ADVERTISEMENT

ಕೋಲಾರ: ಬಂದೂಕಿಗಾಗಿ 2 ಸಾವಿರ ಅರ್ಜಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 5:27 IST
Last Updated 18 ಸೆಪ್ಟೆಂಬರ್ 2013, 5:27 IST

ಕೋಲಾರ: ಬರಗಾಲ ಪೀಡಿತ ಜಿಲ್ಲೆಯಲ್ಲಿ ಬಂದೂಕಿಗಾಗಿ 2 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಒಂಟಿ ಮನೆ ಇರುವುದು ಮತ್ತು ಕಾಡಿನ ಪ್ರದೇಶದಲ್ಲಿರುವುದು ಬಹು­ತೇಕರು ನೀಡಿರುವ ಪ್ರಮುಖ ಕಾರಣ­ಗಳು. ಆ ಪೈಕಿ ಜೀವಕ್ಕೆ ನಿಜವಾಗಲೂ ಆಪತ್ತು ಇರು­ವವರೆಷ್ಟು ಮಂದಿ ಎಂದು ಅಂದಾಜಿ­ಸುವುದು ಜಿಲ್ಲಾಡಳಿತಕ್ಕೆ ಸವಾಲಿನ ವಿಷಯ­. ಅದರ ಜೊತೆಗೆ, ಬಂದೂಕಿ­ಗಾಗಿ ಕೋರಿಕೆ ಸಲ್ಲಿಸಿ ಜಿಲ್ಲಾಧಿ­ಕಾರಿ ಕಚೇ­ರಿಗೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಪ್ರತಿ ವರ್ಷವೂ ಪೊಲೀಸ್‌ ಇಲಾಖೆ ಸಾರ್ವಜನಿಕರಿಗಾಗಿ ಬಂದೂಕು ಬಳಸುವ ಕುರಿತು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳುತ್ತದೆ. ಈ ಶಿಬಿರಗಳಲ್ಲಿ ಪಾಲ್ಗೊಂಡವರಿಗೆ ಬಂದೂಕು ನೀಡುವ ವಿಷಯದಲ್ಲಿ ಆದ್ಯತೆ ನೀಡಲಾಗುತ್ತದೆ. ಆದರೆ ಅರ್ಜಿ ಸಲ್ಲಿಸಿದವರಲ್ಲಿ ಬಹಳ ಮಂದಿ ಈ ತರಬೇತಿಯನ್ನು ಪಡೆದಿಲ್ಲ.

ಅರ್ಜಿ ಸಲ್ಲಿಕೆ ಹೇಗೆ?: ಬಂದೂಕು ಪರವಾನಗಿಯನ್ನು ಕೊಡಲು ಜಿಲ್ಲಾಧಿ­ಕಾರಿಗೆ ಮಾತ್ರ ಅಧಿಕಾರವಿದೆ. ಬಂದೂಕು ಹೊಂದಲು ಪರವಾನಗಿ ಪಡೆಯ­ಬೇಕೆನ್ನುವವರು ಮೊದಲು ಅವ­ರಿಗೆ ಅರ್ಜಿ ಸಲ್ಲಿಸಬೇಕು.

ಅವರು ಅದನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ರವಾನಿಸಿ ಪರ­ವಾನಗಿ ಅಗತ್ಯವಿರುವ ಕುರಿತು ಪರಿ­ಶೀಲಿಸಲು ಸೂಚಿಸುತ್ತಾರೆ. ಅರ್ಜಿಗಳು ನಂತರ ಸಂಬಂಧಿಸಿದ ಠಾಣೆಗಳಿಗೆ ರವಾನೆ­ಯಾಗುತ್ತವೆ. ಅಲ್ಲಿನ ಸಿಬ್ಬಂದಿಯು ಅರ್ಜಿದಾರರ ಸಾಮಾಜಿಕ ಅಂತಸ್ತು, ವೃತ್ತಿ, ಸಮುದಾಯದೊಡನೆ ಅವರ ವ್ಯವಹಾರ ಮೊದಲಾದ ವಿಷಯಗಳನ್ನು ಗಮನಿಸಿ ಅವರಿಗೆ ಆಪತ್ತು ಇದೆಯೇ ಎಂಬುದನ್ನೂ ಗಮನಿ­ಸುತ್ತಾರೆ. ಆ ಬಳಿಕ ಸೂಕ್ತವೆನಿಸಿದರೆ ಮಾತ್ರ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿ ಅರ್ಜಿಗಳನ್ನು ರವಾನಿಸುತ್ತಾರೆ. ನಂತರ ಜಿಲ್ಲಾಧಿಕಾರಿಗಳು ತಮ್ಮ ವಿವೇಚ­ನಾ­ಧಿಕಾರ ಬಳಸಿ ಪರವಾನಗಿಯನ್ನು ಮಂಜೂರು ಮಾಡುತ್ತಾರೆ.

ಆ ನಂತರ ಪೊಲೀಸ್‌ ಇಲಾಖೆಯ ವತಿಯಿಂದ ಬಂದೂಕನ್ನು ನೀಡಲಾಗು­ತ್ತದೆ. ಕಾಲಕಾಲಕ್ಕೆ ಬಂದೂಕು ಪರ­ವಾನಗಿು ನವೀಕರಿಸುವುದು ಕಡ್ಡಾಯ.

