ADVERTISEMENT

ಕನ್ನಡಕ್ಕೆ ಡಿಜಿಟಲ್ ನವೋದಯ ಅಗತ್ಯ: ಡಾ.ನಂಗಲಿ

ಮುಳಬಾಗಲು ತಾಲ್ಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 8:34 IST
Last Updated 13 ಜೂನ್ 2013, 8:34 IST
ಮುಳಬಾಗಲು ನೇತಾಜಿ ಕ್ರೀಡಾಂಗಣದ ಉತ್ತನೂರು ರಾಜಮ್ಮ ವೇದಿಕೆಯಲ್ಲಿ ಬುಧವಾರ ತಾಲ್ಲೂಕು ಮಟ್ಟದ ಎರಡನೇ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾಧಿಕಾರಿ ಡಾ.ವಿಶ್ವನಾಥ್ ಉದ್ಫಾಟಿಸಿದರು. ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಗನ್ನಾಥ್, ಜಿಲ್ಲಾ ಪ್ರತಿನಿಧಿ ಆರ್.ಎಸ್.ಕೃಷ್ಣಯ್ಯಶೆಟ್ಟಿ, ತಹಶೀಲ್ದಾರ್ ಡಿ.ವಿ.ರಾಮಮೂರ್ತಿ, ಕವಿ ಜರಗನಹಳ್ಳಿ ಶಿವಶಂಕರ್, ಸಮ್ಮೇಳನದ ಅಧ್ಯಕ್ಷ ಎಚ್.ಎ.ಪುರುಷೋತ್ತಮರಾವ್, ಅವರ ಪತ್ನಿ ಧನಲಕ್ಷ್ಮೀ, ನಿಕಟಪೂರ್ವ ಅಧ್ಯಕ್ಷ ಕೆ.ಆರ್.ನರಸಿಂಹನ್, ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜೆ.ನಾಗರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಜಿ.ಶಿವಪ್ಪ ಇದ್ದಾರೆ
ಮುಳಬಾಗಲು ನೇತಾಜಿ ಕ್ರೀಡಾಂಗಣದ ಉತ್ತನೂರು ರಾಜಮ್ಮ ವೇದಿಕೆಯಲ್ಲಿ ಬುಧವಾರ ತಾಲ್ಲೂಕು ಮಟ್ಟದ ಎರಡನೇ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾಧಿಕಾರಿ ಡಾ.ವಿಶ್ವನಾಥ್ ಉದ್ಫಾಟಿಸಿದರು. ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಗನ್ನಾಥ್, ಜಿಲ್ಲಾ ಪ್ರತಿನಿಧಿ ಆರ್.ಎಸ್.ಕೃಷ್ಣಯ್ಯಶೆಟ್ಟಿ, ತಹಶೀಲ್ದಾರ್ ಡಿ.ವಿ.ರಾಮಮೂರ್ತಿ, ಕವಿ ಜರಗನಹಳ್ಳಿ ಶಿವಶಂಕರ್, ಸಮ್ಮೇಳನದ ಅಧ್ಯಕ್ಷ ಎಚ್.ಎ.ಪುರುಷೋತ್ತಮರಾವ್, ಅವರ ಪತ್ನಿ ಧನಲಕ್ಷ್ಮೀ, ನಿಕಟಪೂರ್ವ ಅಧ್ಯಕ್ಷ ಕೆ.ಆರ್.ನರಸಿಂಹನ್, ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜೆ.ನಾಗರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಜಿ.ಶಿವಪ್ಪ ಇದ್ದಾರೆ   

ಉತ್ತನೂರು ರಾಜಮ್ಮ ವೇದಿಕೆ (ಮುಳಬಾಗಲು): ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಭಾಷೆಗೆ ಡಿಜಿಟಲ್ ನವೋದಯ ಖಂಡಿತವಾಗಿ ಬೇಕಿದೆ. ಕನ್ನಡದ ಮಂದಿ ಸಿನಿಮಾ ಡಬ್ಬಿಂಗ್ ಅನ್ನು ವಿರೋಧಿಸದೆ ಡಿಜಿಟಲ್ ವ್ಯವಸ್ಥೆಗೆ ತೆರೆದುಕೊಳ್ಳಬೇಕಿದೆ ಎಂದು ವಿಮರ್ಶಕ ಡಾ.ಚಂದ್ರಶೇಖರ ನಂಗಲಿ ಪ್ರತಿಪಾದಿಸಿದರು.

