್ವನಿವರ್ಧಕಗಳ ಶಬ್ದದೊಂದಿಗೆ, ಹುರುಳಿ ಹುರಿದಂತೆ ಪಟಪಟನೇ ಮಾತನಾಡುತ್ತಿದ್ದ ನಿರೂಪಕರಿಂದ ಇಡೀ ಕಾರ್ಯಕ್ರಮ ಮನಮುಟ್ಟುವಂತೆ ಮೂಡಿ ಬಂತು.
ಸಾಂಪ್ರದಾಯಕ ದಿರಿಸಿನಲ್ಲಿ ರೂಪದರ್ಶಿಯರು ಮಿಂಚಿದರು. ಹಲವು ತಂಡಗಳು ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡವು. ಸ್ಟಾರ್ನೈಟ್ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಮನ ಸೆಳೆದವು. ಪಾಶ್ಚತ್ಯ, ಸಾಂಪ್ರದಾಯಿಕ ಶೈಲಿಗಳ ಮಿಶ್ರಣ ಯುವ ಕಲೋತ್ಸವದಲ್ಲಿ ವ್ಯಾಪಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.