ಕೋಲಾರ: ಬರಗಾಲ ಪೀಡಿತ ಜಿಲ್ಲೆಯಲ್ಲಿ ಬಂದೂಕಿಗಾಗಿ 2 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಒಂಟಿ ಮನೆ ಇರುವುದು ಮತ್ತು ಕಾಡಿನ ಪ್ರದೇಶದಲ್ಲಿರುವುದು ಬಹುತೇಕರು ನೀಡಿರುವ ಪ್ರಮುಖ ಕಾರಣಗಳು. ಆ ಪೈಕಿ ಜೀವಕ್ಕೆ ನಿಜವಾಗಲೂ ಆಪತ್ತು ಇರುವವರೆಷ್ಟು ಮಂದಿ ಎಂದು ಅಂದಾಜಿಸುವುದು ಜಿಲ್ಲಾಡಳಿತಕ್ಕೆ ಸವಾಲಿನ ವಿಷಯ. ಅದರ ಜೊತೆಗೆ, ಬಂದೂಕಿಗಾಗಿ ಕೋರಿಕೆ ಸಲ್ಲಿಸಿ ಜಿಲ್ಲಾಧಿಕಾರಿ ಕಚೇರಿಗೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಪ್ರತಿ ವರ್ಷವೂ ಪೊಲೀಸ್ ಇಲಾಖೆ ಸಾರ್ವಜನಿಕರಿಗಾಗಿ ಬಂದೂಕು ಬಳಸುವ ಕುರಿತು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳುತ್ತದೆ. ಈ ಶಿಬಿರಗಳಲ್ಲಿ ಪಾಲ್ಗೊಂಡವರಿಗೆ ಬಂದೂಕು ನೀಡುವ ವಿಷಯದಲ್ಲಿ ಆದ್ಯತೆ ನೀಡಲಾಗುತ್ತದೆ. ಆದರೆ ಅರ್ಜಿ ಸಲ್ಲಿಸಿದವರಲ್ಲಿ ಬಹಳ ಮಂದಿ ಈ ತರಬೇತಿಯನ್ನು ಪಡೆದಿಲ್ಲ.
ಅರ್ಜಿ ಸಲ್ಲಿಕೆ ಹೇಗೆ?: ಬಂದೂಕು ಪರವಾನಗಿಯನ್ನು ಕೊಡಲು ಜಿಲ್ಲಾಧಿಕಾರಿಗೆ ಮಾತ್ರ ಅಧಿಕಾರವಿದೆ. ಬಂದೂಕು ಹೊಂದಲು ಪರವಾನಗಿ ಪಡೆಯಬೇಕೆನ್ನುವವರು ಮೊದಲು ಅವರಿಗೆ ಅರ್ಜಿ ಸಲ್ಲಿಸಬೇಕು.
ಅವರು ಅದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರವಾನಿಸಿ ಪರವಾನಗಿ ಅಗತ್ಯವಿರುವ ಕುರಿತು ಪರಿಶೀಲಿಸಲು ಸೂಚಿಸುತ್ತಾರೆ. ಅರ್ಜಿಗಳು ನಂತರ ಸಂಬಂಧಿಸಿದ ಠಾಣೆಗಳಿಗೆ ರವಾನೆಯಾಗುತ್ತವೆ. ಅಲ್ಲಿನ ಸಿಬ್ಬಂದಿಯು ಅರ್ಜಿದಾರರ ಸಾಮಾಜಿಕ ಅಂತಸ್ತು, ವೃತ್ತಿ, ಸಮುದಾಯದೊಡನೆ ಅವರ ವ್ಯವಹಾರ ಮೊದಲಾದ ವಿಷಯಗಳನ್ನು ಗಮನಿಸಿ ಅವರಿಗೆ ಆಪತ್ತು ಇದೆಯೇ ಎಂಬುದನ್ನೂ ಗಮನಿಸುತ್ತಾರೆ. ಆ ಬಳಿಕ ಸೂಕ್ತವೆನಿಸಿದರೆ ಮಾತ್ರ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿ ಅರ್ಜಿಗಳನ್ನು ರವಾನಿಸುತ್ತಾರೆ. ನಂತರ ಜಿಲ್ಲಾಧಿಕಾರಿಗಳು ತಮ್ಮ ವಿವೇಚನಾಧಿಕಾರ ಬಳಸಿ ಪರವಾನಗಿಯನ್ನು ಮಂಜೂರು ಮಾಡುತ್ತಾರೆ.
ಆ ನಂತರ ಪೊಲೀಸ್ ಇಲಾಖೆಯ ವತಿಯಿಂದ ಬಂದೂಕನ್ನು ನೀಡಲಾಗುತ್ತದೆ. ಕಾಲಕಾಲಕ್ಕೆ ಬಂದೂಕು ಪರವಾನಗಿು ನವೀಕರಿಸುವುದು ಕಡ್ಡಾಯ.
