ADVERTISEMENT

ಅಬಕಾರಿ ದಾಳಿ: ಕೊಳೆನಾಶ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 10:55 IST
Last Updated 27 ಜನವರಿ 2012, 10:55 IST

ಶ್ರೀನಿವಾಸಪುರ: ಇಲ್ಲಿನ ಅಬಕಾರಿ ಇಲಾಖೆಯ ಸಿಬ್ಬಂದಿ ಕರ್ನಾಟಕ ಆಂಧ್ರಪ್ರದೇಶದ ಗಡಿಯಲ್ಲಿನ ಅಪ್ಪಿನಾಯನಪಲ್ಲಿ ಗ್ರಾಮದ ಸಮೀಪ ದಾಳಿ ನಡೆಸಿ ಬಟ್ಟಿ ಸಾರಾಯಿ ತಯಾರಿಸಲು ಸಂಗ್ರಹಿಸಿ ಇಡಲಾಗಿದ್ದ 1900 ಲೀಟರ್ ಬೆಲ್ಲದ ಕೊಳೆಯನ್ನು ನಾಶಪಡಿಸಿದ್ದಾರೆ.

ಅಬಕಾರಿ ಸಿಬ್ಬಂದಿ ಕಟ್ಟೆಚ್ಚರದ ನಡುವೆಯೂ ಶ್ರೀನಿವಾಸಪುರದಲ್ಲಿ ಕಳ್ಳಬಟ್ಟಿ ಸಾರಾಯಿ ಕಂಡುಬಂದಿತ್ತು.

ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ಆಂಧ್ರಪ್ರದೇಶದ ಗಡಿಯಿಂದ ಅಕ್ರಮವಾಗಿ ಬಟ್ಟಿ ಸಾರಾಯಿ ಸಾಗಿಸುತ್ತಿದ್ದುದು ಪತ್ತೆಯಾಯಿತು. ಬುಧವಾರ ಜಿಲ್ಲಾ ಅಬಕಾರಿ ಸಿಬ್ಬಂದಿ, ಉಪ ಅಧೀಕ್ಷರಾದ ಕೆ.ಕೆ.ಸುಮಿತ ಅವರ ನೇತೃತ್ವದಲ್ಲಿ ಆಂಧ್ರಪ್ರದೇಶದ ಮದನಪಲ್ಲಿ ಅಬಕಾರಿ ಸಿಬ್ಬಂದಿಯೊಂದಿಗೆ ಆಂಧ್ರದ ಗಡಿ ಗ್ರಾಮಗಳಾದ ಅಪ್ಪಿನಾಯನಪಲ್ಲಿ, ಓಬಿಶೆಟ್ಟಿಪಲ್ಲಿ, ಮಟುಕು, ಪುಲಸುಮಾನಿಪೆಂಟ, ಮತ್ತಿತರ ಕಡೆಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ 1,900 ಲೀಟರ್ ಕೊಳೆಯನ್ನು ಪತ್ತೆಹಚ್ಚಿ ನಾಶಪಡಿಸಲಾಯಿತು ಎಂದು ತಾಲ್ಲೂಕು ಅಬಕಾರಿ ಇನ್ಸ್‌ಪೆಕ್ಟರ್ ಜಿ.ಸತೀಶ್ ಗುರುವಾರ `ಪ್ರಜಾವಾಣಿ~ಗೆ ತಿಳಿಸಿದರು.

ತಾಲ್ಲೂಕು ಅಬಕಾರಿ ಇನ್ಸ್‌ಪೆಕ್ಟರ್ ಜಿ. ಸತೀಶ್, ಲಾಟರಿ ನಿಷೇಧ ದಳದ ಸಬ್ ಇನ್ಸ್‌ಪೆಕ್ಟರ್ ಮೋಹನ್ ಕುಮಾರ್, ಜಿಲ್ಲಾ ಅಬಕಾರಿ ಇಲಾಖೆಯ ವಿಚಕ್ಷಣ ದಳದ ಎಂ.ನಟರಾಜ್, ಕೋಲಾರ ಅಬಕಾರಿ ನಿರೀಕ್ಷಕ ಮರೆಪ್ಪ ನಾಟೀಕಾರ್, ಅಬಕಾರಿ ಎಸ್‌ಐ ಕೆ.ವಿ.ಶ್ರೀನಿವಾಸ್, ಸಿಬ್ಬಂದಿ ಕಿಟ್ಟಪ್ಪ, ಲಕ್ಷ್ಮೀಪತಿ, ವಿಶ್ವನಾಥ್, ಶಿವಪ್ಪ, ಮಹೇಶ್, ಹೆಂಜಾರಪ್ಪ ಮತ್ತಿತರರು ಧಾಳಿಯಲ್ಲಿ ಭಾಗವಹಿಸಿದ್ದರು.

ಇನ್ನೊಂದು ಪ್ರಕರಣದಲ್ಲಿ ದೊರೆತ ಖಚಿತ ಸುಳಿವಿನ ಮೇರೆಗೆ ತಾಲ್ಲೂಕಿನ ರೋಜೇನಹಳ್ಳಿ ಕ್ರಾಸ್ ಸಮೀಪ ದಾಳಿ ನಡೆಸಿ ನಕಲಿ ಮಧ್ಯ ತಯಾರಿಸುತ್ತಿದ್ದರು ಎನ್ನಲಾದ ವೆಂಕಟರವಣಪ್ಪ ಎಂಬುವವರನ್ನು ಬಂಧಿಸಿ ಅವರಿಂದ ನಕಲಿ ಮದ್ಯ ತಯಾರಿಸಲು ಸಂಗ್ರಹಿಸಿ ಇಡಲಾಗಿದ್ದ ನಕಲಿ ಮದ್ಯದ ಸೀಸೆಗಳು, ನಕಲಿ ಲೇಬಲ್‌ಗಳು, ವಿವಿಧ ಬ್ರಾಂಡ್‌ನ 2600 ನಕಲಿ ಬಿರುಡೆಗಳು ಹಾಗೂ 10 ನಕಲಿ ಮದ್ಯದ ಸೀಸೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಾಲ್ಲೂಕಿನ ಕೂರಿಗೇಪಲ್ಲಿ ಗ್ರಾಮದಲ್ಲಿ ಆಂಧ್ರದಿಂದ ತಂದಿದ್ದ ಬಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಆಪಾದನೆ ಮೇಲೆ ನಾರೆಪ್ಪ ಎಂಬುವವನನ್ನು ಬಂಧಿಸಿ 5 ಲೀಟರ್ ಕಳ್ಳಬಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳನ್ನೂ ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.