ಮಡಿಕೇರಿ: ಈ ಬಾರಿಯ ಮಡಿಕೇರಿ ‘ಯುವ ದಸರೆ’ ಅ. 1ರಂದು ‘ಯುವ ಕಲೋತ್ಸವ’ ಎಂಬ ಶೀರ್ಷಿಕೆಯಡಿ ನಡೆಯಲಿದೆ ಎಂದು ಕಾರ್ಯಕ್ರಮಗಳನ್ನು ಆಯೋಜಿಸುವ ಕಿಂಬರ್ಲಿ ರಿಕ್ರಿಯೇಷನ್ಸ್ನ ಸದಸ್ಯೆ ಪ್ರಜ್ಞಾ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಅಂದು ಬೆಳಿಗ್ಗೆ 10 ಗಂಟೆಗೆ ‘ಸುಸ್ಥಿರ ಪ್ರವಾಸೋದ್ಯಮ’ ಮತ್ತು ‘ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ’ ಕುರಿತು ಅರಿವು ಮೂಡಿಸುವ ಸಲುವಾಗಿ ಮೋಟಾರ್ ಬೈಕ್ ರ್ಯಾಲಿಯು ಭಗವತಿ ನಗರದಿಂದ ಗಾಂಧಿ ಮೈದಾನದವರೆಗೆ ನಡೆಯಲಿದೆ. ಸೂಪರ್ ಬೈಕ್ಗಳನ್ನು ಹೊಂದಿರುವವರೂ ಇದರಲ್ಲಿ ಭಾಗಿಯಾಗಲಿದ್ದಾರೆ. ಆಸಕ್ತರು ತಮ್ಮ ತಮ್ಮ ಬೈಕ್ಗಳಲ್ಲಿಯೂ ಈ ರ್ಯಾಲಿಯಲ್ಲಿ ಭಾಗವಹಿಸಬಹುದು’ ಎಂದರು.
‘ಬಳಿಕ ಗಾಂಧಿ ಮೈದಾನದಲ್ಲಿ ‘ರಿಮೋಟ್ ಕಾರ್ ಬ್ಯಾಟಲ್’ ಎಂಬ ವಿಶಿಷ್ಟ ಹಾಗೂ ಅಪರೂಪದ ಕಾರ್ಯಕ್ರಮ ಇರಲಿದೆ. ಇದರಲ್ಲಿ ಸುಮಾರು 25ಕ್ಕೂ ಹೆಚ್ಚು ರಿಮೋಟ್ ನಿಯಂತ್ರಿತ ಕಾರ್ಗಳ ರೇಸ್ ಇರಲಿದ್ದು, ಯುವ ಸಮುದಾಯವನ್ನು ಕುತೂಹಲದ ಉತ್ತುಂಗಕ್ಕೆ ಕರೆದೊಯ್ಯಲಿದೆ’ ಎಂದು ಕಿಂಬರ್ಲಿ ರಿಕ್ರಿಯೇಷನ್ಸ್ನ ದಿನೇಶ್ ಹೇಳಿದರು.
‘ಮಧ್ಯಾಹ್ನ 3 ಗಂಟೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣವನ್ನು ಗಾಂಧಿ ಮೈದಾನದಲ್ಲಿ ಪ್ರೇಕ್ಷಕರು ಸವಿಯಬಹುದು’ ಎಂದು ಕೆ.ಜಿ.ಮದನ್ ತಿಳಿಸಿದರು.
‘ಇಲ್ಲಿ ನೃತ್ಯ ಸ್ಪರ್ಧೆಯ ಜತೆಗೆ ವೈವಿಧ್ಯಮಯ ನೃತ್ಯಗಳ ಪ್ರದರ್ಶನವೂ ಇರಲಿದೆ. ಒಟ್ಟು 10 ತಂಡಗಳಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ. ಕೊಡಗು ಅಲ್ಲದೇ ಹೊರಜಿಲ್ಲೆಯ ತಂಡಗಳಿಗೂ ಆದ್ಯತೆ ನೀಡಲಾಗುವುದು. ಆದರೆ, ಹೆಚ್ಚಾಗಿ ಯುವ ಸಮುದಾಯಕ್ಕೆ ಅವಕಾಶ ಕಲ್ಪಿಸಲಾಗುವುದು. ಇದರೊಂದಿಗೆ ಮಾಡೆಲಿಂಗ್, ಸಾಂಪ್ರದಾಯಿಕ ಉಡುಗೆಗಳ ಫ್ಯಾಷನ್ ಶೋ ಸಹ ಇರಲಿದೆ’ ಎಂದು ಹೇಳಿದರು.
ಸ್ಪರ್ಧೆಗೆ ಆಹ್ವಾನ
ಮಡಿಕೇರಿ ದಸರಾ ಟೈಟಲ್ ಹಾಡನ್ನು kimberly_recreations ಎಂಬ ಇನ್ಸ್ಟಾಗ್ರಾಂ ಪುಟದಲ್ಲಿ ಹಾಕಲಾಗಿದೆ. ಆ ಹಾಡಿಗೆ ವಿಭಿನ್ನ ನೃತ್ಯ ಮಾಡಿ ವಿಡಿಯೊ ಕಳಿಸಿಕೊಟ್ಟಲ್ಲಿ, ಅತ್ಯುತ್ತಮ ನೃತ್ಯಕ್ಕೆ ಪ್ರಶಸ್ತಿಯೂ ಸಿಗಲಿದೆ. ಮಾಹಿತಿಗೆ: 8762547987 ಸಂಪರ್ಕಿಸಬಹುದು ಎಂದರು.
ತಂಡದ ಸದಸ್ಯರಾದ ನಚಿಕೇತ್, ವೀಣಾಕ್ಷಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.