ADVERTISEMENT

ಅಕ್ರಮ ಚಟುವಟಿಕೆಗಳ ತಾಣವಾಗಿರುವ ಭವನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 9:15 IST
Last Updated 7 ಅಕ್ಟೋಬರ್ 2017, 9:15 IST
ಮಾಲೂರು ತಾಲ್ಲೂಕಿನ ಶಿವಾರಪಟ್ಟಣ ಗ್ರಾಮದಲ್ಲಿ ಶಿಲ್ಪಿಗಳ ತರಬೇತಿ ಹಾಗೂ ಶಿಲ್ಪಕಲಾಕೃತಿಗಳ ಪ್ರದರ್ಶನ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿರುವುದು.
ಮಾಲೂರು ತಾಲ್ಲೂಕಿನ ಶಿವಾರಪಟ್ಟಣ ಗ್ರಾಮದಲ್ಲಿ ಶಿಲ್ಪಿಗಳ ತರಬೇತಿ ಹಾಗೂ ಶಿಲ್ಪಕಲಾಕೃತಿಗಳ ಪ್ರದರ್ಶನ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿರುವುದು.   

ಮಾಲೂರು: ತಾಲ್ಲೂಕಿನ ಶಿವಾರಪಟ್ಟಣದಲ್ಲಿ ಶಿಲ್ಪಿಗಳ ತರಬೇತಿ ಹಾಗೂ ಶಿಲ್ಪಕಲಾಕೃತಿಗಳ ಪ್ರದರ್ಶನ ಭವನ ನಿರ್ಮಾಣದ ಕಾಮಗಾರಿ ಸ್ಥಗಿತಗೊಂಡಿದ್ದು ಅಕ್ರಮ ಚಟುವಟಿಕೆಗಳ ತಾಣವಾಗಿದೆ.

ದೇಶದಲ್ಲೇ ಶಿಲ್ಪಕಲಾ ಕೃತಿಗೆ ಪ್ರಖ್ಯಾತಿ ಪಡೆದಿರುವ ಶಿವಾರಪಟ್ಟಣ ಗ್ರಾಮದಲ್ಲಿ ಶಿಲ್ಪ ಗ್ರಾಮ ಅಭಿವೃದ್ಧಿ ಯೋಜನೆಯಡಿ ₹ 75 ಲಕ್ಷ ತರಬೇತಿ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಆದರೆ ಕಾಮಗಾರಿ ಆರಂಭವಾಗಿ 8 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ಸುಮಾರು ದಿನಗಳಿಂದ ಕಾಮಗಾರಿ ಸ್ಥಗಿತಗೊಂಡಿರುವುದಿಂದ ಚಾವಣಿಗೆ ಜೋಡಿಸಿರುವ ಹೆಂಚುಗಳು ಬಿದ್ದು ಹೋಗಿವೆ. ಇದಕ್ಕೆ ಅಳವಡಿಸಿರುವ ಪಟ್ಟಿ ಮರಗಳು ಮಳೆಗೆ ನೆನೆದು, ಬಿಸಿಲಿಗೆ ಒಣಗಿ ಹಾಳಾಗಿವೆ. ಮಳೆಯ ನೀರಿಗೆ ಗೋಡೆಗಳು ಸವೆಯುತ್ತಿವೆ. ರಾತ್ರಿ ಹಗಲೆನ್ನದೆ ಮಧ್ಯವ್ಯಸನಿಗಳು ಮದ್ಯಪಾನ ಮಾಡುವ ತಾಣವನ್ನಾಗಿಸಿಕೊಂಡಿದ್ದಾರೆ.

ADVERTISEMENT

‘ಶಿವಾರಪಟ್ಟಣದ ಗ್ರಾಮದಲ್ಲಿ ವಿಶ್ವಕರ್ಮರು ಸೇರಿದಂತೆ ಇತರೆ ಸಮುದಾಯದವರು ಶಿಲ್ಪಿಗಳಾಗಿ ಕಾಯಕ ನಿರ್ವಹಿಸುತ್ತಿದ್ದಾರೆ. ಸರ್ಕಾರ ಅವರ ಅಭಿವೃದ್ಧಿಗೆ ಹಲವು ಯೋಜನೆ ರೂಪಿಸಿದ್ದು, ಕಾರ್ಯಗತಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಶಿಲ್ಪಿ ಚಂದ್ರಶೇಖರ್ ಆರೋಪಿಸಿದರು.

2 ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್‌ಚಂದ್ರ ಗ್ರಾಮಕ್ಕೆ ಭೇಟಿ ನೀಡಿ ಸ್ಥಗಿತಗೊಂಡಿರುವ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ಸಂಬಂಧಪಟ್ಟ ಅಧಿಕಾರಿಗಳ ಬಳಿ ಚರ್ಚಿಸಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದೆಂದು ಭರವಸೆ ಸಹ ನೀಡಿದ್ದರು. ಆದರೆ ಇಲ್ಲಿಯವರೆಗೂ ಕಾಮಗಾರಿ ಆರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿಲ್ಪಿಗಳು ಕತ್ತನೆ ಮಾಡಿರುವ ಶಿಲ್ಪಗಳನ್ನು ಇಡಲು ಸ್ಥಳವಿಲ್ಲದೆ ಎಲ್ಲಂದರಲ್ಲಿ ಇಡಬೇಕಾದ ಪರಿಸ್ಥಿತಿ ಎದುರಾಗಿದೆ. ಖರೀದಿದಾರರಿಗೆ ಪ್ರದರ್ಶಿಸಲು ಅವಕಾಶವಿಲ್ಲದೆ ಬಹಳ ತೊಂದರೆಯಾಗಿದೆ. ಇನ್ನಾದರೂ ಜಿಲ್ಲಾಡಳಿತ ಶಿಲ್ಪಿಗಳ ಕಷ್ಟಗಳಿಗೆ ಸ್ಪಂದಿಸಿ ನನೆಗುದಿಗೆ ಬಿದ್ದಿರುವ ಶಿಲ್ಪಕಲಾ ತರಬೇತಿ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಲು ಮುಂದಾಗಬೇಕು’ ಎಂದು ಎಸ್.ಎನ್.ಜಗನ್ನಾಥಚಾರಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.