ಕೆಜಿಎಫ್: ಉದ್ಧೇಶಿತ ಕೆಜಿಎಫ್ ತಾಲ್ಲೂಕು ರಚನೆಯನ್ನು ಸರ್ಕಾರ ಘೋಷಣೆ ಮಾಡಿ ಐದು ತಿಂಗಳಾದರೂ ಇದುವರೆಗೂ ಕಾರ್ಯಗತಗೊಳಿಸಿಲ್ಲ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಶನಿವಾರ ನಗರದಲ್ಲಿ ಮೆರವಣಿಗೆ ನಡೆಸಿದರು.
ನಗರಸಭೆ ಮುಂಭಾಗದಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಹಾದು, ನಾಡಕಚೇರಿ ಮುಂಭಾಗದಲ್ಲಿ ಕೊನೆಗೊಂಡಿತು. ಹೊಸ ತಾಲ್ಲೂಕು ರಚನೆ ಶೀಘ್ರದಲ್ಲಿಯೇ ಆಗಬೇಕು ಎಂದು ಘೋಷಣೆ ಕೂಗಲಾಯಿತು.
ನಾಡಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದ ಮುಖಂಡ ಎಂ.ಭಕ್ತವತ್ಸಲಂ, ‘ಕೆಜಿಎಫ್ ತಾಲ್ಲೂಕು ರಚನೆಗೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಚಾಲನೆ ನೀಡಿದ್ದರು. ಕಾರಣಾಂತರಗಳಿಂದ ಅದು ನೆನೆಗುದಿಗೆ ಬಿದ್ದಿತು. ಹೋರಾಟದ ಅಂಗವಾಗಿ ಈಗ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ ತಾಲ್ಲೂಕು ರಚನೆ ಅಂಗವಾಗಿ ಇದುವರೆವಿಗೂ ಯಾವುದೇ ಪ್ರಕ್ರಿಯೆಗಳು ನಡೆಯುತ್ತಿಲ್ಲ’ ಎಂದು ಆರೋಪಿಸಿದರು.
‘ಕೆಜಿಎಫ್ ತಾಲ್ಲೂಕು ರಚನೆ ಸಂದರ್ಭದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅನಗತ್ಯ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಸಂಸದ ಕೆ.ಎಚ್.ಮುನಿಯಪ್ಪರವರ ಪ್ರಭಾವ ಬಳಸಿಕೊಂಡು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ, ಕೆಜಿಎಫ್ ಗೆ ಸೇರುವ ಹೋಬಳಿಗಳು ಮತ್ತು ಕಂದಾಯ ಗ್ರಾಮಗಳನ್ನು ಬಂಗಾರಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸುವ ಹುನ್ನಾರ ನಡೆಸಿದ್ದಾರೆ’ ಎಂದು ದೂರಿದರು.
‘ದೊಡ್ಡೂರು ಕರಪನಹಳ್ಳಿ ಮತ್ತು ರಾಬರ್ಟಸನ್ಪೇಟೆ ಹೋಬಳಿಗಳನ್ನು ಕೆಜಿಎಫ್ ಕ್ಷೇತ್ರದಲ್ಲಿಯೇ ಉಳಿಸಿಕೊಳ್ಳಬೇಕು. ಘಟ್ಟಕಾಮಧೇನಹಳ್ಳಿ ಸೇರಿದಂತೆ ಕೆಜಿಎಫ್ ನಗರಕ್ಕೆ ಹತ್ತಿರ ಇರುವ ಮತ್ತು ರಾಬರ್ಟಸನ್ಪೇಟೆ ಹೋಬಳಿಗೆ ಸೇರುವ ಎಲ್ಲ ಗ್ರಾಮಗಳನ್ನು ಕೂಡ ಕೆಜಿಎಫ್ ತಾಲ್ಲೂಕಿನಲ್ಲಿಯೇ ಇರಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು. ಮುಖಂಡರಾದ ದಯಾನಂದ, ಕುಮಾರ್, ಕಲೈಸೆಲ್ವಿ, ನಾಮದೇವನ್, ಪ್ರಕಾಶ್, ಮುರುಗನ್, ಗಣೇಶನ್, ಜಾನ್ಸನ್, ಲಕ್ಷ್ಮೀಕಾಂತ್ ಮೋಹನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.