ADVERTISEMENT

ಕೆರೆ ಕಾಮಗಾರಿ ಗುಣಮಟ್ಟಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 9:35 IST
Last Updated 7 ಫೆಬ್ರುವರಿ 2011, 9:35 IST

ಕೋಲಾರ: ‘ಕಾಮಗಾರಿಗಳು ನಡೆದಿರುವ ಬಗ್ಗೆ ಅಳತೆ ಮಾಡಿ ಅಳತೆ ಪುಸ್ತಕದಲ್ಲಿ ದಾಖಲಿಸಬೇಕು. ಕಾಮಗಾರಿಯ ಗುಣಮಟ್ಟವನ್ನು ಪರೀಕ್ಷಿಸಿ ವರದಿಗಳನ್ನು ಸಲ್ಲಿಸಬೇಕು ಎಂದು ಜಲ ಸಂವರ್ಧನೆ ಯೋಜನಾ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಪುನಟಿ ಶ್ರೀಧರ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಸಂಘವು ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆಯಡಿ ಕೈಗೆತ್ತಿಕೊಂಡಿರುವ ವಿವಿಧ ಕೆರೆ ಕಾಮಗಾರಿಗಳನ್ನು ಇತ್ತೀಚೆಗೆ ಪರಿಶೀಲಿಸಿ ಅವರು ಮಾತನಾಡಿದರು.

ಹಳ್ಳಿಗಳತ್ತ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಬಂದಾಗ ವರ್ಗ, ಗುಂಪು, ರಾಜಕೀಯ ಮಾಡಿಕೊಂಡು ಯೋಜನೆಗಳನ್ನು ಕುಂಠಿತಗೊಳಿಸಬಾರದು ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.ಯಾವುದೇ ಗ್ರಾಮದ ಕೆರೆಯಲ್ಲಿ ಕೆಲಸ ನಡೆದರೂ, ಕೆಲಸದಲ್ಲಿನ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಅಲ್ಲಿನ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ಜವಾಬ್ದಾರಿಯೂ ಹೆಚ್ಚಿದೆ. ಆಗಿಂದಾಗ್ಗೆ ಕೆರೆಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.

ಯೋಜನೆಯ ವತಿಯಿಂದ ಆಯ್ಕೆಮಾಡಿಕೊಂಡಿರುವ 66 ಕೆರೆಗಳ ಪೈಕಿ ಕಾಮಗಾರಿ ಪ್ರಗತಿಯಲ್ಲಿರುವ ಬಂಗವಾದಿಯ ದೊಡ್ಡಕೆರೆ, ಜೆ.ತಿಮ್ಮಸಂದ್ರ ಗ್ರಾಮದ ದೊಡ್ಡಕೆರೆ ಹಾಗೂ ಟಿ. ಕಂತಂಪಲ್ಲಿ ಗ್ರಾಮದ ಪಿಲ್ಲೋಜಿರಾವ್‌ಕೆರೆಗೆ ಅವರು ಭೇಟಿ ನೀಡಿದರು. ಅಲ್ಲಿನ ಹೂಳೆತ್ತುವ ಕಾಮಗಾರಿ, ಗಡಿ ಕಂದಕ ನಿರ್ಮಿಸುವ ಕಾಮಗಾರಿ, ರಾಜ ಕಾಲುವೆಗೆ ಚಪ್ಪಡಿ ಅಳವಡಿಸುವ ಕಾಮಗಾರಿಗಳನ್ನು ಪರಿಶೀಲಿಸಿದರು.

ಅದಕ್ಕೂ ಮುನ್ನ ಸಂಘದ ಜಿಲ್ಲಾ ಯೋಜನಾ ಘಟಕದ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಯೋಜನೆಯು ಕಾಲುಮಿತಿಯಿಂದ  ಕೂಡಿರುವುದರಿಂದ ಆದಷ್ಟು ಶೀಘ್ರವಾಗಿ ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು. ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ .ಎ. ಅಶ್ವಥಯ್ಯ ಜಿಲ್ಲೆಯ ಪ್ರಗತಿ ವರದಿಯನ್ನು ಮಂಡಿಸಿದರು.
ಕಾರ್ಯಪಾಲಕ ಎಂಜಿನಿಯರ್ .ಕೆ.ವಿ.ರಾಮಚಂದ್ರರೆಡ್ಡಿ, ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಕೆ.ಜಿ.ಸತ್ಯನಾರಾಯಣಶೆಟ್ಟಿ, ಕೆ.ಎಸ್.ರಾಮಕೃಷ್ಣರೆಡ್ಡಿ ಉಪಸ್ಥಿತರಿದ್ದರು.

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.