ಪಟ್ಟಣದ ನೇತಾಜಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ತಾಲ್ಲೂಕು ಮಟ್ಟದ ಎರಡನೇ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನದ ಎಲ್ಲ ಸಾಧ್ಯತೆಗಳನ್ನು ಕನ್ನಡವು ಬಳಸಿಕೊಂಡು ಇತರೆ ಭಾಷೆಗಳ ಜತೆಗೆ ಬೆಳೆಯಬೇಕಾದ ಸನ್ನಿವೇಶವನ್ನು ಒಪ್ಪಿಕೊಳ್ಳಲೇಬೇಕು ಎಂದರು.

ಇಂಗ್ಲಿಷ್, ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳ ನಡುವೆ ಒಪ್ಪಂದ ಏರ್ಪಟ್ಟಿದ್ದು, 50ರ ದಶಕದ ಶ್ರೇಷ್ಠ ಹಾಲಿವುಡ್ ಚಿತ್ರಗಳೆಲ್ಲ ಮೂರೂ ಭಾಷೆಗಳಿಗೆ ಡಬ್ಬಿಂಗ್ ಆಗಿವೆ. ಪರಸ್ಪರ ಭಾಷೆಗಳ ಸಿನಿಮಾಗಳೂ ಡಬ್ಬಿಂಗ್ ಆಗಿವೆ. ನಾಲ್ಕು ಭಾಷೆಗಳ ನಡುವೆ ಇಂಟರ್‌ಕಾಮ್ (ಆಂತರಿಕ ಸಂವಹನ) ವ್ಯವಸ್ಥೆ ರೂಪುಗೊಂಡಿದೆ. ಕನ್ನಡವೂ ಆ ವ್ಯವಸ್ಥೆಯ ಭಾಗವಾಗಬೇಕಿದೆ ಎಂದರು.

ಡಬ್ಬಿಂಗ್ ಅಲ್ಲದೆ, ಮೂಲ ಸಿನಿಮಾಗಳನ್ನು ಸ್ಥಳೀಯ ಭಾಷೆಯ ಸಬ್‌ಟೈಟಲ್‌ಗಳೊಡನೆ (ಉಪಶೀರ್ಷಿಕೆ) ಪ್ರದರ್ಶಿಸುವ ನಿದರ್ಶನಗಳೂ ಇವೆ. ಇಂಥ ಸಂದರ್ಭ ಕನ್ನಡವೂ ಹೆಚ್ಚು ಸಂವಹನ ಶೀಲವಾಗಬೇಕಾದರೆ ಡಿಜಿಟಲ್ ಸಂವಹನಕ್ಕೆ ತೆರೆದುಕೊಳ್ಳಬೇಕಿದೆ ಎಂದು ಹೇಳಿದರು.

