ADVERTISEMENT

ಜನಗಣತಿಯಲ್ಲಿ ಲೋಪ ಬೇಡ: ಭಕ್ತವತ್ಸಲಂ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 8:50 IST
Last Updated 21 ಜನವರಿ 2011, 8:50 IST

ಕೆಜಿಎಫ್: ಜನಗಣತಿ ಆಧಾರದ ಮೇರೆಗೆ ಸರ್ಕಾರದ ಯೋಜನೆ ರೂಪಿತವಾಗುವುದರಿಂದ ಜನಗಣತಿ ಯಾವುದೇ ಲೋಪಗಳಿಲ್ಲದೆ ನಡೆಯಬೇಕು ಎಂದು ಮಾಜಿ ಶಾಸಕ ಎಂ.ಭಕ್ತವತ್ಸಲಂ ಹೇಳಿದರು.

ಪಟ್ಟಣದ ಮಹಾವೀರ್ ಜೈನ್ ಕಾಲೇಜಿನಲ್ಲಿ ಗುರುವಾರ ನಡೆದ ಜನಗಣತಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಜನಗಣತಿಯಂತಹ ಕಾರ್ಯಕ್ರಮಕ್ಕೆ ಶಿಕ್ಷಕರನ್ನೇ ಹೆಚ್ಚಾಗಿ ಉಪಯೋಗಿಸಿಕೊಳ್ಳುವುದರಿಂದ ಅವರ ವೃತ್ತಿಗೌರವಕ್ಕೆ ಕುಂದು ಬರುತ್ತಿದೆ. ಇಂತಹ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಶಿಕ್ಷಕರ ಪಾತ್ರದ ಬಗ್ಗೆ ಮರು ಚಿಂತನೆ ನಡೆಸಬೇಕು ಎಂದರು.

ಜನಗಣತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಗಣತಿದಾರರಿಗೂ ಸರಿಯಾದ ಸಮಯದಲ್ಲಿ ಚೆಕ್ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ನಗರಸಭೆ ಅಧ್ಯಕ್ಷ ದಯಾನಂದ ಹೇಳಿದರು.ತರಗತಿ ಹಾಗೂ ಗಣತಿಯನ್ನು ಏಕಕಾಲದಲ್ಲಿ ನಡೆಸಿಕೊಂಡು ಹೋಗುವುದು ಕಷ್ಟ. ರಾಷ್ಟ್ರೀಯ ಕಾರ್ಯಕ್ರಮವಾದ್ದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಗಣತಿ ಯಶಸ್ವಿಗೊಳಿಸಬೇಕು ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಹ್ಲಾದಗೌಡ ತಿಳಿಸಿದರು.

ಜಿಲ್ಲೆಯಲ್ಲಿ ಎರಡನೇ ಹಂತದ ತರಬೇತಿ ಶಿಬಿರ ಮೊದಲ ಬಾರಿಗೆ ಕೆಜಿಎಫ್‌ನಲ್ಲಿ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಅಧಿಕಾರಿ ಅನ್ಬಾನಂದನ್ ಹೇಳಿದರು.ನಗರಸಭೆ ಆಯುಕ್ತ ಭೀಮನೇಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಚಾರ್ಜ್ ಅಧಿಕಾರಿಗಳಾದ ಶ್ರೀರಾಮರೆಡ್ಡಿ, ಇನಾಯತುಲ್ಲಾ, ಅಶ್ವಥ್ ಹಾಜರಿದ್ದರು. ಸುಮಾರು 400 ಶಿಬಿರಾರ್ಥಿಗಳು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.