2 ಸಾವಿರ ಅರ್ಜಿ: ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ಮುಂದೆ ಈಗ 2 ಸಾವಿರ ಅರ್ಜಿಗಳಿವೆ. ಅವುಗಳ ಪೈಕಿ ಅರಣ್ಯ ಪ್ರದೇಶದ ಅಂಚಿನಲ್ಲಿ ಇರು­ವವರು ಮತ್ತು ಒಂಟಿ ಮನೆಗಳಲಿ್ಲ ಇರುವವರ ಅರ್ಜಿಗಳೇ ಹೆಚ್ಚು ಇವೆ.

ಅರಣ್ಯಪ್ರದೇಶದ ಅಂಚಿನಲ್ಲಿರುವವರ ಕ್ಷೇಮವನ್ನು ಅರಣ್ಯ ಇಲಾಖೆ ನೋಡಿ­ಕೊಳ್ಳಬೇಕು. ಒಂಟಿ ಮನೆಗಳ ಕ್ಷೇಮ­ವನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಸನ್ನಿವೇಶ ಹೀಗಿರುವಾಗ ಬಂದೂಕಿನ ಅಗತ್ಯವೇನು ಎಂಬುದು ಅವರ ಪ್ರಶ್ನೆ.

ಸಾರ್ವಜನಿಕರೇ ಬಂದೂಕು ಬೇಕು ಎಂದು ಕೇಳಿದರೆ, ಅರಣ್ಯ ಮತ್ತು ಪೊಲೀಸ್‌ ಇಲಾಖೆ ಹೇಗೆ ಕೆಲಸ ಮಾಡು­ತ್ತಿದೆ ಎಂಬುದನ್ನು ಗಂಭೀರವಾಗಿ ಪರಿ­ಶೀಲಿಸಬೇಕಾಗುತ್ತದೆ. ಈ ಎರಡೂ ಇಲಾಖೆಗಳು ಸಮರ್ಪಕವಾಗಿ ಕೆಲಸ ಮಾಡಿದರೆ ಸಾರ್ವಜನಿಕರಿಂದ ಬಂದೂಕಿ­ಗಾಗಿ ಬೇಡಿಕೆ ಕಡಿಮೆಯಾಗುತ್ತದೆ ಎಂಬುದು ಅವರ ಸ್ಪಷ್ಟ ಅಭಿಪ್ರಾಯ.

ಸಾವಿರಾರು ಮಂದಿಗೆ ಬಂದೂಕು ಪರವಾನಗಿಯನ್ನು ನೀಡುವುದು ಕೂಡ ಗುರುತರವಾದ ಕೆಲಸ. ಅಷ್ಟೊಂದು ಮಂದಿಯ ಬಳಿ ಬಂದೂಕು ಇರುವ ಸನ್ನಿವೇಶವೂ ಕೂಡ ಒಳ್ಳೆಯದಲ್ಲ. ಹೀಗಾಗಿ ಅತ್ಯಂತ ಎಚ್ಚರಿಕೆಯಿಂದ ಪರವಾನಗಿ ನೀಡಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಅರ್ಜಿದಾರರ ಕುರಿತು ಹಾಗೂ ಅವರು ಪರವಾನಗಿಗಾಗಿ ನೀಡು­ತ್ತಿರುವ ಕಾರಣಗಳ ಕುರಿತು ಕಟ್ಟುನಿಟ್ಟಿನ ಪರಿಶೀಲನೆಯನ್ನೂ ನಡೆಸಲಾಗುವುದು ಎಂದು ಅವರು ಮಂಗಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಬಂದೂಕನ್ನು ಹೊಂದುವುದು ಕೂಡ ಗುರುತರವಾದ ಜವಾಬ್ದಾರಿ. ಹೀಗಾಗಿ ಬಂದೂಕಿಗಾಗಿ ಅರ್ಜಿ ಸಲ್ಲಿಸುವವರು ಆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಅವರು ಅಭಿಪ್ರಾಯ­ಪಟ್ಟರು.

ಬಂದೂಕು ಪರವಾನಗಿಗಾಗಿ ಅರ್ಜಿ ಸಲ್ಲಿಸುವವರಿಗೆ ಸಂಬಂಧಿಸಿದ ಸುಮಾರು 10ರಿಂದ 15 ಅಂಶಗಳ ಕುರಿತು ಪೊಲೀಸ್‌ ಸಿಬ್ಬಂದಿ ತೀಕ್ಷ್ಣ ತಪಾಸಣೆ ನಡೆಸುತ್ತಾರೆ. ಮುಖ್ಯವಾಗಿ ಅವರಿಗೆ ಜೀವ ಬೆದರಿಕೆ ಇದೆಯೇ ಎಂಬುದನ್ನು ಗಮನಿಸುತ್ತಾರೆ. ಈ ಅಂಶವೂ ಸೇರಿದಂತೆ, ಪರವಾನಗಿ ಹೊಂದಲು ಇರಬೇಕಾದ ಬಹುತೇಕ ಅರ್ಹತೆಗಳನ್ನು ಹೊಂದಿದ್ದರೆ ಮಾತ್ರ  ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಫೆಟ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.