ಭೂಮಿ ತಾಯಿಯ ತತ್ವ ಅರಿತು ನೈಸರ್ಗಿಕ ಸಂಪನ್ಮೂಲಗಳ ದರೋಡೆ ತಡೆಯಬೇಕಿದೆ. ಆಗ ಉಳಿಯುವುದು ಭೂಮಿ ಮಾತ್ರವಲ್ಲದೆ ಜನಗಳೂ ಉಳಿಯುತ್ತಾರೆ. ಈ ಹಿನ್ನೆಲೆಯಲ್ಲಿ ಸಮ್ಮೇಳನದಲ್ಲಿ ಭೂಮಿ ತಾಯಿಯ ತತ್ವದ ಕುರಿತು ಗೋಷ್ಠಿ ಏರ್ಪಡಿಸಿರುವುದು ವಿಶೇಷ. ಇಂಥ ಗೋಷ್ಠಿಯನ್ನು ಇದುವರೆಗೂ ಯಾವುದೇ ವಿಶ್ವವಿದ್ಯಾಲಯ, ಅಕಾಡೆಮಿ ಮತ್ತು ಸಾಹಿತ್ಯ ಪರಿಷರ್ ಏರ್ಪಡಿಸಿರುವ ನಿದರ್ಶನವೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ಸಮ್ಮೇಳನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಯಾವುದೇ ಭಾಷೆ, ಸಾಹಿತ್ಯ ಉಳಿಯಬೇಕಾದರೆ ಸ್ಥಳೀಯ ಸಮುದಾಯ ಅದನ್ನು ಹೃದಯದಿಂದ ಪರಿಭಾವಿಸಬೇಕು. ಕನ್ನಡವನ್ನು ಉಳಿಸಬೇಕು ಎನ್ನುವ ಕನ್ನಡಿಗರು ಭಾಷೆ, ಸಾಹಿತ್ಯವನ್ನು ಹೃದಯದಲ್ಲಿಟ್ಟು ಪರಿಭಾವಿಸಿದರೆ ಮಾತ್ರ ಉಳಿಸಲು ಸಾಧ್ಯ. ಕನ್ನಡಿಗರ ಹೃದಯದಲ್ಲೇ ಅವು ಇಲ್ಲದೇ ಹೋದರೆ ಬೇರೆ ಯಾರೂ ಉಳಿಸಲು ಸಾಧ್ಯವಿಲ್ಲ ಎಂದರು.

ಭಾಷೆ, ಸಂಸ್ಕೃತಿಗೆ ಸಂಬಂಧಿಸಿ ಡಿವಿಜಿ ಅವರ ಚಿಂತನೆಉಲ್ಲೇಖಿಸಿದ ಅವರು, ಇತರೆ ಭಾಷೆಗಳ ಜತೆಗೆ ಕನ್ನಡವೂ ಬೆಳೆಯಬೇಕಾದ್ದು ಅಗತ್ಯ. ಕನ್ನಡಕ್ಕೆ ಸಂಸ್ಕೃತದ ರೀತಿಯಲ್ಲೇ ಇಂಗ್ಲಿಷ್ ಕೂಡ ಅಗತ್ಯ ಪರಿಕರವಾಗಬೇಕು. ಏಕೆಂದರೆ ಭಾಷೆ ಮತ್ತು ಸಾಹಿತ್ಯ ತಂತಾನೆ ಬೆಳೆಯಲು ಅಸಾಧ್ಯ ಎಂದರು.

ಕೃತಿ ಬಿಡುಗಡೆ: ಮಂಜುಕನ್ನಿಕಾ ಅವರ ಪವರ್. ಮಾನಸಪುತ್ರಿ, ತಾರೆಗಳ ತೋಟದಲ್ಲಿ ಚಂದಿರ. ಇ.ಶ್ರೀನಿವಾಸಗೌಡರ ರಾಷ್ಟ್ರೀಯ ಭಾವೈಕ್ಯತೆ, ಮನೆ ಅಂಗಳದ ಆಟಗಳು ಮತ್ತು ರಾಜೇಶ್ವರಿ ಅವರ ಕಿನ್ನರಿ ಕೃತಿಗಳನ್ನು ಕವಿ ಜರಗನಹಳ್ಳಿ ಶಿವಶಂಕರ್ ಬಿಡುಗಡೆ ಮಾಡಿದರು. ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜೆ.ನಾಗರಾಜ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಜಿ.ಶಿವಪ್ಪ ಆಶಯ ಭಾಷಣ ಮಾಡಿದರು.

