ADVERTISEMENT

ಅಂಗವಿಕಲರ ಅಭಿವೃದ್ಧಿಗೆ ಅವಕಾಶ ಅಗತ್ಯ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 9:05 IST
Last Updated 13 ಅಕ್ಟೋಬರ್ 2012, 9:05 IST

ಶ್ರೀನಿವಾಸಪುರ:  ಸಮಾಜವು ಅಂಗವಿಕಲರ ಬಗ್ಗೆ ಅನುಕಂಪ ವ್ಯಕ್ತಪಡಿಸಿದರಷ್ಟೇ ಸಾಲದು, ಅವರು ಮುಖ್ಯ ವಾಹಿನಿಗೆ ಬರಲು ಅಗತ್ಯವಾದ ಅವಕಾಶಗಳನ್ನು ಒದಗಿಸಿ ಕೊಡಬೇಕು ಎಂದು ತಾಲ್ಲೂಕು ಪಂಚಾಯಿತಿ ಸಮಿತಿ ಕಾರ್ಯನಿರ್ವಹಣಾಧಿಕಾರಿ ಬಸವರಾಜಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಮಿತಿ ಕಚೇರಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಅಂಗವಿಕಲರ ಪುನರ್ವಸತಿ ಕೊಠಡಿ ಹಾಗೂ ರ‌್ಯಾಂಪ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಗವಿಕಲರಿಗಾಗಿ ಮೀಸಲಿರುವ ಶೇ 3ರ ಅನುದಾನದಲ್ಲಿ ಕಚೇರಿಗೆ ಅಗತ್ಯವಾದ ಲ್ಯಾಪ್‌ಟ್ಯಾಪ್ ಹಾಗೂ ಪ್ರಿಂಟರ್ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ತಾ.ಪಂ ಸಮಿತಿ ಅಧ್ಯಕ್ಷ ವೈದ್ಯಂ ವೆಂಕಟರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಅಂಗವಿಕಲರ ಅಭಿವೃದ್ಧಿಗಾಗಿ ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ಶೇ 3 ರ ಅನುದಾನದಲ್ಲಿ ಕೊಠಡಿಯನ್ನು ನವೀಕರಿಸಲಾಗುವುದು. ತಾಲ್ಲೂಕಿನ ಅಂಗವಿಕಲರಿಗೆ ವಿವಿಧ ಸಾಧನ ಸಲಕರಣೆ ವಿತರಿಸಲಾಗುವುದು. ಫಲಾನುಭವಿಗಳ ಪಟ್ಟಿ ತಯಾರಿಸಿದ ಬಳಿಕ ಅಂಗವಿಕಲರಿಗಾಗಿ ಮೀಸಲಿರುವ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಜಿ.ಪಂ ಉಪಾಧ್ಯಕ್ಷೆ ರತ್ನಮ್ಮ ಗಣೇಶ್ ಸಮಾರಂಭ ಉದ್ಘಾಟಿಸಿದರು. ತಾಲ್ಲೂಕು ಅಂಗವಿಕಲರ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಹನುಮಂತರೆಡ್ಡಿ, ಗ್ರಾ.ಪಂ ಸದಸ್ಯ ಗಣೇಶ್, ಎಂಜಿನಿಯರ್ ರವಿಕುಮಾರ್, ಆರಿಕುಂಟೆ ಗ್ರಾ.ಪಂ ಮಾಜಿ ಅಧ್ಯಕ್ಷ ಸತೀಶ್ ಕುಮಾರ್, ಎಂಆರ್‌ಡಬ್ಲ್ಯು ವೈ.ವಿ.ಶ್ರೀನಿವಾಸಗೌಡ, ನೇತಾಜಿ ಸ್ಫೂರ್ತಿ ಸ್ವಸಹಾಯ ಗುಂಪಿನ ಅಧ್ಯಕ್ಷ ಸುರೇಶ್, ಮಾಲೂರು ತಾಲ್ಲೂಕು ಎಂಆರ್‌ಡಬ್ಲ್ಯು ಚೌಡಪ್ಪ, ವೆಂಕಟೇಶಪ್ಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.