2 ಸಾವಿರ ಅರ್ಜಿ: ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ಮುಂದೆ ಈಗ 2 ಸಾವಿರ ಅರ್ಜಿಗಳಿವೆ. ಅವುಗಳ ಪೈಕಿ ಅರಣ್ಯ ಪ್ರದೇಶದ ಅಂಚಿನಲ್ಲಿ ಇರುವವರು ಮತ್ತು ಒಂಟಿ ಮನೆಗಳಲಿ್ಲ ಇರುವವರ ಅರ್ಜಿಗಳೇ ಹೆಚ್ಚು ಇವೆ.
ಅರಣ್ಯಪ್ರದೇಶದ ಅಂಚಿನಲ್ಲಿರುವವರ ಕ್ಷೇಮವನ್ನು ಅರಣ್ಯ ಇಲಾಖೆ ನೋಡಿಕೊಳ್ಳಬೇಕು. ಒಂಟಿ ಮನೆಗಳ ಕ್ಷೇಮವನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಸನ್ನಿವೇಶ ಹೀಗಿರುವಾಗ ಬಂದೂಕಿನ ಅಗತ್ಯವೇನು ಎಂಬುದು ಅವರ ಪ್ರಶ್ನೆ.
ಸಾರ್ವಜನಿಕರೇ ಬಂದೂಕು ಬೇಕು ಎಂದು ಕೇಳಿದರೆ, ಅರಣ್ಯ ಮತ್ತು ಪೊಲೀಸ್ ಇಲಾಖೆ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಗಂಭೀರವಾಗಿ ಪರಿಶೀಲಿಸಬೇಕಾಗುತ್ತದೆ. ಈ ಎರಡೂ ಇಲಾಖೆಗಳು ಸಮರ್ಪಕವಾಗಿ ಕೆಲಸ ಮಾಡಿದರೆ ಸಾರ್ವಜನಿಕರಿಂದ ಬಂದೂಕಿಗಾಗಿ ಬೇಡಿಕೆ ಕಡಿಮೆಯಾಗುತ್ತದೆ ಎಂಬುದು ಅವರ ಸ್ಪಷ್ಟ ಅಭಿಪ್ರಾಯ.
ಸಾವಿರಾರು ಮಂದಿಗೆ ಬಂದೂಕು ಪರವಾನಗಿಯನ್ನು ನೀಡುವುದು ಕೂಡ ಗುರುತರವಾದ ಕೆಲಸ. ಅಷ್ಟೊಂದು ಮಂದಿಯ ಬಳಿ ಬಂದೂಕು ಇರುವ ಸನ್ನಿವೇಶವೂ ಕೂಡ ಒಳ್ಳೆಯದಲ್ಲ. ಹೀಗಾಗಿ ಅತ್ಯಂತ ಎಚ್ಚರಿಕೆಯಿಂದ ಪರವಾನಗಿ ನೀಡಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಅರ್ಜಿದಾರರ ಕುರಿತು ಹಾಗೂ ಅವರು ಪರವಾನಗಿಗಾಗಿ ನೀಡುತ್ತಿರುವ ಕಾರಣಗಳ ಕುರಿತು ಕಟ್ಟುನಿಟ್ಟಿನ ಪರಿಶೀಲನೆಯನ್ನೂ ನಡೆಸಲಾಗುವುದು ಎಂದು ಅವರು ಮಂಗಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಬಂದೂಕನ್ನು ಹೊಂದುವುದು ಕೂಡ ಗುರುತರವಾದ ಜವಾಬ್ದಾರಿ. ಹೀಗಾಗಿ ಬಂದೂಕಿಗಾಗಿ ಅರ್ಜಿ ಸಲ್ಲಿಸುವವರು ಆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಬಂದೂಕು ಪರವಾನಗಿಗಾಗಿ ಅರ್ಜಿ ಸಲ್ಲಿಸುವವರಿಗೆ ಸಂಬಂಧಿಸಿದ ಸುಮಾರು 10ರಿಂದ 15 ಅಂಶಗಳ ಕುರಿತು ಪೊಲೀಸ್ ಸಿಬ್ಬಂದಿ ತೀಕ್ಷ್ಣ ತಪಾಸಣೆ ನಡೆಸುತ್ತಾರೆ. ಮುಖ್ಯವಾಗಿ ಅವರಿಗೆ ಜೀವ ಬೆದರಿಕೆ ಇದೆಯೇ ಎಂಬುದನ್ನು ಗಮನಿಸುತ್ತಾರೆ. ಈ ಅಂಶವೂ ಸೇರಿದಂತೆ, ಪರವಾನಗಿ ಹೊಂದಲು ಇರಬೇಕಾದ ಬಹುತೇಕ ಅರ್ಹತೆಗಳನ್ನು ಹೊಂದಿದ್ದರೆ ಮಾತ್ರ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಫೆಟ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.