ಸಮ್ಮೇಳನದ ಅಧ್ಯಕ್ಷ ಎಚ್.ಎ.ಪುರುಷೋತ್ತಮರಾವ್, ನಿಕಟ ಪೂರ್ವ ಅಧ್ಯಕ್ಷ ಕೆ.ಆರ್.ನರಸಿಂಹನ್, ಪರಿಷತ್‌ನ ಜಿಲ್ಲಾ ಪ್ರತಿನಿಧಿ ಆರ್.ಎಸ್.ಕೃಷ್ಣಯ್ಯಶೆಟ್ಟಿ, ಶಂಕರ್ ಕೇಸರಿ, ತಹಶೀಲ್ದಾರ್ ಡಿ.ವಿ.ರಾಮಮೂರ್ತಿ, ಕನ್ನಡಭಟ ವೆಂಕಟಪ್ಪ, ಯು.ವಿ.ನಾರಾಯಣಾಚಾರ್, ತಾಯಲೂರು ಗೋಪಿನಾಥ್, ಕನ್ನಡ ಮಿತ್ರ ವೆಂಕಟಪ್ಪ, ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಗನ್ನಾಥ್ ಉಪಸ್ಥಿತರಿದ್ದರು.

ನಾಕೇ ಲೇದು ಗೋರೇ ಬೆಲ್ಲಮು..
ನಾಕೇ ಲೇದು ಗೋರೇ ಬೆಲ್ಲಮು, ನೀಕ್ಯಾಡ ತೆಸ್ತುನು ನ್ಯಾಕೆ ಬೆಲ್ಲ (ನನಗೇ ಇಲ್ಲ ಗೋರುವ ಬೆಲ್ಲ, ನಿಂಗೆಲ್ಲಿ ತರಲಿ ನಾಕುವ ಬೆಲ್ಲ?)
ಗಡಿ ತಾಲ್ಲೂಕಾದ ಮುಳಬಾಗಲಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ತೆಲುಗಿನ ಈ ಮಾತು ಗಮನ ಸೆಳೆಯಿತು.

ಸಮ್ಮೇಳನದ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ವಿಮರ್ಶಕ ಡಾ.ಚಂದ್ರಶೇಖರ ನಂಗಲಿ, ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸುಪ್ರೀಂಕೋರ್ಟ್ ನಿರ್ದೇಶನ ಉಲ್ಲೇಖಿಸಿ, ಕರ್ನಾಟಕದ ಬರಗೆಟ್ಟ ಸ್ಥಿತಿಯನ್ನು ಸಮರ್ಥವಾಗಿ ಕೋರ್ಟಿಗೆ ವಿವರಿಸಬೇಕು ಎಂದರು.

ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗುವುದಿಲ್ಲ ಎನ್ನುವ ಮುಖ್ಯಮಂತ್ರಿ ರಾಜ್ಯದಲ್ಲಿನ ನೀರಿನ ಕೊರತೆಯ ಕುರಿತು ಪರಿಣಾಮಕಾರಿಯಾಗಿ ಗಮನ ಸೆಳೆಯಬೇಕು. ಕೆರೆ, ಕುಂಟೆಗಳು ತುಂಬಿ ತುಳುಕುತ್ತಿದ್ದ ಕಾಲದಲ್ಲಿ ತಮಿಳುನಾಡಿಗೆ ನೀರು ಹರಿಸುವುದಕ್ಕೂ, ಈಗಿನ ಬರ ಪರಿಸ್ಥಿತಿಯಲ್ಲೂ ನೀರು ಹರಿಸಬೇಕು ಎನ್ನುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದರು. ಆ ಸಂದರ್ಭದಲ್ಲಿ ಅವರು ತೆಲುಗಿನ ನಾಣ್ಣುಡಿಯನ್ನು ಉಲ್ಲೇಖಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT