ಕೋಲಾರ: ಕರ್ನಾಟಕ ನಾಗರಿಕರ ಸೇವೆಗಳ ಖಾತರಿ ಅಧಿನಿಯಮದಡಿ `ಸಕಾಲ `ಎಂಬ ಘೋಷಣೆಯೊಂದಿಗೆ ಪ್ರಾರಂಭವಾಗಿರುವ ವಿನೂತನ ಕಾರ್ಯಕ್ರಮದಲ್ಲಿ ಹನ್ನೊಂದು ಇಲಾಖೆಗಳ 150 ಸೇವೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಕೇಳುವ ಸೇವೆಗಳನ್ನು ಅಧಿಕಾರಿಗಳು ನಿಗದಿತ ಅವಧಿಯೊಳಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ ಸೂಚಿಸಿದ್ದಾರೆ.
ಏ.1ರಿಂದ ಜಿಲ್ಲೆಯಲ್ಲಿ ಕಾರ್ಯಕ್ರಮಪ್ರಾರಂಭಿಸಬೇಕಾಗಿರುವ ಹಿನ್ನೆಲೆಯಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಲು ನಗರದ ತಮ್ಮ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದ ಸೇವೆಗಳನ್ನು ಪಾರದರ್ಶಕವಾಗಿ ಕಟ್ಟಕಡೆಯ ಪ್ರಜೆಗೂ ನಿಗದಿತ ಕಾಲಮಿತಿಯಲ್ಲಿ ನೀಡುವ ವಿಶಿಷ್ಟ ಯೋಜನೆ ಇದು. ಸೇವೆಗಳನ್ನು ಕಾಲಮಿತಿಯಲ್ಲಿ ಪೂರೈಸಬೇಕು. ತಪ್ಪಿದಲ್ಲಿ, ತಡ ಮಾಡಿದ ದುರುದ್ದೇಶಕ್ಕಾಗಿ ನಿಗದಿತ ಅಧಿಕಾರಿಯು ಪ್ರತಿ ದಿನ 20 ರೂಪಾಯಿಯನ್ನು ದಂಡವಾಗಿ ಸೇವಾಕಾಂಕ್ಷಿಗೆ ನೀಡಬೇಕಾಗುತ್ತದೆ ಎಂದರು.
ದಂಡ ನೀಡಿ ತಪ್ಪಿಸಿಕೊಳ್ಳುವ ಪರಿಪಾಠವೂ ಶುರುವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದಂಡ ಪಾವತಿಸಿದ ಬಗ್ಗೆ ಆಯಾ ಅಧಿಕಾರಿಯ ಸೇವಾ ಪುಸ್ತಕದಲ್ಲಿ ಮಾಹಿತಿ ದಾಖಲಿಸಲಾಗುವುದು. ಅದರಿಂದ ಮುಂಬಡ್ತಿ ಸಂದರ್ಭದಲ್ಲಿಯೂ ಅದನ್ನು ಪರಿಗಣಿಸಲಾಗುವುದು. ಹೀಗಾಗಿ ಅಧಿಕಾರಿಗಳು ಎಚ್ಚರಿಕೆಯಿಂದ ಸೇವೆಯನ್ನು ನೀಡಬೇಕು ಎಂದು ಹೇಳಿದರು.
ಮಾಹಿತಿ ಹಕ್ಕು ಕಾಯ್ದೆಗಿಂತಲೂ ನಾಗರಿಕ ಸೇವೆಗಳ ಖಾತರಿ ಅಧಿನಿಯಮ 2011 ಬಹಳ ಪರಿಣಾಮಕಾರಿಯಾದದ್ದು.
ಇಲಾಖೆಗಳಲ್ಲಿ ನಿಗದಿಪಡಿಸಿದ ಅಧಿಕಾರಿಯು ಸೇವೆಗಳನ್ನು ಸಾರ್ವಜನಿಕರಿಗೆ ಕಾಲಮಿತಿಯಲ್ಲಿ ತಲುಪಿಸದೇ ಇದ್ದಾಗ ಅಂತಹ ಅಧಿಕಾರಿಯೇ ದಂಡ ಪಾವತಿಸಬೇಕಾಗುತ್ತದೆ. ಕೆಳಮಟ್ಟದ ಸಿಬ್ಬಂದಿಯವರಿಗೆ ಪ್ರತ್ಯೇಕವಾದ ಕಾಲವನ್ನು ನಿಗದಿತ ಅಧಿಕಾರಿ ನಿಗದಿಪಡಿಸಬೇಕು. ಆ ಮೂಲಕ ಸೇವೆಗಳನ್ನು ಸಾರ್ವಜನಿಕರಿಗೆ ನಿಗದಿತ ಕಾಲಮಿತಿಯಲ್ಲಿ ತಲುಪುವಂತೆ ಎಚ್ಚರಿಕೆ ವಹಿಸಬೇಕು ಎಂದರು.
ಕೆಲವು ಸೇವೆಗಳನ್ನು ನೀಡಲು ಕನಿಷ್ಠ ಏಳು ದಿನ, ಹಾಗೂ ಇನ್ನೂ ಕೆಲವು ಸೇವೆಗಳನ್ನು ಗರಿಷ್ಠ 45 ದಿನದ ಕಾಲಮಿತಿಯೊಳಗೆ ನೀಡಬೇಕು. ನಿಗದಿಪಡಿಸಿರುವ ಅವಧಿ ಮೀರಿದರೆ ನಿಗದಿತ ಅಧಿಕಾರಿಯಿಂದ ದಂಡ ಶುಲ್ಕ ವಸೂಲಿ ಮಾಡಲಾಗುವುದು ಎಂದರು.
ಇಲಾಖೆಗಳು: ಈಗಾಗಲೇ ರಾಜ್ಯದ ಐದು ತಾಲ್ಲೂಕುಗಳಲ್ಲಿ ಮಾ.1ರಿಂದ ಕಾರ್ಯಕ್ರಮ ಶುರುವಾಗಿದೆ. ಕೋಲಾರ ಜಿಲ್ಲೆಯಲ್ಲಿ ಏ1ರಿಂದ ಜಾರಿಯಾಗಲಿದೆ. ನಗರಾಭಿವೃದ್ಧಿ ಇಲಾಖೆ, ಸಾರಿಗೆ, ಆಹಾರ ಮತ್ತು ನಾಗರಿಕ ಸೇವಾ ಇಲಾಖೆ, ಕಂದಾಯ ಇಲಾಖೆ, ಗೃಹ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 150 ಸೇವೆಗಳು ನಾಗರಿಕ ಸೇವಾ ಖಾತರಿ ಅಧಿನಿಯಮದ ವ್ಯಾಪ್ತಿಗೊಳಪಟ್ಟಿವೆ ಎಂದು ವಿವರಿಸಿದರು.
ತರಬೇತಿ: ಕಾರ್ಯಕ್ರಮ ಜಾರಿ ಹಿನ್ನೆಲೆಯಲ್ಲಿ ಇದೇ ವಾರ ಅಧಿಕಾರಿಗಳಿಗೆ ಕಾರ್ಯಾಗಾರವನ್ನು ಏರ್ಪಡಿಸಿ ಅಧಿನಿಯಮದ ಬಗ್ಗೆ ಮಾಹಿತಿಯನ್ನು ನೀಡಲಾಗುವುದು. ಇಲಾಖೆಗಳು `ಸಕಾಲ~ ಎಂಬ ಸೂಚನಾ ಫಲಕಗಳನ್ನು ಕೂಡಲೆ ಸಿದ್ಧಪಡಿಸಬೇಕು. ಸೇವೆಗಳ ವಿವರ ಹಾಗೂ ನಿಗದಿಪಡಿಸಿರುವ ಕಾಲಮಿತಿ ಹಾಗೂ ನಿಗದಿತ ಅಧಿಕಾರಿಗಳ ಹುದ್ದೆಗಳ ಮಾಹಿತಿಯನ್ನು ಫಲಕದಲ್ಲಿ ಪ್ರದರ್ಶಿಸಬೇಕು ಎಂದರು.
ಅಧಿನಿಯಮದಲ್ಲಿ ನಿಗದಿತ ಅಧಿಕಾರಿ, ಸಕ್ಷಮ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರವನ್ನು ರಚಿಸಲಾಗಿದೆ. ನಿಗದಿತ ಅಧಿಕಾರಿಯಿಂದ ತೊಂದರೆಯಾದರೆ ಸಕ್ಷಮ ಅಧಿಕಾರಿಗೆ ದೂರು ನೀಡಬಹುದು. ಅಲ್ಲಿಯೂ ಅನ್ಯಾಯವಾದರೆ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು. ಯಾವುದೇ ಅಧಿಕಾರಿ ಈ ಅಧಿನಿಯಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮೀನಾ ಸ್ಪಷ್ಟಪಡಿಸಿದರು.
ಸೌಕರ್ಯ: ಹನ್ನೊಂದು ಇಲಾಖೆಗಳಿಗೆ ಪ್ರತ್ಯೇಕವಾದ ನಾಗರಿಕ ಸೇವೆಗಳ ಖಾತರಿ ಕೊಠಡಿ ತೆರೆಯಲು ಕಂಪ್ಯೂಟರ್, ಯು.ಪಿ.ಎಸ್. ಪೀಠೋಪಕರಣ ಸೌಕರ್ಯಗಳನ್ನು ನೀಡಲಾಗುವುದು ಎಂದರು. ಅಧಿನಿಯಮದ ಅಡಿ ಗ್ರಾಮ ಪಂಚಾಯಿತಿಗಳ ಪಿ.ಡಿ.ಓ.ಗಳ ಜವಾಬ್ದಾರಿಯು ಹೆಚ್ಚಾಗಿರುತ್ತದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಸೇವೆಗಳ ಖಾತರಿ ಅಧಿನಿಯಮಕ್ಕೆ ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ರಾಜೇಂದ್ರ ಚೋಳನ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಬಾಬಣ್ಣ, ಉಪವಿಭಾಗಾಧಿಕಾರಿ ಆರ್.ಎಸ್.ಪೆದ್ದಪ್ಪಯ್ಯ ಮತ್ತಿತರರು ಉಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.